ರಾಹುಲ್ ವಿರುದ್ಧ ಸಮರಕ್ಕೆ ಸೋಲಾರ್ ಹಗರಣದ ಆರೋಪಿ ಸರಿತಾ
ತಿರುವನಂತಪುರಂ, ಏಪ್ರಿಲ್ 03: ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಕೇರಳದಲ್ಲಿ ಚುನಾವಣಾ ಕಣ ರಂಗೇರಿದೆ. ಈಗ ವಯನಾಡಿನಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಲು ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಅರೋಪಿ ಸರಿತಾ ನಾಯರ್ ಸಜ್ಜಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೇರಳದ ಕಾಂಗ್ರೆಸ್ ನಾಯಕರಿಂದ ನನಗೆ ಅನ್ಯಾಯವಾಗಿದೆ. ಈ ಬಗ್ಗೆ ಅನೇಕ ಸಲ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದೆ. ಆದರೆ, ಪ್ರಧಾನಿಯಾಗುವ ಕನಸು ಹೊತ್ತಿರುವ ವ್ಯಕ್ತಿಗೆ ನನ್ನಂತ ಮಹಿಳೆಯ ಆರ್ತನಾದ ಕೇಳಿಸಲೆ ಇಲ್ಲ. ಇದಕ್ಕಾಗಿ ನಾನು ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಯುತ್ತಿದ್ದೇನೆ ಎಂದು ಸರಿತಾ ನಾಯರ್ ಹೇಳಿದ್ದಾರೆ.
ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.
ಸೋಲಾರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?
ಇದೇ ಪ್ರಕರಣದ ಮುಂದುವರೆದ ಭಾಗವಾಗಿ, ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರನ್ನು ಸಿಎಂ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್. ನಾಯರ್ ಅವರಿಗೆ 3 ವರ್ಷ ಶಿಕ್ಷೆಯಾಗಿದೆ.
ಎರಡು ಕ್ಷೇತ್ರಗಳಲ್ಲಿ ಸರಿತಾ ನಾಯರ್ ಸ್ಪರ್ಧೆ
ವಯನಾಡಿನಲ್ಲಿ ಸ್ಪರ್ಧೆ ಘೋಷಣೆಗೂ ಮುನ್ನ ಸರಿತಾ ಎಸ್. ನಾಯರ್ ಎರ್ನಾಕುಲಂ ಕ್ಷೇತ್ರದಲ್ಲೂ ನಾಮಪತ್ರ ಸಲ್ಲಿಸಿದ್ದಾರೆ. ನಾನು ಸಂಸದೆಯಾಗಿ ಲೋಕಸಭೆಯಲ್ಲಿ ಕುಳಿತುಕೊಳ್ಳುವ ಆಸೆಯಿಲ್ಲ, ಆ ಉದ್ದೇಶದಿಂದ ಸ್ಪರ್ಧಿಸುತ್ತಿಲ್ಲ.
ಸೋಲರ್ ಹಗರಣದಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿರುವ ಹಿಬಿ ಈಡೆನ್ ವಿರುದ್ಧ ಕೂಡಾ ಸರಿತಾ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದ ವೇಳೆ ಇವರ ವಿರುದ್ಧ ತಾವು ನಡೆಸುವ ವಾಗ್ದಾಳಿ ಅಧಿಕೃತವಾಗಿ ದಾಖಲಾಗಬೇಕು ಎಂಬ ಬಯಕೆ ಹೊಂದಿದ್ದಾರೆ.
ಕಾರ್ಪೊರೇಟ್ ಲಾಬಿಗಾರ್ತಿಯಾಗಿದ್ದ ಸರಿತಾ
ಸೋಲಾರ್ ಪ್ಯಾನೆಲ್ ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಅವರ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಅವರು ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಅಂದಿನ ಕೇರಳ ಸಿಎಂ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಆರೋಪ ಹೊತ್ತುಕೊಂಡಿದ್ದರು. ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದರು. ಪೊಲೀಸರು ಈವರೆಗೆ 60,000 ಕ್ಕೂ ಅಧಿಕ ಫೋನ್ ಕರೆಯನ್ನು ಪರೀಕ್ಷಿಸಬೇಕಾಗಿತ್ತು. ಸರಿತಾ ಬಳಿ ಸುಮಾರು 6 ಫೋನ್ ಗಳಿದ್ದು ಅವುಗಳಲ್ಲಿನ ಕರೆಗಳನ್ನು ತನಿಖೆಗೊಳಪಡಿಸಲಾಗಿತ್ತು. ಲಂಚ ಪ್ರಕರಣದಲ್ಲಿ ಶಿಕ್ಷೆಯಾಯಿತು.
ಜಸ್ಟೀಸ್ ಶಿವರಾಜ್ ಆಯೋಗದ ಮುಂದೆ ಹೇಳಿಕೆ
ಕೇರಳದ ಅಂದಿನ ಸಿಎಂ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯ ಆರ್ಯದಾನ್ ಮೊಹಮ್ಮದ್ ಅವರು 1.90 ಕೋಟಿ ರು ಲಂಚ ಕೇಳಿದ್ದರು. ಲಂಚದ ಮೊತ್ತ ಪಾವತಿಸಿದ ಮೇಲೆ ಬಹುಕೋಟಿ ಸೋಲಾರ್ ಯೋಜನೆಯನ್ನು ವಹಿಸಲಾಯಿತು. ಇದಲ್ಲದೆ ಇಂಧನ ಸಚಿವ ಅರ್ಯದಾನ್ ಮೊಹಮ್ಮದ್ ಅವರ ಪಿಎಗೂ 40 ಲಕ್ಷ ರು ಲಂಚ ನೀಡಲಾಗಿದೆ ಎಂದು ಸರಿತಾ ಹೇಳಿದ್ದಾರೆ. ಚಾಂಡಿ ಅವರ ಮಾಜಿ ಪಿಎ ಜಿಕುಮೊನ್ ಅವರಿಂದ 7 ಕೋಟಿ ರು ಲಂಚ ಬೇಡಿಕೆ ಬಂದಿತ್ತು. ಈ ಮೊತ್ತವನ್ನು ಚಾಂಡಿ ಅವರ ಅನಧಿಕೃತ ಸಾಥಿ ದೆಹಲಿ ನಿವಾಸಿ ಕುರುವಿಲ್ಲ ಎಂಬುವವರಿಗೆ ನೀಡಬೇಕಿತ್ತು ಎಂದು ಸರಿತಾ ಹೇಳಿಕೆ ನೀಡಿದ್ದರು. ಸರಿತಾ ವಿರುದ್ಧ ಸರಿ ಸುಮಾರು 28 ಕ್ರಿಮಿನಲ್ ಕೇಸುಗಳು ಬಾಕಿ ಇವೆ.
ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು
ಲೈಂಗಿಕ ಕಿರುಕುಳಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ
ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಸರಿತಾ ಯಾವುದೇ ಹೇಳಿಕೆ ನೀಡಿಲ್ಲ. ಹಾಗೂ ಯಾವುದೇ ಸಾಕ್ಷಿ ಲಭ್ಯವಾಗಿರಲಿಲ್ಲ
ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ 2016ರಲ್ಲಿ ಕೊಚ್ಚಿ ನ್ಯಾಯಾಲಯವು ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿತ್ತು.