ಬಹುಕೋಟಿ ಸೌರಶಕ್ತಿ ಫಲಕ ಹಗರಣ, ಸರಿತಾ ನಾಯರ್ಗೆ ಶಿಕ್ಷೆ
ತಿರುವನಂತಪುರಂ, ಏಪ್ರಿಲ್ 28: ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಆರೋಪಿ ಸರಿತಾ ನಾಯರ್ಗೆ ಶಿಕ್ಷೆಯಾಗಿದೆ. ಕೋಳಿಕ್ಕೋಡ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ 3ನೇ ನ್ಯಾಯಾಲಯವು 6 ವರ್ಷಗಳ ಶಿಕ್ಷೆ ಪ್ರಕಟಿಸಿದೆ.
ಈ ಹಿಂದಿನ ಉಮ್ಮನ್ ಚಾಂಡಿ ಸರ್ಕಾರವನ್ನು ಅಲ್ಲಾಡಿಸಿದ್ದ ಸೌರಶಕ್ತಿ ಫಲಕ ಹಗರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದಲ್ಲಿ ಫಲಕಗಳನ್ನು ಸ್ಥಾಪಿಸಲು ಆರ್ಡರ್ ಪಡೆದು ವಂಚಿಸಿದ ಆರೋಪದ ಮೇಲೆ ಸರಿತಾ ನಾಯರ್ (ಎ2) ಅವರಿಗೆ 6 ವರ್ಷ ಜೈಲುಶಿಕ್ಷೆ 40, 000 ರು ದಂಡ ವಿಧಿಸಲಾಗಿದೆ.
ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು
ಈ ಪ್ರಕರಣದಲ್ಲಿ ಬಿಜು ರಾಧಾಕೃಷ್ಣನ್ ಮೊದಲ ಆರೋಪಿಯಾಗಿದ್ದು, ವಿವಿಧ ಪ್ರಕರಣಗಳಲ್ಲಿ ಅಪರಾಧಿ ಎನಿಸಿ ಜೈಲಿನಲ್ಲಿದ್ದು, ಕೋವಿಡ್ ಕಾರಣ ಕ್ವಾರಂಟೈನ್ನಲ್ಲಿರಿಸಲಾಗಿದೆ. ಕಳೆದ ವಾರ ತಿರುವನಂತಪುರಂನಲ್ಲಿ ಸರಿತಾರನ್ನು ಬಂಧಿಸಲಾಗಿತ್ತು. ಕೋಳಿಕ್ಕೋಡ್ ಅಲ್ಲದೆ, ಆಳಪ್ಪುಳ, ಪಥನಂತಿಟ್ಟ ನ್ಯಾಯಾಲಯಗಳಿಂದಲೂ ಸರಿತಾ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ದೂರು ನೀಡಿದ್ದು ಯಾರು?
ಬಿಜು ರಾಧಾಕೃಷ್ಣನ್, ಸರಿತಾ ಹಾಗೂ ಮಣಿಮೊನ್ ಎಂಬುವರ ವಿರುದ್ಧ ಕೋಳಿಕ್ಕೋಡ್ ಕಸಬಾ ಪೊಲೀಸರ ಬಳಿ ಅಬ್ದುಲ್ ಮಜೀದ್ ಎಂಬ ಉದ್ಯಮಿ ವಂಚನೆ ಪ್ರಕರಣ ದಾಖಲಿಸಿದ್ದ. ಈ ಮೂವರು 42 ಲಕ್ಷ ರು ಪಡೆದು ಸೌರಫಲಕ ಅಳವಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಕೋಳಿಕ್ಕೋಡ್, ಕಣ್ಣೂರ್, ಮಲಪ್ಪುರಂ, ವಯನಾಡು ಸೇರಿದಂತೆ ಹಲವೆಡೆ ಬಿಜು- ಸರಿತಾ ಸೌರಶಕ್ತಿ ಫಲಕ ಕಚೇರಿ ಹೊಂದಿದ್ದರು ಹಾಗೂ ಉದ್ಯಮಿ, ರಾಜಕಾರಣಿಗಳನ್ನು ವಂಚಿಸಿದ್ದಾರೆ.
2018ರಿಂದ ಪ್ರಕರಣದ ವಿಚಾರಣೆ
2012ರಲ್ಲಿ ಉದ್ಯಮಿ ಅಬ್ದುಲ್ ದೂರು ನೀಡಿದ್ದರು. 2018ರಿಂದ ಮೂರನೇ ಆರೋಪಿ ಮಣಿಯೊನ್ ಖುಲಾಸೆಗೊಂಡಿದ್ದರೆ, ಸರಿತಾಗೆ ಶಿಕ್ಷೆಯಾಗಿದೆ. ಇನ್ನು 30ಕ್ಕೂ ಅಧಿಕ ವಂಚನೆ ಪ್ರಕರಣಗಳು ಸರಿತಾ ಹಾಗೂ ಬಿಜು ಮೇಲಿದೆ. ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಬಿಜು ಸದ್ಯ ಜೈಲಿನಲ್ಲಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಚಾಂಡಿ ವಿರುದ್ಧ ಆರೋಪ:
ಕೇರಳ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಬಿಜು ರಾಧಾಕೃಷ್ಣನ್ ಆರೋಪಿಸಿದ್ದರು. ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಆರೋಪ ಹೊತ್ತುಕೊಂಡಿದ್ದರು. ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ 60,000 ಕ್ಕೂ ಅಧಿಕ ಫೋನ್ ಕರೆ ದಾಖಲೆಯನ್ನು ಪೊಲೀಸರು ಪರೀಕ್ಷಿಸಿದ್ದರು. ಸರಿತಾ ಬಳಿಯಿದ್ದ 6 ಫೋನ್ಗಳಲ್ಲಿನ ಕರೆಗಳನ್ನು ತನಿಖೆಗೊಳಪಡಿಸಲಾಗಿತ್ತು.
ಜಸ್ಟೀಸ್ ಶಿವರಾಜನ್ ಆಯೋಗದ ಎದುರು ಹೇಳಿಕೆ
ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದರು. ಸರಿತಾ ಅವರು ಜಸ್ಟೀಸ್ ಶಿವರಾಜನ್ ಆಯೋಗದ ಎದುರು ಹೇಳಿಕೆ ನೀಡಿದ್ದರು. ಉಮ್ಮನ್ ಚಾಂಡಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು.