ಕಣ್ಣೂರ್ ನ ಮತದಾನ ಕೇಂದ್ರದ ವಿವಿ ಪ್ಯಾಟ್ ನೊಳಗೆ ಹಾವು
ಕಣ್ಣೂರ್ (ಕೇರಳ), ಏಪ್ರಿಲ್ 23: ಕೇರಳ ರಾಜ್ಯದ ಕಣ್ಣೂರ್ ಲೋಕಸಭಾ ಕ್ಶೇತ್ರ ವ್ಯಾಪ್ತಿಯಲ್ಲಿ ಮತದಾನದ ವೇಳೆ 'ಅಪರೂಪದ ಅತಿಥಿ' ಕಾಣಿಸಿಕೊಂಡ ಪರಿಣಾಮ ಮಂಗಳವಾರದಂದು ಕೆಲ ಕಾಲ ಮತದಾನವನ್ನೇ ನಿಲ್ಲಿಸಿದ ಘಟನೆ ನಡೆದಿದೆ. ಕಣ್ಣೂರ್ ಕ್ಷೇತ್ರ ವ್ಯಾಪ್ತಿಯ ಮಯ್ಯಿಲ್ ಕಂದಕೈನ ಮತದಾನ ಕೇಂದ್ರದಲ್ಲಿದ್ದ ವಿವಿ ಪ್ಯಾಟ್ ನೊಳಗೆ ಸಣ್ಣ ಹಾವು ಕಾಣಿಸಿಕೊಂಡಿದೆ.
ಇಲ್ಲಿ ಭಾರೀ ಪ್ರಮಾಣದ ಮತದಾನ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಮತದಾರರಲ್ಲಿ ಆತಂಕಕ್ಕೆ ಕಾರಣವಾಯಿತು. ಕೂಡಲೇ ಹಾವನ್ನು ಹಿಡಿದು, ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟ ನಂತರವೇ ಮತದಾನ ಮತ್ತೆ ಆರಂಭವಾಯಿತು. ಕಣ್ಣೂರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾದ ಪಿ.ಕೆ.ಶ್ರೀಮಥಿ (ಸಿಪಿಎಂ-ಎಲ್ ಡಿಎಫ್), ಕೆ.ಸುರೇಂದ್ರನ್ (ಕಾಂಗ್ರೆಸ್-ಯುಡಿಎಫ್) ಹಾಗೂ ಸಿ.ಕೆ.ಪದ್ಮನಾಭನ್ (ಬಿಜೆಪಿ-ಎನ್ ಡಿಎ) ಕಣದಲ್ಲಿದ್ದಾರೆ.
ಲೋಕಸಭೆ ಚುನಾವಣೆ LIVE: ಕೇರಳದ ಕಣ್ಣೂರಿನ ಮತಗಟ್ಟೆಯಲ್ಲಿ ಹಾವು ಪ್ರತ್ಯಕ್ಷ
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಕೇರಳ ರಾಜ್ಯದ ವಯನಾಡು ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಣದಲ್ಲಿದ್ದು, ಆ ಕಾರಣಕ್ಕೆ ಇಡೀ ದೇಶದ ಚಿತ್ತ ಈಗ ಕೇರಳ ರಾಜ್ಯದ ಮೇಲಿದೆ. ರಾಹುಲ್ ಗಾಂಧಿ ಅವರು ಉತ್ತರಪ್ರದೇಶದ ಅಮೇಥಿ ಜತೆಗೆ ವಯನಾಡುನಿಂದ ಸ್ಪರ್ಧಿಸುತ್ತಿದ್ದಾರೆ.