ಒಂದೇ ರಾತ್ರಿಯಲ್ಲಿ ಕೋಟ್ಯಧಿಪತಿಗಳಾದ ಕೇರಳದ ಆರು ಸೇಲ್ಸ್ಮನ್ಗಳು
ತಿರುವನಂತಪುರಂ, ಸೆಪ್ಟೆಂಬರ್ 20: ಅದೃಷ್ಟ ಬಂದರೆ ಹೀಗೆಯೇ ಬರಬೇಕು, ಇಂಥವರಿಗೇ ಬರಬೇಕು. ಬುಧವಾರ (ಸೆಪ್ಟೆಂಬರ್ 18) ರಾತ್ರಿಯ ವರೆಗೆ ರಸ್ತೆ ಬದಿ ಊಟ ಮಾಡಿ, ಕಿಷ್ಕಿಂದೆಯಂತಹ ಮನೆಯಲ್ಲಿ ಮಲಗಿ, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಕೇರಳದ ಆರು ಮಂದಿ ಸೇಲ್ಸ್ಮನ್ಗಳು ಗುರುವಾರ ಬೆಳಿಗ್ಗೆ ವೇಳೆಗೆ ಕೋಟ್ಯಧಿಪತಿಗಳಾಗಿದ್ದಾರೆ.
ತಿರು ಓಣಂ ಹಬ್ಬಕ್ಕೆಂದು ಕೇರಳ ಲಾಟರೀಸ್ ಇಲಾಖೆ ಈ ಬಾರಿ 12 ಕೋಟಿ ಮೌಲ್ಯದ ಬೃಹತ್ ಲಾಟರಿ ನಡೆಸಿತ್ತು, ಇದರ ಫಲಿತಾಂಶ ಗುರುವಾರ ಪ್ರಕಟವಾಯಿತು, 12 ಕೋಟಿ ಬಹುಮಾನ ಕೇರಳದ ಕೊಲ್ಲಂ ಬಳಿಯ ಕರುನಾಗಪಲ್ಲಿಯ ಆರು ಮಂದಿ ಸೇಲ್ಸ್ ಮನ್ಗಳ ಪಾಲಾಗಿದೆ.
ಅದೃಷ್ಟ ಅಂದರೆ ಇದೆ: ಎರಡು ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಯಿತು!
ಕರುನಾಗಪಲ್ಲಿಯಲ್ಲಿ ಆಭರಣ ಅಂಗಡಿಯ ಸೇಲ್ಸ್ಮನ್ಗಳಾಗಿದ್ದ ರಾಜೀವನ್, ರಾಮ್ಜಿಮ್, ರೋನಿ, ವಿವೇಕ್, ಸುಬಿನ್, ರತೀಶ್ ಬುಧವಾರ ರಾತ್ರಿಯಷ್ಟೆ ತಿರು ಓಣಂ ಬಂಪರ್ ಲಾಟರಿಯ ಎರಡು ಟಿಕೆಟ್ಗಳನ್ನು ಖರೀದಿಸಿದ್ದರು. ಬೆಳಿಗ್ಗೆ ಎದ್ದು ನೋಡಿದರೆ ಒಂದು ಟಿಕೆಟ್ಗೆ ಬಂಪರ್ ಲಾಟರಿ ಹೊಡೆದಿದೆ.
TM 160869 ಸಂಖ್ಯೆಗೆ ಬಂಪರ್ ಲಾಟರಿ ಹೊಡೆದಿದ್ದು, ಆರೂ ಮಂದಿ ಸೇಲ್ಸ್ಮನ್ಗಳು ಸೇರಿ ಖರೀದಿಸಿದ್ದ ಲಾಟರಿ ಟಿಕೆಟ್ ಇದು. ಮೊದಲಿಗೆ ಕೇವಲ ಮೂರು ಮಂದಿ ಮಾತ್ರ ಲಾಟರಿ ಖರೀದಿಸುವ ಯೋಜನೆ ಮಾಡಿದ್ದರು. ಕೊನೆಗೆ ಆರು ಮಂದಿ ಸೇರಿ ಲಾಟರಿ ಖರೀದಿಸಿದರು. ಈಗ ಅವರ ಅದೃಷ್ಟವೇ ಬದಲಾಗಿದೆ.
12 ಕೋಟಿ ಹಣವೂ ಇವರ ಕೈ ಸೇರುವುದಿಲ್ಲ
12 ಕೋಟಿ ಬಂಪರ್ ಬಹುಮಾನ ಹೊಡೆದಿದೆಯಾದರೂ ಅಷ್ಟೂ ಹಣ ಇವರ ಕೈಸೇರುವುದಿಲ್ಲ. ಎಲ್ಲ ತೆರಿಗೆಗಳು ಕಡಿತವಾಗಿ 7.5 ಕೋಟಿ ಮಾತ್ರ ಬಹುಮಾನದ ಮೊತ್ತ ಕೈಗೆ ಸಿಗುತ್ತದೆ. ಅಂದರೆ ಪ್ರತಿಯೊಬ್ಬರಿಗೆ ಸುಮಾರು 1.5 ಕೋಟಿಗಳಷ್ಟು ಹಣ ದೊರಕಬಹುದು.
ಬಹುಮಾನ ಬಂದಿರುವುದು ನಂಬಲೇ ಆಗಲಿಲ್ಲ: ಸುಬಿನ್
''ನಾವು ತೆಗೆದುಕೊಂಡ ಟಿಕೆಟ್ಗೆ ಬಹುಮಾನ ಬಂದಿದೆ ಎಂದು ಮೊದಲು ನಂಬಲೇ ಆಗಲಿಲ್ಲ, ಬಹಳ ಆಶ್ಚರ್ಯವಾಗಿತ್ತು, ಕೊಂಡ ಟಿಕೆಟ್ ನನ್ನ ಬಳಿಯೇ ಇತ್ತು, ಗೆಳೆಯರು ಬಂದು ಹೇಳಿದಾಗ ಸುಳ್ಳು ಹೇಳುತ್ತಿದ್ದಾರೆ ಎಂದು ಎನಿಸಿತು, ಆದರೆ ಮತ್ತೆ ಪರಿಶೀಲಿಸಿದಾಗ ನಿಜವಾಗಿತ್ತು'' ಎಂದು ಖುಷಿಯಿಂದ ಮಾಧ್ಯಮಗಳಿಗೆ ವಿಷಯ ಹಂಚಿಕೊಂಡಿದ್ದಾರೆ ಲಾಟರಿ ವಿಜೇತರಲ್ಲಿ ಒಬ್ಬರಾದ ಸುಬಿನ್.
ಹೊಡೆದರೆ ಹೀಗೆ ಹೊಡೀಬೇಕು ಲಕ್ಕು, ಬಡವನಿಗೆ ಸಿಕ್ತು ಭಾರಿ ವಜ್ರದ ತುಣುಕು
ಬುಧವಾರ ರಾತ್ರಿ ಟಿಕೆಟ್ ಕೊಂಡಿದ್ದೆವು: ಸುಬಿನ್
'ಆರೂ ಜನ ಸಮನಾಗಿ ಹಣ ಕೊಟ್ಟು ಟಿಕೆಟ್ ಖರೀದಿಸಿದೆವು, ಗುರುವಾರವೇ ಡ್ರಾ ಇದ್ದ ಕಾರಣ ಬುಧವಾರ ರಾತ್ರಿ ಟಿಕೆಟ್ ಕೊಂಡುಕೊಂಡೆವು. ಇದೀಗ ಅದಕ್ಕೆ ಲಾಟರಿ ಹೊಡೆದಿದೆ. ಬಹುಮಾನ ಬಂದಿದ್ದು ಗೊತ್ತಾದ ಕೂಡಲೇ ಟಿಕೆಟ್ ಅನ್ನು ಹತ್ತಿರದ ಎಸ್ಬಿಐ ನ ಲಾಕರ್ನಲ್ಲಿ ಇರಿಸಿದ್ದೇವೆ' ಎಂದು ಅವರು ವಿವರಿಸಿದ್ದಾರೆ.
'ಸ್ವಲ್ಪ ಹಣವನ್ನು ಸಮಾಜ ಸೇವೆಗೂ ಬಳಸುತ್ತೇವೆ'
'ಬಂದ ಹಣವನ್ನೂ ಆರು ಜನ ಸಮಾನವಾಗಿ ಹಂಚಿಕೊಳ್ಳುತ್ತೇವೆ. ಎಲ್ಲ ತೆರಿಗೆಗಳು ಹೋಗಿ ಪ್ರತಿಯೊಬ್ಬರಿಗೂ ಒಂದು ಕೋಟಿಯ ಮೇಲೆ ಒಂದಿಷ್ಟು ಬರುತ್ತದೆ. ನಮ್ಮಲ್ಲಿ ಅನೇಕರಿಗೆ ಸಾಲಗಳಿವೆ ಎಲ್ಲವನ್ನೂ ನಿವಾರಿಸಿಕೊಳ್ಳುತ್ತೇವೆ. ಬಂದ ಹಣದಲ್ಲಿ ಸ್ವಲ್ಪವನ್ನು ಸಮಾಜ ಸೇವೆಗೂ ಬಳಸುವ ಉದ್ದೇಶ ಇದೆ' ಎಂದು ಇದೇ ಗುಂಪಿನ ಮತ್ತೊಬ್ಬರು ಹೇಳಿದ್ದಾರೆ.
ಮಣ್ಣಿನ ಮನೆಯಲ್ಲಿದ್ದವನಿಗೆ ಮೊದಲ ಲಾಟರಿಯಲ್ಲೇ ಕೋಟಿ ರುಪಾಯಿ
ಲಾಟರಿ ಮಾರಿದ ಏಜೆಂಟ್ ಗೂ ಖುಲಾಯಿಸಿದ ಅದೃಷ್ಟ
ಲಾಟರಿ ಈ ಆರು ಜನಕ್ಕೆ ಮಾತ್ರ ಅದೃಷ್ಟ ತಂದಿಲ್ಲ ಬದಲಾಗಿ ಲಾಟರಿ ಟಿಕೆಟ್ ಅನ್ನು ಈ ಸೇಲ್ಸ್ಮೆನ್ಗಳಿಗೆ ಮಾರಿದ ವ್ಯಕ್ತಿಗೂ ಭಾರಿ ಅದೃಷ್ಟವನ್ನೇ ತಂದಿದೆ. ಶ್ರೀ ಮುರುಗ ಎಂಬ ಏಜೆನ್ಸಿಯಿಂದ ಟಿಕೆಟ್ ಅನ್ನು ಖರೀದಿಸಿ ಈ ಹುಡುಗರಿಗೆ ಮಾರಿದ್ದ ಸಬ್ ಏಜೆಂಟ್ ಸಿದ್ಧಿಕಿಗೂ ಒಂದು ಕೋಟಿ ಹಣ ದೊರೆಯುತ್ತಿದೆ. ಗೆದ್ದ ಟಿಕೆಟ್ಗೆ ಕಮೀಷನ್ ಹಣವನ್ನು ಇಲಾಖೆಯೇ ಏಜೆಂಟ್ಗಳಿಗೆ ನೀಡುತ್ತದೆ.
ಹಬ್ಬಗಳಿಗೆ ವಿಶೇಷ ಲಾಟರಿ ನಡೆಸುವ ಕೇರಳ ಸರ್ಕಾರ
ಕೇರಳ ಲಾಟರಿಯು ಕೇರಳ ಸರ್ಕಾರದ ಲಾಭದಾಯಕ ಇಲಾಖೆಗಳಲ್ಲಿ ಮುಖ್ಯವಾದುದು. ಕೇರಳದಲ್ಲಿ ಸರ್ಕಾರವೇ ವಾರದ, ತಿಂಗಳಿನ ಹಾಗೂ ಹಬ್ಬಗಳ ಸಮಯ ವಿಶೇಷ ಲಾಟರಿಗಳನ್ನು ನಡೆಸಿ, ಬಹುಮಾನ ವಿತರಿಸುತ್ತದೆ.