ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ; ಗಾಯಕ ಯೇಸುದಾಸ್ ಏನಂದ್ರು?
ತಿರುವನಂತಪುರ, ಡಿಸೆಂಬರ್ 16: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಶಬರಿಮಲೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಇರಬಾರದು ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.
ಶಬರಿಮಲೆ ಸುತ್ತ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ
'ನಾನೊಬ್ಬ ಅಯ್ಯಪ್ಪ ಸ್ವಾಮಿಯ ಭಕ್ತ. ಹಾಗಾಗಿ ದೇವಸ್ಥಾನದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಆಚರಣೆಗಳನ್ನೂ ನಾನು ಗೌರವಿಸುತ್ತೇನೆ. ಅಯ್ಯಪ್ಪನ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಬಾರದು ಎಂಬುದನ್ನು ನಾನೂ ಕೂಡ ಬೆಂಬಲಿಸುತ್ತೇನೆ. ಸ್ರ್ರೀಯರು ದೇವಸ್ಥಾನಕ್ಕೆ ಬಂದರೇ, ಅಯ್ಯಪ್ಪ ಸ್ವಾಮಿ ಕಣ್ಣು ಬಿಟ್ಟು ಅವರನ್ನೇನು ನೋಡುವುದಿಲ್ಲ. ಆದರೆ, ಅಲ್ಲಿ ಬರುವ ಭಕ್ತರಿಗೆ ಮಹಿಳೆಯರಿದಂದ ವೃಥ ಭಂಗ ಆಗುವ ಸಂದರ್ಭ ಬರಬಹುದು. ಹೀಗಾಗಿ ಸಂಪ್ರದಾಯವನ್ನು ಆಚರಿಸಿಕೊಂಡು ಹೋಗುವುದು ಲೇಸು. ಮಹಿಳೆಯರಿಗೋಸ್ಕರ ಇನ್ನೂ ಸಾಕಷ್ಟು ದೇವಸ್ಥಾನಗಳು ಇವೆ. ಮಹಿಳೆಯರು ಅಲ್ಲಿಗೆ ಹೋಗಲಿ' ಎಂದು ಅವರು ಹೇಳಿದ್ದಾರೆ.
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಮಹಿಳೆಯರಿಗೆ ಪಾರಂಪರಿಕವಾಗಿ ನಿಷಿದ್ಧ ಇದೆ. ಇದನ್ನು ಪ್ರಶ್ನಿಸಿ ಹಲವು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಸುಪ್ರೀಂಕೋರ್ಟ್ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಇದು ಸಾಕಷ್ಟು ವಿವಾದವಾದ ನಂತರ ಅಯ್ಯಪ್ಪ ದೇವಸ್ಥಾನ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಗೆ ಸಲ್ಲಿಸಿದೆ. ಸದ್ಯ ವಿಚಾರಣೆ ನಡೆಯುತ್ತಿದೆ.