ಕೇರಳದಲ್ಲಿ 25 ಕೊರೊನಾ ಸೋಂಕಿತರ ಹಿಂದಿನ ಇತಿಹಾಸ ಭಯಾನಕ!
ತಿರುವನಂತಪುರಂ, ಏಪ್ರಿಲ್.27: ಕೊರೊನಾ ವೈರಸ್ ವಿರುದ್ಧ ಸಮರ ಸಾರುವುದಕ್ಕಾಗಿ ಭಾರತ ಲಾಕ್ ಡೌನ್ ತಂತ್ರವನ್ನು ಅನುಸರಿಸಲಾಗುತ್ತಿದೆ. ಈ ಮಧ್ಯೆ ಕೇರಳದಲ್ಲಿ ಕೊವಿಡ್-19 ಎಂಬ ಮಹಾಮಾರಿ ಮೂರನೇ ಹಂತವನ್ನೂ ಮೀರಿ ಹೋಯಿತಾ ಎಂಬ ಅನುಮಾನ ಹುಟ್ಟುಕೊಂಡಿದೆ.
ದೇವರ ನಾಡು ಕೇರಳದಲ್ಲಿ ಸಮುದಾಯದ ಮಟ್ಟಕ್ಕೆ ಕೊರೊನಾ ವೈರಸ್ ಸೋಂಕು ಹರಡಿ ಬಿಟ್ಟಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುವುದಕ್ಕೂ ಕಾರಣವಿದೆ. ರಾಜ್ಯದಲ್ಲಿ ಇತ್ತೀಚಿಗೆ ಪತ್ತೆಯಾಗಿರುವ 25 ಮಂದಿ ಕೊರೊನಾ ಸೋಂಕಿತರಿಗೆ ಕೊವಿಡ್-19 ಅಂಟಿಕೊಂಡಿದ್ದು ಹೇಗೆ ಎನ್ನುವುದೇ ಗೊತ್ತಾಗಿಲ್ಲ.
ಕೊರೊನಾ ಕಾಟದಿಂದ ಭಾರತದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್?
ಸೋಮವಾರ ಒಂದೇ ದಿನ ಕೇರಳದಲ್ಲಿ 11 ಮಂದಿಗೆ ಸೋಂಕು ತಗಲಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಇದುವರೆಗೂ ಕೊವಿಡ್-19ಗೆ ನಾಲ್ವರು ಬಲಿಯಾಗಿದ್ದು, ಒಟ್ಟು ಸೋಂಕಿತರ ಪೈಕಿ 342 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಉಳಿದ 123 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಇತ್ತೀಚಿನ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ.
ಕೇರಳದಲ್ಲಿ 25 ಸೋಂಕಿತರ ಮೂಲ ಅದ್ಯಾವುದಯ್ಯ?
ಕೇರಳದಲ್ಲಿ 25 ಮಂದಿ ಕೊರೊನಾ ವೈರಸ್ ಸೋಂಕಿತರಿಗೆ ಮಾರಕ ಸೋಂಕು ಹೇಗೆ ಅಂಟಿಕೊಂಡಿತು ಎಂಬುದರ ಮೂಲವೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪತ್ತೆ ಹಚ್ಚುವುದಕ್ಕೆ ಆಗುತ್ತಿಲ್ಲ. ಯಾವ ಸೋಂಕಿತನಿಂದ ಈ 25 ಜನರಿಗೆ ಸೋಂಕು ತಗಲಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಂದಿಗೂ ಸಿಕ್ಕಿಲ್ಲ. ಇದು ರಾಜ್ಯದ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.
ಕೊರೊನಾಗೆ ಬಲಿಯಾದವರ ಸೋಂಕಿನ ಮೂಲ ನಿಗೂಢ
ಕೇರಳದ ಕೊಜಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಹಸುಗೂಸು ಪ್ರಾಣ ಬಿಟ್ಟತು. ಈ ಕಂದಮ್ಮನಿಗೆ ಕೊರೊನಾ ವೈರಸ್ ಹೇಗೆ ಅಂಟಿಕೊಂಡಿತು ಎನ್ನುವುದೇ ಈವರೆಗೂ ಪತ್ತೆಯಾಗಿಲ್ಲ. ಕಣ್ಣೂರಿನಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಪರಿಯಾರಮ್ ವೈದ್ಯಕೀಯ ಕಾಲೇಜಿನಲ್ಲಿ 71 ವರ್ಷದ ವೃದ್ಧರೊಬ್ಬರು ಕೊರೊನಾ ವೈರಸ್ ಗೆ ಬಲಿಯಾಗಿದ್ದರು. ಆದರೆ ಈ ಇಬ್ಬರ ಸಾವಿನ ಹಿಂದಿನ ರಹಸ್ಯ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಸೋಂಕಿತರಿಗೆ ಕೊರೊನಾ ಅಂಟಿಕೊಂಡಿದ್ದು ಹೇಗೆ ಎನ್ನುವುದೇ ಪತ್ತೆಯಾಗಿಲ್ಲ.
ಕೇರಳ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಕಳೆದ ಏಪ್ರಿಲ್.21ರಿಂದ ಇತ್ತೀಚಿನ ಒಂದು ವಾರದಿಂದ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕೊರೊನಾ ಗುಣಮುಖರಾದವರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಐದು ದಿನಗಳಲ್ಲಿ ಕೊಲ್ಲಂ, ಕೊಟ್ಟಾಯಂ, ಇಡುಕ್ಕಿ, ಕೊಜಿಕೊಡ್ ಜಿಲ್ಲೆಗಳಲ್ಲಿ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ ಸೋಂಕಿತರೆಲ್ಲ ಗುಣಮುಖರಾಗಿದ್ದು ಲಾಕ್ ಡೌನ್ ನಿಂದ ವಿನಾಯಿತಿ ನೀಡಬೇಕು ಎನ್ನುವಷ್ಟರಲ್ಲೇ ಹೆಚ್ಚಿನ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಎರಡು ಜಿಲ್ಲೆಗಳ 11 ಗ್ರಾಮಗಳನ್ನು ಹಾಟ್ ಸ್ಪಾಟ್ ಎಂದು ಮತ್ತೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಸಮುದಾಯಕ್ಕೆ ಅಂಟಿಕೊಂಡಿತಾ ಕೊರೊನಾ ವೈರಸ್?
ಇತ್ತೀಚಿನ ಕೊರಾನಾ ವೈರಸ್ ಸೋಂಕಿತರ ಏರಿಕೆ ಪ್ರಮಾಣವನ್ನು ಗಮನಿಸಿದಾಗ ಮಹಾಮಾರಿಯು ರಾಜ್ಯದಲ್ಲಿ ಸಮುದಾಯದ ಹಂತಕ್ಕೆ ತಲುಪಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ 3ನೇ ಹಂತಕ್ಕೆ ತಲುಪಿರುವ ಬಗ್ಗೆ ಯಾವುದೇ ಸೂಚನೆಗಳು ಸಿಕ್ಕಿಲ್ಲ. ಜನರು ಆತಂಕಕ್ಕೆ ಒಳಗಾಗುವ ಆತಂಕವಿಲ್ಲ. ಪರಿಸ್ಥಿತಿಯನ್ನು ಹತೋಟಿಗೆ ತರಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.