ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ
ಕಾಸರಗೋಡು, ಮೇ 2 : ಕೇರಳದ ಕಾಸರಗೋಡು ಜಿಲ್ಲೆಯ ಚೆರುವತ್ತೂರು ಪಟ್ಟಣದ ಉಪಹಾರ ಗೃಹದಲ್ಲಿ ಭಾನುವಾರ 16 ವರ್ಷದ ಬಾಲಕಿ ಶವರ್ಮಾ ತಿಂದು ಸಾವನ್ನಪ್ಪಿದ್ದು, 18 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಅಘಾತಕಾರಿ ಘಟನೆ ನಡೆದಿದೆ.
ಶುಕ್ರವಾರ ಚೆರುವತ್ತೂರಿನ ರೆಸ್ಟೋರೆಂಟ್ನಲ್ಲಿ ಬಾಲಕಿ ತನ್ನ ಸ್ನೇಹಿತರೊಂದಿಗೆ ಚಿಕನ್ ಶವರ್ಮಾ ತಿಂದಿದ್ದಾಳೆ. ನಂತರ ಬಾಲಕಿಗೆ ಜ್ವರ, ಭೇದಿ, ವಾಂತಿಯಿಂದ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದರೆ, ದಂಡ ಫಿಕ್ಸ್ : ಕೇರಳ ಸರ್ಕಾರ
ಇನ್ನು ಈ ಘಟನೆಯ ಕುರಿತು ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿದ್ದು, ಫುಡ್ ಪಾಯ್ಸನ್ನಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿದ್ದಾರೆ. ಸದ್ಯ ರೆಸ್ಟೋರೆಂಟ್ ವಿರುದ್ದ ದೂರು ದಾಖಲಾಗಿದ್ದು, ಹೋಟೆಲ್ನ್ನು ಸೀಜ್ ಮಾಡಲಾಗಿದೆ. ಅಲ್ಲದೆ ಘಟನೆ ಸಂಬಂಧ ಉಪಾಹಾರ ಗೃಹದ ವ್ಯವಸ್ಥಾಪಕ ಉಳ್ಳಾಲದ ಅನಸ್ ಮತ್ತು ನೇಪಾಳ ಮೂಲದ ಕೆಲಸಗಾರ ಸಂದೇಶ್ ರೈ ಅವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಇನ್ನು ಉಪಹಾರ ಗೃಹದ ಮಾಲೀಕರು ವಿದೇಶದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಅಸ್ವಸ್ಥಗೊಂಡ 18 ವಿದ್ಯಾರ್ಥಿಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ ರಾಮದಾಸ್ ಹೇಳಿದ್ದಾರೆ.
ಇದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಸಚಿವ ಎಂ.ವಿ ಗೋವಿಂದನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ರಾಜ್ಯದೆಲ್ಲೆಡೆ ಇರುವ ಹೋಟೆಲ್ಗಳಲ್ಲಿ ಗುಣಮಟ್ಟದ ಆಹಾರ ನೀಡುವ ಕೆಲಸವನ್ನ ಸರ್ಕಾರ ಮಾಡುತ್ತದೆ. ಇದಕ್ಕಾಗಿ ರೆಸ್ಟೋರೆಂಟ್ಗಳಲ್ಲಿ ನೀಡಲಾಗುವ ಆಹಾರವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಜ್ಯಾದ್ಯಂತ ತಪಾಸಣೆ ನಡೆಸುತ್ತದೆ ಎಂದು ಸಚಿವರು ಹೇಳಿದ್ದಾರೆ.