ಕೆ-ರೈಲ್ಗೆ ವಿರೋಧ: ಶಶಿ ತರೂರ್ಗೆ ಎಚ್ಚರಿಕೆ
ಕಾಸರಗೋಡು ಡಿಸೆಂಬರ್ 27: ಪಕ್ಷದ ನಿರ್ಧಾರಗಳ ವಿರುದ್ಧ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರನ್ನು ಪಕ್ಷದಿಂದ ಹೊರಹಾಕುವುದಾಗಿ ಕೆಪಿಸಿಸಿ (ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಕೆ.ಸುಧಾಕರನ್ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ವಾಸ್ತವವಾಗಿ, ಇತ್ತೀಚೆಗೆ ಶಶಿ ತರೂರ್ ಅವರು ಕೆ-ರೈಲ್ (ಸಿಲ್ವರ್ ಲೈನ್) ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಂತರ ಸುಧಾಕರನ್ ಅವರು ತರೂರ್ ಅವರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. ಶಶಿ ತರೂರ್ ಅವರು ಭಾನುವಾರ ಕಣ್ಣೂರಿನಲ್ಲಿ ನೀಡಿದ ಹೇಳಿಕೆಯ ಬಗ್ಗೆ ವಿವರಣೆಯನ್ನೂ ಕೇಳಲಾಗಿದೆ. ಪಕ್ಷದ ಎಲ್ಲಾ ಸಂಸದರು ಪಕ್ಷದ ನಿರ್ಧಾರಗಳನ್ನು ಬೆಂಬಲಿಸಬೇಕು ಎಂದು ಸುಧಾರಕರನ್ ಹೇಳಿದ್ದಾರೆ.
ನಿರಂತರ ರೈಲು ಯೋಜನೆ ವಿರುದ್ಧ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿ ಸುಧಾಕರನ್ ಈ ಹೇಳಿಕೆ ನೀಡಿರುವುದು ಗಮನಾರ್ಹ. ಜೊತೆಗೆ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಾರ್ವಜನಿಕವಾಗಿ ಹೊಗಳಿದ್ದಾರೆ. ಕೆ-ರೈಲ್ ಯೋಜನೆ ವಿರುದ್ಧ ಯುಡಿಎಫ್ ಸಂಸದರು ಕೇಂದ್ರ ರೈಲ್ವೆ ಸಚಿವರಿಗೆ ಬರೆದ ಪತ್ರಕ್ಕೆ ಸಹಿ ಹಾಕಲು ಶಶಿ ತರೂರ್ ನಿರಾಕರಿಸಿದ್ದರು. ಅಂದಿನಿಂದ ಅವರು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಯೋಜನೆಯ ಬಗ್ಗೆ ವಿವರವಾಗಿ ಅಧ್ಯಯನ ಮಾಡದ ಕಾರಣ ಅದರ ಬಗ್ಗೆ ಓದುವವರೆಗೂ ಯೋಜನೆಯ ವಿರುದ್ಧ ಹೋಗಲಾರೆ ಎಂದು ತರೂರ್ ಹೇಳಿದರು, ಅದಕ್ಕಾಗಿಯೇ ಅವರು ಸಹಿ ಹಾಕಲು ನಿರಾಕರಿಸಿದರು.
ಪತ್ರಕ್ಕೆ ಸಹಿ ಹಾಕಲ್ಲ ಎಂದ ಶಶಿ ತರೂರ್, ಕೆ ರೈಲು ಯೋಜನೆಗೆ ಬೆಂಬಲ ನೀಡುತ್ತೇನೆ ಎಂದಿಲ್ಲ. ಕೆ ರೈಲು ಯೋಜನೆಯ ಬಗ್ಗೆ ಕೆಲ ಪ್ರಮುಖ ಪ್ರಶ್ನೆಗಳನ್ನು ಎತ್ತಿದರು. ಇದರಿಂದ ಪರಿಸರದ ಮೇಲೆ ಏನು ಪರಿಣಾಮ ಬೀರುತ್ತದೆ? ಅದರಿಂದ ಆಗುವ ಆರ್ಥಿಕ ಲಾಭವೇನು? ಅದರ ಬಗ್ಗೆ ಜನರ ಅಭಿಪ್ರಾಯ ಏನು? ಇವೆಲ್ಲವೂ ಮುಖ್ಯ ಎಂದಿದ್ದರು. ಹೀಗಾಗಿ ಕೆ. ಸುಧಾಕರನ್ ಮಾತನಾಡಿ, ಪಕ್ಷದ ನಿರ್ಧಾರಗಳ ವಿರುದ್ಧ ಶಶಿ ತರೂರ್ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರನ್ನು ಪಕ್ಷದಿಂದ ಹೊರಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಸಿಲ್ವರ್ಲೈನ್ ರೈಲು ಯೋಜನೆಯು ಕೇರಳದ ಚಹರೆಯನ್ನು ಬದಲಿಸಲಿದ್ದು, ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸುವವರನ್ನು ಎಲ್ಡಿಎಫ್ ಸರ್ಕಾರ ಕಿತ್ತೊಗೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಭಾನುವಾರ ಕಾಸರಗೋಡಿನಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಕಚೇರಿ ಎಕೆಜಿ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ಕಾಸರಗೋಡಿನಿಂದ ತಿರುವನಂತಪುರಂ ತಲುಪಲು ಕನಿಷ್ಠ 12 ಗಂಟೆ ಬೇಕು. ಇದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಬೇರೆ ಆಯ್ಕೆ ಇಲ್ಲ. ಸಿಲ್ವರ್ಲೈನ್ನಲ್ಲಿ ಕಾಸರಗೋಡಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು 10 ಗಂಟೆಗೆ ತಿರುವನಂತಪುರಂ ತಲುಪಬಹುದು ಮತ್ತು ಕೆಲಸದ ನಂತರ ಸಂಜೆ 5 ಗಂಟೆಗೆ ರೈಲಿನಲ್ಲಿ ಹೊರಟರೆ ಕಾಸರಗೋಡಿಗೆ ರಾತ್ರಿ 9 ಗಂಟೆಗೆ ತಲುಪಬಹುದು ಎಂದರು. ಎರ್ನಾಕುಲಂ ದೊಡ್ಡ ಕೇಂದ್ರವಾಗಿದೆ. ಕೇರಳದ ಯಾವುದೇ ಭಾಗಕ್ಕೆ ಎರಡು ಗಂಟೆಗಳಲ್ಲಿ ಹೋಗಬಹುದು. ಆದರೆ ಕೆಲವರು ತಮಗೆ ಇದು ಬೇಡ ಎಂದು ಹೇಳುತ್ತಿದ್ದಾರೆ. ಈಗ ಇಲ್ಲದಿದ್ದರೆ ಯಾವಾಗ ಮಾಡುವುದು ಎಂದು ಅವರು ಕೇಳಿದರು.
ಕೆ-ರೈಲ್ ಯೋಜನೆಯು ಹೈಸ್ಪೀಡ್ ರೈಲು ಜಾಲವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದು ಉತ್ತರ ಕೇರಳದ ಕಾಸರಗೋಡು ಮತ್ತು ದಕ್ಷಿಣದ ತಿರುವನಂತಪುರವನ್ನು ಸಂಪರ್ಕಿಸುತ್ತದೆ. ಯೋಜನೆಗಾಗಿ ರಾಜ್ಯಕ್ಕೆ 1,383 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಇದರಲ್ಲಿ 1,383 ಹೆಕ್ಟೇರ್ ಖಾಸಗಿ ಭೂಮಿಯಾಗಿದೆ.