ದೇಶದ್ರೋಹ ಪ್ರಕರಣ: ಆಯೇಷಾ ಸುಲ್ತಾನಾ ವಿರುದ್ಧದ ವಿಚಾರಣೆಗೆ ತಡೆ
ತಿರುವನಂತಪುರಂ, ಜೂ. 9: ಲಕ್ಷದ್ವೀಪ ಪೊಲೀಸರು ಚಲನಚಿತ್ರ ನಿರ್ಮಾಪಕಿ ಆಯೇಷಾ ಸುಲ್ತಾನಾ ವಿರುದ್ಧ ದಾಖಲಿಸಿದ ದೇಶದ್ರೋಹ ಪ್ರಕರಣದ ಮುಂದಿನ ವಿಚಾರಣೆಯನ್ನು ಕೇರಳ ಹೈಕೋರ್ಟ್ ಬುಧವಾರ ತಡೆಹಿಡಿದಿದೆ.
ದೇಶದ್ರೋಹ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಮರುಪರಿಶೀಲನೆಯನ್ನು ಕೇಂದ್ರವು ಪೂರ್ಣಗೊಳಿಸುವವರೆಗೆ ಅಂತಹ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯುವ ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶವನ್ನು ಗಮನದಲ್ಲಿಟ್ಟುಕೊಂಡು ಈ ತಡೆ ಬಂದಿದೆ. ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ನಿರ್ಮಾಪಕಿ ಆಯೇಷಾ ಸುಲ್ತಾನಾ ಅವರು ಲಕ್ಷದೀಪದಲ್ಲಿ ಕೋವಿಡ್ 19 ಹರಡುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಆ ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಮುಖಂಡರೊಬ್ಬರು ಆಯೇಷಾ ವಿರುದ್ಧ ನೀಡಿದ ದೂರಿನ ಮೇರೆಗೆ ಕಳೆದ ವರ್ಷ ಜೂನ್ನಲ್ಲಿ ದೇಶದ್ರೋಹ ಆರೋಪವನ್ನು ದಾಖಲಿಸಲಾಗಿತ್ತು.
ಧರ್ಮ ದ್ವೇಷ ಕಾರಿದ ಕೇರಳ ಬಾಲಕನ ತಂದೆ ಸೇರಿ 20 ಮಂದಿ ಬಂಧನ
ದೇಶದ್ರೋಹ ಪ್ರಕರಣ ಕುರಿತು ಸುಲ್ತಾನಾ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆ ನ್ಯಾಯಮೂರ್ತಿ ಜಿಯಾದ್ ರಹಮಾನ್ ಎ.ಎ. ಅವರು ಮೂರು ತಿಂಗಳ ಕಾಲ ವಿಚಾರಣೆಗೆ ತಡೆ ನೀಡಿದರು. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆಕೆಗೆ ಜಾಮೀನು ನೀಡಿತ್ತು.
ಆಯೇಷಾ ಸುಲ್ತಾನಾ ಅವರು ಜೂ. 7, 2021ರಲ್ಲಿ ಸಂಜೆ 7 ರಿಂದ 8ರ ನಡುವೆ ಪ್ರಸಾರವಾದ ಚರ್ಚೆಯಲ್ಲಿ ಲಕ್ಷದ್ವೀಪ್ನ ಜನರ ಮೇಲೆ ಕೇಂದ್ರ ಸರಕಾರ ತಪ್ಪು ಕ್ರಮ ಕೈಗೊಂಡಿದೆ ಎಂದರೆಂಬ ಆರೋಪ ಮಾಡಲಾಗಿತ್ತು.
ತನ್ನ ವಿರುದ್ಧ ಹೇಳಲಾದ ಆರೋಪಗಳಿಗೆ ಸುಲ್ತಾನ, ಸಂಪೂರ್ಣವಾಗಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದರು. ಆಕೆಯ ಪ್ರಕಾರ ಸುಳ್ಳು ಉದ್ದೇಶಗಳೊಂದಿಗೆ ಆಕೆಯನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಆಡಳಿತ ನಡೆಸುವಲ್ಲಿ ನಿರತರಾಗಿರುವ ವ್ಯಕ್ತಿಯ ಟೀಕೆಗೆ ದಂಡ ವಿಧಿಸಲು ಅಥವಾ ಸರ್ಕಾರದ ಕ್ರಮಗಳ ಅಸಮ್ಮತಿಯನ್ನು ವ್ಯಕ್ತಪಡಿಸಲು ಬಲವಾದ ಪದಗಳನ್ನು ಬಳಸುವುದಕ್ಕಾಗಿ IPC ಯ ಸೆಕ್ಷನ್ 124A ಮತ್ತು 153B ನ ನಿಬಂಧನೆಗಳನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು.
(ಒನ್ಇಂಡಿಯಾ ಸುದ್ದಿ)
Recommended Video