ಪಾಲಕ್ಕಾಡ್ನಲ್ಲಿ ಆರ್ಎಸ್ಎಸ್ ಮುಖಂಡನ ಹತ್ಯೆ: 24 ಗಂಟೆಯಲ್ಲಿ ಎರಡನೇ ರಾಜಕೀಯ ಕೊಲೆ
ಪಾಲಕ್ಕಾಡ್, ಏಪ್ರಿಲ್ 17: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಎರಡನೇ ರಾಜಕೀಯ ಕೊಲೆ ಆಗಿದೆ. ಬೈಕ್ನಲ್ಲಿ ಬಂದ ಗ್ಯಾಂಗ್ ಒಂದು ಆರ್ಎಸ್ಎಸ್ ಮುಖಂಡನನ್ನು ಹಾಡಹಗಲಲ್ಲೇ ಹತ್ಯೆ ಮಾಡಿದ ಘಟನೆ ಶನಿವಾರ ನಡೆದಿದ್ದು, ಪೊಲೀಸರು ಇದು ಪ್ರತೀಕಾರ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಒಂದು ದಿನಕ್ಕೂ ಮುಂಚೆ ಕೇರಳದಲ್ಲಿ ಪಿಎಫ್ಐ ನಾಯಕನ ಹತ್ಯೆ ಮಾಡಲಾಗಿದೆ.
ಆರ್ಎಸ್ಎಸ್ನ ಮಾಜಿ ಜಿಲ್ಲಾ ಮುಖಂಡ ಮತ್ತು ಪದಾಧಿಕಾರಿ ಎಸ್ಕೆ ಶ್ರೀನಿವಾಸನ್ (45) ಪಾಲಕ್ಕಾಡ್ಗೆ ಸಮೀಪದ ಮೇಲಮುರಿಯಲ್ಲಿರುವ ಅವರ ಮೋಟಾರ್ಬೈಕ್ ಅಂಗಡಿಯಲ್ಲಿ ಇದ್ದ ಸಂದರ್ಭದಲ್ಲಿ ಆರು ಜನರ ತಂಡ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಗೆ ಸಮೀಪದ ಹಳ್ಳಿಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಾಯಕನನ್ನು ಆರ್ಎಸ್ಎಸ್ ಹತ್ಯೆ ಮಾಡಿದ 24 ಗಂಟೆಗಳ ನಂತರ ಈ ಘಟನೆ ನಡೆದಿದೆ.
ಈ ನಡುವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಎಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಜಿಲ್ಲಾಡಳಿತ ಶನಿವಾರ ಏಪ್ರಿಲ್ 20 ರವರೆಗೆ ನಿಷೇಧಾಜ್ಞೆ ಹೊರಡಿಸಿದೆ. ಇನ್ನು ಕೇರಳ ಸಶಸ್ತ್ರ ಪೊಲೀಸರನ್ನು ಪಾಲಕ್ಕಾಡ್ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.
ಆರ್ಎಸ್ಎಸ್ ಮುಖಂಡನ ಹತ್ಯೆ ಬಳಿಕ ಹೇಗಿದೆ ಸ್ಥಿತಿ?
ಆರ್ಎಸ್ಎಸ್ ಮುಖಂಡನ ಹತ್ಯೆಯ ನಂತರ ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳನ್ನು ಮುಚ್ಚಿದ್ದಾರೆ. ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ದಾಳಿಕೋರರು ಮೂರು ಮೋಟರ್ಬೈಕ್ಗಳಲ್ಲಿ ಅಂಗಡಿಯನ್ನು ತಲುಪುತ್ತಿರುವುದನ್ನು ಮತ್ತು ಅವರಲ್ಲಿ ಮೂವರು ಶ್ರೀನಿವಾಸನ್ ಮೇಲೆ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಆರ್ಎಸ್ಎಸ್ ಮುಖಂಡನ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಭಾರೀ ಶೋಧ ನಡೆಸಿದ್ದಾರೆ.
ಇದೇ ವೇಳೆ ಪಾಲಕ್ಕಾಡ್ ಹತ್ಯೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೋಮುಗಲಭೆ ಎಬ್ಬಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಯಾವುದೇ ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ರಾಜ್ಯದಲ್ಲಿ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ನಿಗಾ ಇಡಲು ರಾಜ್ಯ ಪೊಲೀಸ್ ಮುಖ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೇರಳ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ
ಕೇರಳ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಆರಂಭ ಮಾಡಿದೆ. ರಾಜ್ಯದಲ್ಲಿ ಇಂದು ಹೆಚ್ಚುತ್ತಿರುವ ಕೋಮುವಾದ ಮತ್ತು ರಾಜಕೀಯ ಕೊಲೆಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡುತ್ತಿರುವ ಕೋಮುವಾದದ ತುಷ್ಟೀಕರಣದ ಪರಿಣಾಮ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪ ಮಾಡಿದೆ.
ಎಡಪಕ್ಷಗಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಗೃಹ ಇಲಾಖೆಯನ್ನು ಮುಖ್ಯಮಂತ್ರಿಗಳೇ ನಿರ್ವಹಿಸುತ್ತಿದ್ದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕೆ ಮಾಡಿದ್ದಾರೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮಾತನಾಡಿ, ಪೊಲೀಸ್ ಪಡೆ ಹಿಂಸಾಚಾರ ಮತ್ತು ಕೊಲೆಗಳ ಮೂಕ ಪ್ರೇಕ್ಷಕರಾಗಿದ್ದಾರೆ. ಜನರು ಜೀವಕ್ಕೆ ರಕ್ಷಣೆ ಇಲ್ಲದೆ ಆತಂಕದಲ್ಲಿ ಬದುಕುವಂತಾಗಿದೆ ಎಂದು ದೂರಿದ್ದಾರೆ.
ಆರ್ಎಸ್ಎಸ್-ಎಸ್ಡಿಪಿಐ ಯೋಜನೆಯ ಭಾಗ ಎಂದ ಡಿವೈಎಫ್ಐ
ರಾಜ್ಯದಲ್ಲಿ ಗಲಭೆ ಮತ್ತು ಕೋಮುಗಲಭೆ ಸೃಷ್ಟಿಸುವ ಆರ್ಎಸ್ಎಸ್-ಎಸ್ಡಿಪಿಐ ಯೋಜನೆಯ ಭಾಗವಾಗಿದೆ. ಈ ನಿಟ್ಟಿನಲ್ಲಿ ಈ ಎರಡು ಸಂಘಟನೆಗಳು ಹತ್ಯೆಗಳು ನಡೆಸಿದೆ ಎಂದು ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್ಐ ಹೇಳಿದೆ. "ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು.ಕೋಮು ಧ್ರುವೀಕರಣದ ಪ್ರಯತ್ನಗಳನ್ನು ತಿರಸ್ಕರಿಸಬೇಕು," ಎಂದು ಡಿವೈಎಫ್ಐ ಹೇಳಿಕೆಯಲ್ಲಿ ತಿಳಿಸಿದೆ.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಇ ಎನ್ ಸುರೇಶ್ ಬಾಬು ಮಾತನಾಡಿ, ಆರ್ಎಸ್ಎಸ್ ಮತ್ತು ಎಸ್ಡಿಪಿಐ ಪಾಲಕ್ಕಾಡ್ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಹರಡಲು ಪ್ರಯತ್ನಿಸುತ್ತಿವೆ ಎಂದು ಆರೋಪ ಮಾಡಿದ್ದಾರೆ. "ಎಸ್ಡಿಪಿಐ ಕಾರ್ಯಕರ್ತನ ಹತ್ಯೆಯಾಗುವ ಎರಡು ದಿನಗಳ ಮೊದಲು ಬಿಜೆಪಿ ರಾಜ್ಯ ಮುಖ್ಯಸ್ಥ (ಕೆ ಸುರೇಂದ್ರನ್) ಪಾಲಕ್ಕಾಡ್ಗೆ ಭೇಟಿ ನೀಡಿದ್ದರು. ಬಿಜೆಪಿಯ ಉನ್ನತ ನಾಯಕತ್ವವು ಇದರಲ್ಲಿ ಶಾಮೀಲು ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆಯಾಗಬೇಕು. ಎರಡೂ ಹತ್ಯೆಗಳ ತನಿಖೆಯಾಗಬೇಕು. ಆರ್ಎಸ್ಎಸ್ ಮತ್ತು ಎಸ್ಡಿಪಿಐ ಕಾರ್ಯಕರ್ತರು ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ತಿರುಗಾಡುತ್ತಿದ್ದಾರೆ," ಎಂದು ಸಿಪಿಐ(ಎಂ) ಹೇಳಿದೆ.
ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಕೇಂದ್ರ ಸಚಿವ
ಕೇಂದ್ರ ಸಚಿವ ವಿ ಮುರಳೀಧರನ್, "ಆರ್ಎಸ್ಎಸ್ ಕಾರ್ಯಕರ್ತನನ್ನು ಹಾಡಹಗಲೇ ಹತ್ಯೆ ಮಾಡಿರುವುದನ್ನು ನೋಡಿದಾಗ ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುವುದು ದೃಢಪಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಖ್ಯಮಂತ್ರಿಗಳೇ ಗೃಹ ಇಲಾಖೆಯನ್ನು ನಿಭಾಯಿಸುತ್ತಿರುವ ರಾಜ್ಯದಲ್ಲಿ ಪೊಲೀಸ್ ಇಲಾಖೆ ಹದಗೆಟ್ಟಿರುವುದು ಆತಂಕಕಾರಿಯಾಗಿದೆ," ಎಂದು ಹೇಳಿದ್ದಾರೆ. ತಿರುವನಂತಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಮುಖ್ಯಸ್ಥ ಸುರೇಂದ್ರನ್, "ರಾಜ್ಯ ಸರ್ಕಾರ ಮತ್ತು ಪೊಲೀಸರು "ಜನರನ್ನು ಕೊಲ್ಲಲು ಭಯೋತ್ಪಾದಕರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ" ಎಂದು ಆರೋಪಿಸಿದರು.