ಅನಂತ ಪದ್ಮನಾಭಸ್ವಾಮಿ ದೇಗುಲ ರಾಜ ಮನೆತನದ ಸುಪರ್ದಿಗೆ: ಸುಪ್ರೀಂ
ತಿರುವನಂತಪುರಂ, ಜುಲೈ 13: ಕೇರಳದ ಐತಿಹಾಸಿಕ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ಇಡೀ ದೇಶದ ಗಮನ ಸೆಳೆದ ಪ್ರಕರಣ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರದಂದು ಮಹತ್ವದ ತೀರ್ಪು ನೀಡಿದೆ.
Recommended Video
ಆನಂತ ಪದ್ಮನಾಭಸ್ವಾಮಿ ದೇಗುಲವು ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ಜಸ್ಟೀಸ್ ಯು.ಯು ಲಲಿತ್ ಹಾಗೂ ಇಂದು ಮಲ್ಹೋತ್ರ ಅವರಿದ್ದ ನ್ಯಾಯಪೀಠವು ತೀರ್ಪು ಪ್ರಕಟಿಸಿದೆ.
ಅನಂತ ದೇಗುಲ 'ಬಿ' ಕೊಠಡಿ ತೆರೆದರೆ ಕೆಡುಕೆ?
ದೇವಸ್ಥಾನ ಸಾರ್ವಜನಿಕ ಸಂಪತ್ತಾಗಿದ್ದರೂ ರಾಜ ಕುಟುಂಬ (Travancore royal family) ಇದನ್ನು ಸ್ವಂತ ಸ್ವತ್ತು ಎಂದೇ ಭಾವಿಸಿದೆ. ದೇವಸ್ಥಾನದ ಆಡಳಿತದಲ್ಲಿ ರಾಜಕುಟುಂಬದ ಹಸ್ತಕ್ಷೇಪವನ್ನು ತಡೆಯಬೇಕು. ಮಾಜಿ ಮಹಾಲೇಖಪಾಲರಾದ ವಿನೋದ್ ರಾಯ್ ಅವರಿಂದ ವಿಸ್ತಾರ ಆಡಿಟ್ ನಡೆಸಬೇಕು ಎಂದು 500 ಪುಟಗಳ ಸುದೀರ್ಘ ವರದಿಯಲ್ಲಿ ಅಮಿಕಸ್ ಕ್ಯೂರಿ ಗೋಪಾಲ ಸುಬ್ರಮಣ್ಯಂ ಕೋರ್ಟ್ ಗಮನ ಸೆಳೆದಿದ್ದರು.
ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿಯ ವಜ್ರಗಳು ನಾಪತ್ತೆ
ಕಳೆದ ಎಂಟು ಹತ್ತು ವರ್ಷಗಳ ಹಿಂದೆ ಕೇರಳದ ಅತ್ಯಂತ ಶ್ರೀಮಂತ ದೇಗುಲ ಅನಂತಪದ್ಮನಾಭ ದೇವಳಂನ ನೆಲ ಮಾಳಿಗೆಯಲ್ಲಿದ್ದ ಕೊಠಡಿಗಳನ್ನು ಪರಿಶೀಲಿಸಲಾಗಿತ್ತು. ಎರಡು ಕೊಠಡಿಗಳ ಸಂಪತ್ತಿನ ಮೌಲ್ಯ ದಾಖಲಿಸಿದಾಗ, ಅಂದಾಜು ಮೌಲ್ಯ ಒಂದು ಲಕ್ಷ ಕೋಟಿ ರು. ಮೀರಲಿದೆ ಎಂದು ಲೆಕ್ಕಪರಿಶೋಧಕರು ಹೇಳಿದ್ದರು.
ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿ
ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ. ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಈ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ನಡುವೆ ಬಿ ಕೊಠಡಿಯ ಬಗ್ಗೆ ಇನ್ನೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಮೃತಪಟ್ಟಿದ್ದಾರೆ.
ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆ
ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ 2014ರಲ್ಲಿ ಸುಪ್ರೀಂಕೋರ್ಟ್, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ಅವರ ಮೇಲ್ವಿಚಾರಣೆಯಲ್ಲಿ ಪದ್ಮನಾಭ ದೇವಾಲಯದ ಸಂಪತ್ತಿನ ಪರಿಶೋಧನೆ ನಡೆಸುವಂತೆ ಸೂಚಿಸಿತ್ತು. ಈ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ದೇಗುಲದಲ್ಲಿ ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆಯಾಗಿತ್ತು. ಈ ನಿಧಿಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಶಸ್ತ್ರಸಜ್ಜಿತ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಇನ್ನಷ್ಟು ಕ್ರಮಗಳನ್ನು ಕೈಗೊಂಡಿತ್ತು.
ಅನುಮಾನಾಸ್ಪದ ಚಟುವಟಿಕೆ
ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಪಾರ ಪ್ರಮಾಣದ ನಿಧಿ ಇದೆ. ಆದರೆ, ದೇಗುಲದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ. ದೇವಾಲಯ ಟ್ರಸ್ಟ್ ಕಾನೂನು ಬಾಹಿರವಾಗಿ 2.11 ಎಕರೆ ಭೂಮಿಯನ್ನು 1970ರಲ್ಲಿ ಮಾರಾಟ ಮಾಡಿದ್ದು, ಈ ಬಗ್ಗೆ ಯಾವ ದಾಖಲೆಯೂ ಲಭ್ಯವಿಲ್ಲ. ಆದ್ದರಿಂದ ಈ ಕುರಿತು ಪರಿಶೀಲನೆಗೆ ಒಳಪಡಿಸಬೇಕೆಂದು ಕೋರಿ ಗೋಪಾಲ ಸುಬ್ರಮಣಿಯಮ್ ಎಂಬುವರು ಸುಪ್ರೀಂ ಕೋರ್ಟ್ನಲ್ಲಿ ಆಮಿಕಸ್ ಕ್ಯೂರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಧಿಯ ಲೆಕ್ಕ ಪರಿಶೋಧನೆಗೊಳಪಡಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು.
ನಿಧಿಯಲ್ಲ ದೇಗುಲದ ಸಂಪತ್ತು
ದೇವಸ್ಥಾನದ ಸಂಪತ್ತು ನಿಧಿಯ ವ್ಯಾಖ್ಯೆಯಡಿ ಬರುತ್ತದೆ ಹಾಗೂ 'ಕೇರಳ ನಿಧಿ ಕಾಯಿದೆ' ಪ್ರಕಾರ ಸರಕಾರ ಈ ಸಂಪತ್ತನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂಬ ವಾದ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಅಂದಿನ ದೇವಸ್ವಂ ಸಚಿವ ವಿ. ಎಸ್. ಶಿವಕುಮಾರ್ ಸದನದಲ್ಲಿ ಈ ಹೇಳಿಕೆ ನೀಡಿ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದರು. ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪ್ರಶ್ನೆಗೆ ಉತ್ತರಿಸಿ, ನೀವು ಪದೇ ಪದೆ ದೇವಸ್ಥಾನದಲ್ಲಿ ಸಿಕ್ಕಿರುವುದನ್ನು 'ನಿಧಿ' ಎನ್ನುತ್ತಿದ್ದೀರಿ. ಅದು ನಿಧಿಯಲ್ಲ. ಬದಲಾಗಿ ದೇಗುಲದ ಸಂಪತ್ತು ಎಂದು ವಾದಿಸಿದ್ದರು.