ಶಬರಿಮಲೆ ಮಹಿಳೆಯರಿಗೆ ಪ್ರವೇಶ: ಇದು ವಿವಾದದ ಅಂತ್ಯವಲ್ಲ, ಆರಂಭ!
Recommended Video
ಐತಿಹಾಸಿಕ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿಷಿದ್ದ ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸಿದ ನಂತರ, ಈ ಸಂಬಂಧ ಹಲವು ದಶಕಗಳ ವಿವಾದ ಅಂತ್ಯಗೊಂಡಿತೇ? ಕೇರಳದಲ್ಲಿ ಮತ್ತು ದೇಶಾದ್ಯಂತ ಆರಂಭವಾಗಿರುವ ಭಾರೀ ಅಪಸ್ವರವನ್ನು ಅವಲೋಕಿಸುವುದಾದರೆ, ವಿವಾದ ಮತ್ತೆ ಆರಂಭವಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಸ್ತ್ರೀಯರೇ ರಸ್ತೆಗಿಳಿದಿರುವುದು ಕೇರಳ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಂಟು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಕೋರ್ಟ್ ರದ್ದು ಪಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ, ಕೇರಳದ ರಾಜಮನೆತನವೂ ಸ್ತೀಯರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಶಬರಿಮಲೆ ತೀರ್ಪು: ಕೇರಳ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಇಲ್ಲ!
ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇರಳ ಸರಕಾರ, ಮರುಪರಿಶೀಲನಾ ಅರ್ಜಿ ಯಾವ ಕಾರಣಕ್ಕೂ ಹಾಕುವುದಿಲ್ಲ, ಮಹಿಳೆಯರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಪ್ರತಿಭಟನೆಯ ಕಾವು ಇನ್ನಷ್ಟು ತೀವ್ರಗೊಂಡಿದೆ.
ಕೇರಳದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಅಯ್ಯಪ್ಪ ಭಕ್ತರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ಮಹಿಳೆಯರೇ ಪ್ರತಿಭಟನೆ ನಡೆಸುತ್ತಿದ್ದಾರೆ. 10-50 ವಯೋಮಿತಿಯ ಮಹಿಳೆಯರ ಪ್ರವೇಶ ನಿಷಿದ್ದ, ದೇವರಿಗೆ ನಾವು ಕೊಟ್ಟ ಮಾತು ಎಂದು, ಘೋಷಣೆ ಕೂಗುತ್ತಿದ್ದಾರೆ.
ಅಯ್ಯಪ್ಪ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದ ಸುಪ್ರೀಂ ತೀರ್ಪು ?
ನಿಜವಾದ ಮಹಿಳಾ ಭಕ್ತರು ದೇವಾಲಯದ ಸಂಪ್ರದಾಯವನ್ನು ಮೀರಲು ಸಿದ್ದರಿರುವುದಿಲ್ಲ, ಪ್ರಗತಿಪರ ಹೋರಾಟಗಾರರೂ ಮಾತ್ರ ' ದೇವಾಲಯಕ್ಕೆ ಪ್ರವೇಶಿಸಿದರೆ ಏನಾಗುತ್ತದೆ, ನೋಡೇ ಬಿಡೋಣ' ಎನ್ನುವುದಕ್ಕಾಗಿ ಬರಬಹುದೇ ಹೊರತು, ಇವರೆಲ್ಲಾ ನಿಜವಾದ ಭಕ್ತರಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೊಗಾಡಿಯಾ ನೇತೃತ್ವದ ಅಂತರಾಷ್ಟ್ರೀಯ ಹಿಂದೂ ಪರಿಷತ್
ವಿಎಚ್ಪಿಯ ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ನೇತೃತ್ವದ ಅಂತರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದ್ದಾರೆ. ರಾಜಧಾನಿ ತಿರುವನಂತಪುರಂನಲ್ಲಿ ಬುಧವಾರ (ಅ 3) ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ದ ಭಾರೀ ಸಂಖ್ಯೆಯಲ್ಲಿ ಜನರು ಹೋರಾಟಕ್ಕೆ ಧುಮುಕಿದ್ದಾರೆ, ಅದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.
ನ್ಯಾಯಾಲಯದ ತೀರ್ಪು ಅಯ್ಯಪ್ಪನಿಗಿಂತ ದೊಡ್ಡದೇನಲ್ಲ
ನ್ಯಾಯಾಲಯದ ತೀರ್ಪು ಅಯ್ಯಪ್ಪನಿಗಿಂತ ದೊಡ್ಡದೇನಲ್ಲ ಎಂದು ಭಿತ್ತಿಪತ್ರ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ರಾಜ್ಯ ಮತ್ತು ಮೋದಿ ಸರಕಾರ ಈ ಕೂಡಲೇ ಮಧ್ಯಪ್ರವೇಶಿಸಿ, ಸುಪ್ರೀಂಕೋರ್ಟಿಗೆ ಮರುಪರಿಶೀಲನಾ ಅರ್ಜಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಗೆ ಇಡುಕ್ಕಿ ಜಿಲ್ಲೆಯಿಂದ ಬಂದ ಮಹಿಳೆಯೊಬ್ಬರು, ಸೀಮೆಎಣ್ಣೆ ಮೈಗೆ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಮುಂದಾದಾಗ, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ
ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ನಡೆದ ಪ್ರತಿಭಟನೆ
ಕೇರಳ ಸರಕಾರಕ್ಕೆ ಭಾರೀ ಇರಿಸುಮುರಿಸು ತಂದಿದ್ದು ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಗಾಂಧಿ ಜಯಂತಿಯ ದಿನದಂದು ಪ್ರತಿಭಟನೆ ನಡೆಸಿದ್ದಾರೆ. ಅವರವರ ನಂಬಿಕೆಯ ವಿಚಾರದಲ್ಲಿ ಆಟವಾಡಬೇಡಿ ಎನ್ನುವುದು ಅವರ ಒಕ್ಕೂರಿಲಿನ ಕೂಗಾಗಿತ್ತು. ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ರಾಜಮನೆತನ ಹೇಳಿರುವುದು ಪಿಣರಾಯಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಅಯ್ಯಪ್ಪನ ವಿಗ್ರಹದ ಮೇಲೆ ರಾರಾಜಿಸುವುದು ಪಂಡಾಳಂ ಆಭರಣ
ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಮಕರ ವಿಳಕ್ಕು (ಮಕರ ಸಂಕ್ರಾಂತಿ ಜ್ಯೋತಿ ದರ್ಶನ) ವೇಳೆ, ಗರ್ಭಗುಡಿಯಲ್ಲಿ ಅಯ್ಯಪ್ಪನ ವಿಗ್ರಹ ಮತ್ತು ಉತ್ಸವ ಮೂರ್ತಿಯ ಮೇಲೆ ರಾರಾಜಿಸುವುದು ಪಂಡಾಳಂ ರಾಜಮನೆತನದ ಸುಪರ್ದಿಯಲ್ಲಿರುವ ಆಭರಣಗಳು. ಸಂಕ್ರಾಂತಿ ಹಬ್ಬದ ವೇಳೆ, ಭಾರೀ ಬಂದೋಬಸ್ತಿನಿಂದ ಈ ಆಭರಣಗಳನ್ನು ಶಬರಿಮಲೆ ದೇವಾಲಯಕ್ಕೆ ತರುವ ಪದ್ದತಿಯಿದೆ. ಈಗ, ಆ ರಾಜಮನೆತನದವರೇ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಅಪಸ್ವರ ಎತ್ತಿರುವುದರಿಂದಲೇ, ಶಬರಿಮಲೆ ಮಹಿಳೆಯರಿಗೆ ಪ್ರವೇಶಕ್ಕೆ ತೆರೆಬಿದ್ದಿಲ್ಲ, ಬದಲಿಗೆ ಆರಂಭವಾಗಿದೆ ಎಂದು ವಾಖ್ಯಾನಿಸಬಹುದಾಗಿದೆ.
ಶಬರಿಮಲೆ ದೇವಳಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕಾರಣ ಗೊತ್ತೆ?
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಧ್ಯಪ್ರವೇಶ
ಕೊಲ್ಲಂ, ಅಲಾಪ್ಜಾ, ಪಾಲಕ್ಕಾಡ್, ಕೊಚ್ಚಿ, ಇಡುಕ್ಕಿ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ತೀವ್ರವಾಗಿದೆ. ಕೇರಳ ಸರಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಖಾಡಕ್ಕೆ ಇಳಿದಿದ್ದು, ಆಧ್ಯಾತ್ಮಿಕ ಮತ್ತು ಹಿಂದೂ ಮುಖಂಡರು ಈ ಸಂಬಂಧ ತಮ್ಮ ನಿಲುವನ್ನು ಸ್ಪಷ್ಟ ಪಡುವಂತೆ ಕೋರಿದೆ. ಸುಪ್ರೀಂ ತೀರ್ಪನ್ನು ನಾವು ಗೌರವಿಸುತ್ತೇವೆ, ಹಾಗೆಯೇ, ದೇಶದ ವಿವಿಧ ದೇವಾಲಯಗಳ ಸಂಪ್ರದಾಯವನ್ನೂ ನಾವು ಗೌರವಿಸಬೇಕಲ್ಲವೇ ಎಂದು ಆರ್ ಎಸ್ ಎಸ್ ಹೇಳಿದೆ.