ಶಬರಿಮಲೆಗೆ ಬರುವ ಮಹಿಳೆಯರ ಸೀಳಬೇಕು ಎಂದ ನಟನ ವಿರುದ್ಧ ದೂರು
ಕೊಲ್ಲಂ, ಅಕ್ಟೋಬರ್ 13: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸುವ ಮಹಿಳೆಯರನ್ನು ಎರಡು ಭಾಗವನ್ನಾಗಿ ಕತ್ತರಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಲಯಾಳಂ ನಟ ಕೊಲ್ಲಂ ತುಳಸಿ ವಿರುದ್ಧ ದೂರು ದಾಖಲಿಸಲಾಗಿದೆ.
ಶಬರಿಮಲೆಗೆ ಬರುವ ಮಹಿಳೆಯರನ್ನು ಕತ್ತರಿಸಿ ಎಂದ ಮಲಯಾಳಂ ನಟ
ಶುಕ್ರವಾರ ಕೊಲ್ಲಂನಲ್ಲಿ ಮಾತನಾಡುತ್ತಿದ್ದ ನಟ ತುಳಸಿ, 'ಶಬರಿಮಲೆಗೆ ಬರುವ ಮಹಿಳೆಯರನ್ನು ಎರಡು ಭಾಗವಾಗಿ ಕತ್ತರಿಸಿ, ಒಂದು ಭಾಗವನ್ನು ದೆಹಲಿಗೆ ಕಳಿಸಿ, ಇನ್ನೊಂದು ಭಾಗವನ್ನು ಕೇರಳ ಮುಖ್ಯಮಂತ್ರಿಗಳ ಕಚೇರಿಯ ಬಳಿ ಎಸೆಯಬೇಕು' ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಬಾರದು, ಅದರಿಂದ ದೇವಾಳಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಈ ಪದ್ಧತಿಯನ್ನು ಎಷ್ಟೋ ಶತಮಾನಗಳಿಂದ ನಡೆಸಿಕೊಂಡು ಬಂದಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಇದ್ಯಾವುದನ್ನೂ ಪರಿಗಣಿಸದೆ, ಮಹಿಳೆಯರಿಗೆ ಪ್ರವೇಶ ನೀಡಲು ಅನುಮತಿ ನೀಡಿದೆ. ಇದು ಸರಿಯಲ್ಲ ಎಂದು ಅವರು ಹೇಳಿದ್ದರು.
'ಸ್ವಲ್ಪ ತಡೀರಿ...' ಶಬರಿಮಲೆ ಮೇಲ್ಮನವಿಗೆ ಸುಪ್ರೀಂ ಪ್ರತಿಕ್ರಿಯೆ!
800 ವರ್ಷಗಳಿಂದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ದೇವಾಲಯದ ಆಡಳಿತ ಮಂಡಳಿಯ ನಿಯಮಕ್ಕೆ ಬದಲಾಗಿ, ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ಸೆ.28 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದ ಮೇಲೆ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘಟನೆ(National Ayyappa Devotee association) ಯು ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸೋಮವಾರ ಮೇಲ್ಮನವಿ ಸಲ್ಲಿಸಿದೆ.