ಶಬರಿಮಲೆ: ಪವಿತ್ರ ಚಿನ್ನದ ದಿರಿಸಿನ ಮೆರವಣಿಗೆ ಆರಂಭ
ತಿರುವನಂತಪುರಂ, ಡಿಸೆಂಬರ್ 22: ಶಬರಿಮಲೆಯಲ್ಲಿ ನಡೆಯುವ ಮಂಡಲ ಪೂಜೆಗಾಗಿ ಪವಿತ್ರ ಚಿನ್ನದ ಉಡುಗೆಯನ್ನು ಕೊಂಡೊಯ್ಯುವ 'ತಂಕ ಅಂಕಿ' ಮೆರವಣಿಗೆಗೆ ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಮಂಗಳವಾರ ಚಾಲನೆ ನೀಡಲಾಯಿತು.
ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಲ್ಲಿ ಬೆಳಗಿನ ಜಾವ 5 ರಿಂದ 6.30ರವರೆಗೆ ಪವಿತ್ರ ಚಿನ್ನದ ಅಂಗಿಯನ್ನು ವೀಕ್ಷಿಸುವ ಅವಕಾಶವನ್ನು ಭಕ್ತರಿಗೆ ನೀಡಲಾಗಿತ್ತು. ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಅರನ್ಮುಲದ ಪೂರ್ವ ದ್ವಾರದಿಂದ ಮೆರವಣಿಗೆ ಪ್ರಾರಂಭವಾಯಿತು. ಪ್ರತಿ ವರ್ಷ ಮೆರವಣಿಗೆ ವೇಳೆ ಲಕ್ಷಾಂತರ ಭಕ್ತರು ನೆರೆದಿರುತ್ತಿತ್ತು. ಚಿನ್ನದ ಅಂಗಿಗೆ ಪೂಜೆ ಮೆರವಣಿಗೆ ಅಲಂಕಾರ ಬಹು ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ನಿರ್ಬಂಧಗಳ ಕಾರಣ ಉತ್ಸವ ಕಳೆಗುಂದಿದೆ.
ತಂಕ ಅಂಕಿಯನ್ನು ಸಾಗಿಸುವ ಮೆರವಣಿಗೆಯು ಸ್ವಾಗತ ಸಮಾರಂಭಕ್ಕೂ ಮುನ್ನ ಕೆಲವೇ ನಿರ್ದಿಷ್ಟ ಸ್ಥಳಗಳಲ್ಲಿ ನಿಲ್ಲಿಸಲಾಗುತ್ತದೆ. ಬೆಳಿಗ್ಗೆ 6.30ರ ಬಳಿಕ ಭಕ್ತರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ.
#Sabarimala Thanka Anki for Swami Ayyappa began its Yatra from #Aranmula temple 🙏 ( @surnell @lotophagus @mohandastg @tvjanam @kochattil ) pic.twitter.com/3LPHPjSzEl
— Kerala Comrade (@KeralaComrade1) December 22, 2020
ಈ ಮೆರವಣಿಗೆಯು ಡಿಸೆಂಬರ್ 25ರಂದು ಮಧ್ಯಾಹ್ನ 1.30ರ ಸುಮಾರಿಗೆ ಪಂಬಾಕ್ಕೆ ತಲುಪುತ್ತದೆ. ಅಲ್ಲಿ ಪಂಬಾ ಗಣಪತಿ ದೇವಸ್ಥಾನದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಶರಂಕುಥಿಗೆ ತಲುಪುತ್ತದೆ. ಅಲ್ಲಿ ಸಾಂಪ್ರದಾಯಿಕವಾಗಿ ಅದಕ್ಕೆ ಸ್ವಾಗತ ನೀಡಲಾಗುತ್ತದೆ. ಸಂಜೆ ವೇಳೆ ಅಯ್ಯಪ್ಪನ ಮೂರ್ತಿಗೆ ಚಿನ್ನದ ಅಂಗಿಯನ್ನು ತೊಡಿಸಿದ ಬಳಿಕ ದೀಪಾರಾಧನೆ ನಡೆಯುತ್ತದೆ. ಮಂಡಲ ಪೂಜೆಯು ಡಿ. 26ರಂದು ನಡೆಯುತ್ತದೆ.