ಏಳು ತಿಂಗಳ ಬಳಿಕ ಭಕ್ತರಿಗಾಗಿ ತೆರೆದ ಶಬರಿಮಲೆ ದೇವಸ್ಥಾನ: ಈ ನಿಯಮಗಳ ಪಾಲನೆ ಕಡ್ಡಾಯ
ತಿರುವನಂತಪುರಂ, ಅಕ್ಟೋಬರ್ 16: ಕೊರೊನಾ ವೈರಸ್ ಸೋಂಕಿನ ಸಂಕಷ್ಟ ಆರಂಭವಾದ ಏಳು ತಿಂಗಳಲ್ಲಿ ಇದೇ ಮೊದಲ ಬಳಿಕ ಕೇರಳದ ಸುಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆ ದೇವಸ್ಥಾನವನ್ನು ಶುಕ್ರವಾರ ತೆರೆಯಲಾಗಿದೆ. ಆದರೆ ದೇವಾಲಯದಲ್ಲಿ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು, ಶನಿವಾರದಿಂದ ಭಕ್ತರಿಗೆ ದೇವಾಲಯದ ಗೋಪುರದೊಳಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಐದು ದಿನಗಳ ಮಾಸಿಕ ಆರಾಧನೆಗಾಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ತೆರೆಯಲಾಗಿದೆ. ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡುವ ಮುಖ್ಯ ಯಾತ್ರಾರ್ಥಿ ಅವಧಿಯು ಮುಂದಿನ ತಿಂಗಳು ಆರಂಭವಾಗಲಿದೆ.
ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ
ದೇವಸ್ಥಾನದ ಆವರಣವನ್ನು ಪ್ರವೇಶಿಸುವ ಭಕ್ತರು ದರ್ಶನಕ್ಕೂ ಗರಿಷ್ಠ 48 ಗಂಟೆಗಳ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಮತ್ತು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ವನ್ನು ತರುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಡ್ಡಾಯ ಫಿಟ್ನೆಸ್ ಪ್ರಮಾಣಪತ್ರ, 10-60 ವಯಸ್ಸಿನ ಭಕ್ತರಿಗೆ ಮಾತ್ರ ಪ್ರವೇಶದಂತಹ ಇತರೆ ನಿಯಮಗಳನ್ನು ಸಹ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪಂಬಾ ನದಿಯಲ್ಲಿನ ಸಾಂಪ್ರದಾಯಿಕ ಸ್ನಾನವನ್ನು ಸ್ಥಗಿತಗೊಳಿಸಲಾಗಿದ್ದು, ದೇವಸ್ಥಾನದ ಸಮೀಪದ ಬೆಟ್ಟಗಳ ನೆಲೆಗಳಲ್ಲಿ ಕ್ಯಾಂಪ್ ಹಾಕಿ ರಾತ್ರಿ ಉಳಿದುಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ.
ದಿನಕ್ಕೆ 250 ಮಂದಿಗೆ ಮಾತ್ರವೇ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಸೇರಿದಂತೆ ಎಲ್ಲ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು.
ಜೂನ್ 14 ರಂದು ಶಬರಿಮಲೆ ದೇವಸ್ಥಾನದಲ್ಲಿ ಮಾಸಿಕ ಪೂಜೆ
ಮಾರ್ಚ್ ತಿಂಗಳಿನಿಂದಲೂ ಶಬರಿಮಲೆ ದೇವಸ್ಥಾನ ಮುಚ್ಚಿತ್ತು. ದೇವಸ್ಥಾನದ ಪ್ರಧಾನ ಅರ್ಚಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಜೂನ್ ತಿಂಗಳಲ್ಲಿ ದೇವಾಲಯ ತೆರೆಯದಿರುವುದಕ್ಕೆ ನಿರ್ಧರಿಸಲಾಗಿತ್ತು. ಯಾವುದೇ ಭಕ್ತನಿಗೆ ಕೋವಿಡ್ ಪಾಸಿಟಿವ್ ಬಂದರೆ ದೇವಸ್ಥಾನದ ಸಂಪ್ರದಾಯಗಳನ್ನು ಪಾಲಿಸುವುದರ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
Recommended Video