ಚಿಂಗಾಮ್ ತಿಂಗಳ 5 ದಿನದ ಪೂಜೆಗೆ ಬಾಗಿಲು ತೆರೆದ ಶಬರಿಮಲೆ ದೇಗುಲ
ತಿರುವನಂತಪುರಂ, ಆಗಸ್ಟ್ 17: ಮಲಯಾಳಂ ಪಂಚಾಂಗದ ಪ್ರಕಾರ ಮೊದಲ ತಿಂಗಳ (ಆಗಸ್ಟ್) ಶುಭ ಚಿಂಗಾಮ್ನಲ್ಲಿ ಐದು ದಿನ ಪೂಜೆ ಮಾಡುವ ಸಂಬಂಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಬಾಗಿಲನ್ನು ಮಂಗಳವಾರ ತೆರೆಯಲಾಗಿದೆ. ಪೂಜೆಗೆಂದು ಭಕ್ತರ ದಂಡು ದೇವಾಲಯದತ್ತ ಧಾವಿಸುತ್ತಿದೆ.
ದೇವಾಲಯದಲ್ಲಿ ಚಿಂಗಾಮ್ ಶುಭ ತಿಂಗಳ ಐದು ದಿನ ಮಾಸಿಕ ಪೂಜೆ-ಪುನಸ್ಕಾರಗಳು ಮತ್ತು ಆಚರಣೆಗಳು ನಡೆಯಲಿವೆ. ಹೀಗಾಗಿ ಮಂಗಳವಾರ ಸಂಜೆ 5 ಗಂಟೆ ಹೊತ್ತಿಗೆ ಪ್ರಧಾನ ಅರ್ಚಕರಾದ (ತಂತ್ರಿ) ಕಂದಾರಿ ರಾಜೀಯವರು ಮತ್ತು ಮೇಲ್ಶಾಂತಿ ಪರಮೇಶ್ವರನ್ ನಂಬೂದಿರಿ ಅವರು ಗರ್ಭಗುಡಿಯ ಬಾಗಿಲು ತೆರೆದರು. ದೇಗುಲಗಳಲ್ಲಿನ ಉಪ ದೇವತೆಗಳ ದ್ವಾರಗಳನ್ನು ತೆರೆದು ದೇವರ ಮೂರ್ತಿಗಳಿಗೆ ದೀಪ ಬೆಳಗಿದ್ದಾರೆ.
ಬುಧವಾರ ಬೆಳಗ್ಗೆಯಿಂದಲೇ ಅಗತ್ಯ ಧಾರ್ಮಿಕ ಪೂಜಾ ಕೈಂಖರ್ಯಗಳು ನೆರವೇರಿದ ನಂತರ ಭಕ್ತರಿಗೆ ಶಬರಿಮಲೆ ಪವಿತ್ರ ಬೆಟ್ಟದ ಚಾರಣ ಮಾಡಲು, 18 ಮೆಟ್ಟಿಲುಗಳನ್ನು ಏರಲು ಹಾಗೂ ಮುಖ್ಯವಾದ ಅಯ್ಯಪ್ಪ ಸ್ವಾಮಿದೇವರ ಮುಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಪೂಜೆಗಾಗಿ ಶಬರಿಮಲೆ ದೇವಾಲಯ ಆಗಸ್ಟ್ 21ರ ಭಾನುವಾರದವರೆಗೆ ರವರೆಗೆ ತೆರೆದಿರಲಿದೆ.
ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ಶಬರಿಮಲೆಯಲ್ಲಿ ವಿಶೇಷ ಪೂಜೆಗಳು ನಡೆದಿವೆ ಹೊರತು ಭಕ್ತರಿಗೆ ಅವಕಾಶ ಇರಲಿಲ್ಲ. ಕೊರೋನಾ ಭೀತಿ ಎಲ್ಲೆಡೆ ಆವರಿಸಿದ್ದರಿಂದ ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಐದು ದಿನ ವಿಶೇಷ ಪೂಜೆಗೆಂದು ಮಾತ್ರ ಬಾಗಿಲು ತೆರೆದಿತ್ತು. ಆದರೆ ಬೆಟ್ಟ ಏರಿ ಬರಲು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ನಂತರ ದಿನಗಳಲ್ಲಿ ಭಕ್ತರು ಕಟ್ಟುನಿಟ್ಟಿನ ಕೊರೋನಾ ಮಾರ್ಗಸೂಚಿನ ಅನ್ವಯ ದೇವರ ದರ್ಶನ ಪಡೆದರು.
ಇದೀಗ ಎಲ್ಲೆಡೆ ಕೋವಿಡ್ ಸಂಪೂರ್ಣವಾಗಿ ಇಳಿಕೆ ಕಂಡಿದ್ದು, ಈ ಭಾರಿ ಶಬರಿಮಲೆಗೆ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಸಂಬಂಧ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.