ಭಾರೀ ಮಳೆ ಹಿನ್ನೆಲೆ: ಒಂದು ದಿನದ ಮಟ್ಟಿಗೆ ಶಬರಿಮಲೆ ದೇವಸ್ಥಾನ ಯಾತ್ರೆ ಸ್ಥಗಿತ
ತಿರುವನಂತಪುರಂ, ನವೆಂಬರ್ 20: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಬೆಟ್ಟದಲ್ಲಿರುವ ಪ್ರಸಿದ್ಧ ಅಯ್ಯಪ್ಪ ದೇಗುಲದ ಯಾತ್ರೆಯನ್ನು ಶನಿವಾರ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಪಂಬಾ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಅಯ್ಯಪ್ಪ ದೇಗುಲದ ಯಾತ್ರೆಯನ್ನು ಸ್ಥಗಿತಗೊಳಿಸಿ ಪತ್ತನಂತಿಟ್ಟ ಜಿಲ್ಲಾಡಳಿತ ಶುಕ್ರವಾರ ಆದೇಶ ಹೊರಡಿಸಿದೆ.
ಪವಿತ್ರ ನದಿ ಎಂದು ಪರಿಗಣಿಸಲಾದ ಪಂಬಾ ಉಕ್ಕಿ ಹರಿಯುತ್ತಿದ್ದು, ಪಂಬಾ ಅಣೆಕಟ್ಟು ಗೇಟ್ ಅನ್ನು (ರೆಡ್ ಅಲರ್ಟ್ ಸ್ಥಿತಿ ನೀಡಲಾಗಿದೆ) ದಿನದ ನಂತರ ತೆರೆಯಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ರಾಜ್ಯದ ಇತರ ಭಾಗಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದೆ.
ಕಕ್ಕಿ-ಆನಾತೋಡ್ ಜಲಾಶಯಕ್ಕೂ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಪತ್ತನಂತಿಟ್ಟ ಆಡಳಿತ ತಿಳಿಸಿದೆ. ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ಇಂದು (20-11-2021) ಪಂಬಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಿದೆ ಎಂದು ಈ ಮೂಲಕ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ. ಎಸ್. ಅಯ್ಯರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಸ್ಲಾಟ್ ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಹತ್ತಿರದ ಸಂಭವನೀಯ ಸ್ಲಾಟ್ನಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಕೋವಿಡ್- 19 ಪರಿಸ್ಥಿತಿಯನ್ನು ಎದುರಿಸಿ, ನೂರಾರು ಭಕ್ತರು ಅಯ್ಯಪ್ಪ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ವಾರ್ಷಿಕ ಮಂಡಲಂ- ಮಕರವಿಳಕ್ಕು ತೀರ್ಥಯಾತ್ರೆಗಾಗಿ ನವೆಂಬರ್ 16ರಂದು ದೇವಸ್ಥಾನ ಬಾಗಿಲು ತೆರೆದಾಗಿನಿಂದ ಪ್ರಾರ್ಥನೆ ಸಲ್ಲಿಸಲು ಬೆಟ್ಟದ ಮೂಲಕ ಚಾರಣ ಮಾಡುತ್ತಿದ್ದಾರೆ.
Recommended Video
ಸಾಂಕ್ರಾಮಿಕ ಕೊರೊನಾ ಸೋಂಕು ಮತ್ತು ಭಾರೀ ಮಳೆಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹರಿವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಹಿಂದಿನ ವರ್ಷದಂತೆ ಈ ಬಾರಿಯೂ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.