ಶಬರಿಮಲೆ ಯಾತ್ರಾರ್ಥಿಗಳ ಭದ್ರತೆ ಕುರಿತು ವಿಶೇಷ ಲಕ್ಷ್ಯ
ತಿರುವನಂತಪುರಂ, ನವೆಂಬರ್.19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ತೆರಳುವ ಯಾತ್ರಾರ್ಥಿಗಳ ಭದ್ರತೆ ಕುರಿತು ಈ ಬಾರಿ ವಿಶೇಷ ಲಕ್ಷ್ಯ ವಹಿಸಲಾಗಿದೆ. ಸಂಜೆ 7 ಗಂಟೆಗೆ ಪಂಪಾದಿಂದ ಹೊರಡುವ ಯಾತ್ರಿಕರು ರಾತ್ರಿ 9 ಗಂಟೆ ವೇಳೆಗೆ ಸನ್ನಿಧಾನವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಬೆಟ್ಟದ ಮೇಲಿನ ಅಯ್ಯಪ್ಪ ಸ್ವಾಮಿಯ ದೇವಸ್ಥಾನವನ್ನು ರಾತ್ರಿ 9 ಗಂಟೆಗೆ ಮುಚ್ಚಲಾಗುತ್ತದೆ. ಈ ಅವಧಿಯೊಳಗೆ ಯಾತ್ರಾರ್ಥಿಗಳು ಸನ್ನಿಧಾನವನ್ನು ತಲುಪುವಂತೆ ನೋಡಿಕೊಳ್ಳಲು ಚಾರಣದ ಮಾರ್ಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯು ವಿಶೇಷ ಗಮನ ವಹಿಸಲಿದ್ದಾರೆ.
ಶಬರಿಮಲೆ ದರ್ಶನ: ಭಕ್ತರ ಮಿತಿ ಹೆಚ್ಚಿಸುವ ಸಾಧ್ಯತೆ
ಸನ್ನಿಧಾನಂನಲ್ಲಿ ಶಬರಿಮಲೆಯ ವಿಶೇಷ ಅಧಿಕಾರಿ ಬಿ. ಕೃಷ್ಣಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸನ್ನಿಧಾನಂನಲ್ಲಿ ಕೊವಿಡ್-19 ಶಿಷ್ಟಾಚಾರ ಪಾಲನೆ ಮತ್ತು ಎಲ್ಲ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸೂಚನೆ ನೀಡಲಾಯಿತು.
ಸನ್ನಿಧಾನದ ಸುತ್ತಲೂ ಕೊವಿಡ್-19 ಶಿಷ್ಟಾಚಾರ:
ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಂಯೋಜಕರ ಸಮಿತಿಯನ್ನು ರಚಿಸಲಾಗಿದೆ. ಪ್ರತಿಯೊಂದು ಇಲಾಖೆಗಳಿಂದ ಒಬ್ಬ ಅಧಿಕಾರಿಯನ್ನು ಒಳಗೊಂಡ ಸಮಿತಿ ಇದಾಗಿದ್ದು, ಸನ್ನಿಧಾನಂ ಸುತ್ತಲೂ ಕೊವಿಡ್-19 ಶಿಷ್ಟಾಚಾರದ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಫ್ಲೈಓವರ್ ಪೂರ್ವದ ಹಾದಿಯಲ್ಲಿರುವ ಯಾತ್ರಾರ್ಥಿಗಳು ತಮ್ಮ ಇರುಮುಡಿ ಕಟ್ಟನ್ನು ಕೊರೊನಾವೈರಸ್ ಮಾರ್ಗಸೂಚಿಗಳ ಅನುಸಾರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
Recommended Video
ಖಾಸಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರದ ಪ್ಲೇಟ್ ಮತ್ತು ಕಪ್ ಗಳನ್ನು ಕೊವಿಡ್-19 ಶಿಷ್ಟಾಚಾರದ ಅನ್ವಯ ಬಿಸಾಡುವುದಕ್ಕೆ ಸೂಚಿಸಲಾಗಿದೆ. ಮರಕುಟ್ಟಮ್, ಚರಲ್ಮೇಡು, ಸನ್ನಿಧಾನಂನಲ್ಲಿ ಕಾರ್ಯ ನಿರ್ವಹಿಸುವ ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆ ವತಿಯಿಂದ ಮುಖದ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.