ಶಬರಿಮಲೆಯಲ್ಲಿ ತಾತ್ಕಾಲಿಕ ಅಂಗಡಿ ಹಾಕಲು ಕೊವಿಡ್-19 ವರದಿ ಕಡ್ಡಾಯ!
ತಿರುವನಂತಪುರಂ, ನವೆಂಬರ್.25: ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಶಬರಿಮಲೆಯ ಆವರಣದಲ್ಲಿ ತಾತ್ಕಾಲಿಕ ಅಂಗಡಿಗಳನ್ನು ಹಾಕಿಕೊಳ್ಳುವವರೂ ತಮಗೆ ಕೊವಿಡ್-19 ಸೋಂಕು ತಗುಲಿಲ್ಲ ಎಂದು ದೃಢೀಕರಿಸುವ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಭಕ್ತರು ಮತ್ತು ಯಾತ್ರಾರ್ಥಿಗಳಿಗಾಗಿ ತೆರೆಯಲಾಗುತ್ತದೆ. ಯಾತ್ರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿಯು ಪರಿಶೀಲನೆ ನಡೆಸಿದೆ.
ಶಬರಿಮಲೆ ಭಕ್ತರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ
ಹೆಚ್ಚುವರಿ ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ಮತ್ತು ಪೊಲೀಸ್ ವಿಶೇಷ ಅಧಿಕಾರಿ ಬಿ. ಕೃಷ್ಣಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಮುಂಬರುವ ದಿನಗಳಲ್ಲಿ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಕೊವಿಡ್-19 ಶಿಷ್ಟಾಚಾರ ಪಾಲನೆ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿತ್ತು
ಕೊವಿಡ್-19 ಶಿಷ್ಟಾಚಾರ ಪಾಲನೆ ಕಡ್ಡಾಯ:
ಶಬರಿಮಲೆ ಸನ್ನಿಧಾನಮ್ ನಲ್ಲಿ ಕೊರೊನಾವೈರಸ್ ಶಿಷ್ಟಾಚಾರ ಪಾಲನೆ ಬಗ್ಗೆ ಲಕ್ಷ್ಯ ವಹಿಸುವುದಕ್ಕೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸನ್ನಿಧಾನ ಆವರಣದಲ್ಲಿ ಇರುವ ಅಂಗಡಿಗಳ ಮೇಲೆ ನಿಗಾ ವಹಿಸುವುದಕ್ಕೆ ಕೊವಿಡ್-19 ಶಿಷ್ಟಾಚಾರ ಪಾಲನೆ ಸಮಿತಿಯನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ ಎಂದು ತಿರುವಾಂಕೂರ್ ದೇವಸ್ವಂ ಮಂಡಳಿಯು ಸಭೆ ನಂತರದಲ್ಲಿ ತಿಳಿಸಿದೆ. ಶಬರಿಮಲೆ ಯಾತ್ರಾರ್ಥಿಗಳು ಮತ್ತು ಅಧಿಕಾರಿಗಳು ಕೊವಿಡ್-19 ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ತಾತ್ಕಾಲಿಕ ಅಂಗಡಿಗಳನ್ನು ಹಾಕಿಕೊಂಡಿರುವವರು ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂಬುದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಪ್ರತಿ ಗಂಟೆಗೊಮ್ಮೆ ತಾತ್ಕಾಲಿಕ ಅಂಗಡಿಗಳ ಸುತ್ತಲೂ ಸ್ಯಾನಿಟೈಸ್ ಮಾಡುವುದಕ್ಕೆ ಸೂಚಿಸಲಾಗಿದೆ.