ಶಬರಿಮಲೆಗೆ ಬಂದಿದ್ದ ತಮಿಳುನಾಡು ಭಕ್ತನಿಗೆ ಕೊರೊನಾ ಸೋಂಕು
ತಿರುವನಂತಪುರಂ, ಅಕ್ಟೋಬರ್ 19: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಬಂದಿದ್ದ ತಮಿಳುನಾಡಿನ ಭಕ್ತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ದೇವಸ್ಥಾನಕ್ಕೆ ಬಂದಿದ್ದ ಸಂದರ್ಭದಲ್ಲಿ ಆಂಟಿಜನ್ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಕೊವಿಡ್ 19 ಮಾರ್ಗಸೂಚಿ ಪ್ರಕಾರ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡುವವರು 48 ಗಂಟೆಗಳ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಿರಬೇಕು ಹಾಗೂ ವರದಿ ನೆಗೆಟಿವ್ ಇರಬೇಕು. ವ್ಯಕ್ತಿಯು ಒಬ್ಬಂಟಿಯಾಗಿ ದೇವರ ದರ್ಶನಕ್ಕೆ ಬಂದಿದ್ದ ಕಾರಣ ಆತನನ್ನು ಕೊವಿಡ್ ಫರ್ಸ್ಟ್ ಲೈನ್ ಟ್ರೀಟ್ಮೆಂಟ್ ಸೆಂಟರ್ಗೆ ಕಳುಹಿಸಲಾಗಿದೆ.
ಏಳು ತಿಂಗಳ ಬಳಿಕ ಭಕ್ತರಿಗಾಗಿ ತೆರೆದ ಶಬರಿಮಲೆ ದೇವಸ್ಥಾನ: ಈ ನಿಯಮಗಳ ಪಾಲನೆ ಕಡ್ಡಾಯ
ಅಯ್ಯುಪ್ಪ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಕೈಯಲ್ಲಿ ಕೊರೊನಾ ನೆಗೆಟಿವ್ ವರದಿ ಇರಬೇಕು. ಕೊರೊನಾ ಸೋಂಕಿನಿಂದಾಗು ಮುಚ್ಚಿದ್ದ ಅಯ್ಯಪ್ಪ ದೇಗುಲ ಅಕ್ಟೋಬರ್ 17 ರಂದು ತೆರೆಯಲಾಗಿದೆ.
ಶುಕ್ರವಾರದಿಂದ ತಿಂಗಳ ಪೂಜೆ ಆರಂಭಗೊಂಡಿದೆ. ಅಕ್ಟೋಬರ್ 21ರವರೆಗೆ ಭಕ್ತರಿಗೆ ಬರಲು ಅವಕಾಶ ನೀಡಲಾಗಿದೆ.ನಿತ್ಯ 250 ಭಕ್ತರಿಗೆ ಮಾತ್ರ ಅವಕಾಶವಿದೆ. 10 ರಿಂದ 60 ವರ್ಷದೊಳಗಿನವರಿಗೆ ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶವಿದೆ.
ಕೊರೋನಾ ವೈರಸ್ ಸೋಂಕು ಇಲ್ಲದ ಹಾಗೂ ಫಿಟ್ನೆಸ್ ಸರ್ಟಿಫಿಕೆಟ್ ಹೊಂದಿರುವ ಭಕ್ತಾದಿಗಳಿಗೆ ಪಂಪಾ ಶಿಬಿರದಿಂದ ಗಿರಿಯಲ್ಲಿರುವ ದೇವಾಲಯಕ್ಕೆ ನಡೆದು ಸಾಗಲು ಮಧ್ಯಾಹ್ನ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಎತ್ತರದ ಬೆಟ್ಟ ಏರುತ್ತ ಸಾಗುವ ಭಕ್ತಾದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಿಲ್ಲ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಗಿರಿಯನ್ನು ಏರಲು ಈಗಲೂ ಅವಕಾಶ ನೀಡಿಲ್ಲ, ಕೋವಿಡ್-19 ಪರಿಸ್ಥಿತಿ ಸುಧಾರಿಸಲು ಕಾಯಬೇಕಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಪತ್ತೆಯಾದರೆ, ಚಿಕಿತ್ಸೆಗಾಗಿ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಪಂಪಾ ನದಿಯಲ್ಲಿ ಸ್ನಾನ ಮಾಡಲು ಅನುಮತಿ ಇಲ್ಲ.
ಅದರ ಬದಲು ಸ್ನಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಎರುಮೇಲಿ ಮತ್ತು ವಡಶ್ಶೇರಿಕ್ಕರ ಮಾರ್ಗಗಳಲ್ಲಿ ಮಾತ್ರ ಸಾಗಲು ಭಕ್ತಾದಿಗಳಿಗೆ ಅವಕಾಶವಿದ್ದು, ಕಾಡಿನ ಉಳಿದ ಎಲ್ಲ ಮಾರ್ಗಗಳನ್ನೂ ನಿರ್ಬಂಧಿಸಲಾಗಿದೆ.
ಭಕ್ತಾದಿಗಳಿಗೆ ದೇಗುಲದಲ್ಲಿ ಗುಂಪುಗೂಡಲು ಹಾಗೂ ಅಲ್ಲಿಯೇ ಇರಲು ಅವಕಾಶ ನೀಡಲಾಗಿಲ್ಲ. ಅಕ್ಟೋಬರ್ 21ರಂದು ದೇಗುಲ ಮತ್ತೆ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
Recommended Video