ಶಬರಿಮಲೆ ಮಕರವಿಳಕ್ಕು ಪೂಜೆ: ಇಂದಿನಿಂದ ಬುಕಿಂಗ್ ಆರಂಭ
ತಿರುವನಂತಪುರಂ, ಜನವರಿ 6: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಕರವಿಳಕ್ಕು ಸಂದರ್ಭದ ಪೂಜೆಯ ದರ್ಶನಕ್ಕೆ ಭಕ್ತರು ಟಿಕೆಟ್ಗಳನ್ನು ಬುಕಿಂಗ್ ಮಾಡಲು ಬುಧವಾರದಿಂದ ಅವಕಾಶ ನೀಡಲಾಗುತ್ತಿದೆ. ಜನವರಿ 8 ರಿಂದ 19ನೇ ತಾರೀಕಿನವರೆಗೆ ಶಬರಿಮಲೆ ಯಾತ್ರೆ ಕೈಗೊಳ್ಳುವವರಿಗಾಗಿ ಶಬರಿಮಲ ಆನ್ಲೈನ್ ವೆಬ್ ಪೋರ್ಟಲ್ನಲ್ಲಿ ಇಂದು ಸಂಜೆ 6 ಗಂಟೆಯಿಂದ ಟಿಕೆಟ್ ಬುಕಿಂಗ್ ಸೌಲಭ್ಯ ಶುರುವಾಗಲಿದೆ.
ದರ್ಶನಕ್ಕೂ ಮುನ್ನ 48 ಗಂಟೆಗಳ ಒಳಗಿನ ಅವಧಿಯಲ್ಲಿ ಭಕ್ತರು ಆರ್ಟಿ ಪಿಸಿಅರ್/ನ್ಯಾಟ್ ಮಾದರಿಗಳಲ್ಲಿ ಕೋವಿಡ್ ಪರೀಕ್ಷೆಗಳಿಗೆ ಒಳಪಟ್ಟು ನೆಗೆಟಿವ್ ವರದಿಗಳನ್ನು ತರಬೇಕು. ನೆಗೆಟಿವ್ ಪ್ರಮಾಣಪತ್ರ ಇದ್ದರೆ ಮಾತ್ರವೇ ಪ್ರವೇಶಾವಕಾಶ ನೀಡಲಾಗುತ್ತದೆ.
ಮಕರವಿಳಕ್ಕು ದಿನ ಭಕ್ತರ ಪ್ರವೇಶ ಕುರಿತು ಮಹತ್ವದ ಪ್ರಕಟಣೆ!
ಮಕರವಿಳಕ್ಕು, ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಗಳು ಮತ್ತು ಅಯ್ಯಪ್ಪ ಸ್ವಾಮಿ ಜ್ಯೋತಿ ದರ್ಶನಕ್ಕಾಗಿ ಭಕ್ತರು ಮುಂಚೆಯೇ ಅನುಮತಿಗಳನ್ನು ಪಡೆದುಕೊಳ್ಳಬೇಕಿದೆ. ಅಂತಹ ಅನುಮತಿ ಪಡೆದುಕೊಂಡ ಭಕ್ತರಿಗೆ ಮಾತ್ರವೇ ಶಬರಿಮಲೆಗೆ ಪ್ರವೇಶ ನೀಡಲಾಗುತ್ತದೆ. ಮಕರವಿಳಕ್ಕು ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣಕ್ಕೆ ಯಾವ ಭಕ್ತರಿಗೂ ಪ್ರವೇಶಾವಕಾಶ ನೀಡುವುದಿಲ್ಲ ಎಂದು ದೇವಾಲಯದ ಮಂಡಳಿ ಸ್ಪಷ್ಟಪಡಿಸಿದೆ.
ಸಂಕ್ರಾಂತಿ ದಿನದಂದು ಅತಿ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಲಕ್ಷಾಂತರ ಭಕ್ತರು ತೆರಳುತ್ತಾರೆ. ಆದರೆ ಈ ಬಾರಿ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಭಕ್ತರ ಗರಿಷ್ಠ ಸಂಖ್ಯೆಯನ್ನು 5,000ಕ್ಕೆ ಹೆಚ್ಚಿಸಲಾಗಿದೆ. ಈ ಸಂಖ್ಯೆಯ ಮೇಲೆ ಒಬ್ಬರೇ ಒಬ್ಬ ಭಕ್ತರಿಗೂ ಅವಕಾಶ ನೀಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.