ಶಬರಿಮಲೆ: ಈ ಬಾರಿ ಆದಾಯಕ್ಕಿಂತ ವೆಚ್ಚ ನಾಲ್ಕು ಪಟ್ಟು ಹೆಚ್ಚು
ತಿರುವನಂತಪುರಂ, ಡಿಸೆಂಬರ್ 9: ಕೋವಿಡ್ ಭೀತಿಯ ನಡುವೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರಿ ಕುಸಿತದ ಆತಂಕ ನಡುವೆ, ಈ ಅವಧಿಯಲ್ಲಿ ಪವಿತ್ರ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 50,000 ಸಮೀಪಿಸಿದೆ.
ಟ್ರ್ಯಾವಂಕೋರ್ ದೇವಸ್ವಂ ಮಂಡಳಿಯ ಅಂದಾಜಿನ ಪ್ರಕಾರ ಸುಮಾರು 44,000 ಭಕ್ತರು ಡಿಸೆಂಬರ್ 8ರವರೆಗೂ ಕಳೆದ 23 ದಿನಗಳಲ್ಲಿ ಭೇಟಿ ನೀಡಿದ್ದು, ಇವರಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಶಬರಿಮಲೆ ಯಾತ್ರೆಯ ಇದುವರೆಗಿನ ಅವಧಿಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ತೀರಾ ಕಡಿಮೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಅವಧಿಯಲ್ಲಿ ಪ್ರತಿ ದಿನವೂ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ.
ಶಬರಿಮಲೆ: ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧ ವಾಪಸ್
ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 82 ಕೋಟಿ ರೂ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಕೇವಲ 4 ಕೋಟಿ ರೂ. ಆದಾಯ ಸಂಗ್ರವಾಗಿದೆ. ಆದಾಯದಲ್ಲಿ ಭಾರಿ ಇಳಿಕೆಯಾದರೂ ಒಟ್ಟಾರೆಯಾಗಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಲೆಕ್ಕಹಾಕಿದರೆ ಇದು ಉತ್ತಮ ಆದಾಯವೇ ಆಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಈಗ ವಾರದ ದಿನಗಳಲ್ಲಿ 2,000 ಮತ್ತು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ 3,000 ಭಕ್ತರ ಭೇಟಿಗೆ ಅವಕಾಶ ನೀಡಲಾಗುತ್ತಿದೆ.
'ಶಬರಿಮಲೆ ದೇವಸ್ಥಾನವು ಲಾಭ ಅಥವಾ ನಷ್ಟದ ಲೆಕ್ಕಾಚಾರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೂ ಈ ಬಾರಿ ಯಾತ್ರಿಕರಿಗೆ ಸೌಲಭ್ಯಗಳನ್ನು ಒದಗಿಸಲು ಉಂಟಾಗುವ ವೆಚ್ಚವು ಇದುವರೆಗೂ ದೊರಕಿರುವ ಆದಾಯದ ಕನಿಷ್ಠ ನಾಲ್ಕುಪಟ್ಟು ಹೆಚ್ಚಾಗುವ ಅಂದಾಜಿದೆ' ಎಂದು ಟಿಡಿಬಿ ಅಧ್ಯಕ್ಷ ಎನ್. ವಾಸು ತಿಳಿಸಿದ್ದಾರೆ.
ಶಬರಿಮಲೆಯಾಚೆ ಪ್ರಮುಖ ಸ್ಥಳೀಯ ವ್ಯಾಪಾರಿ ಕೇಂದ್ರವಾದ ಪಟ್ಟಣಮಿತ್ತ ಜಿಲ್ಲೆಯಲ್ಲಿ ಕಳೆದ ಎರಡುತಿಂಗಳಿನಿಂದ ವ್ಯಾಪಾರವು ಹೆಚ್ಚೂ ಕಡಿಮೆ ಮುಚ್ಚಿಹೋಗಿದೆ. ಇಲ್ಲಿ ಭಕ್ತರಿಲ್ಲದೆ ವ್ಯಾಪಾರಿ ತಾಣಗಳು ಬಿಕೋ ಎನ್ನುತ್ತಿವೆ. ಜತೆಗೆ ಸ್ಥಳೀಯ ಸಂಸ್ಥೆಗಳು ಈ ಬಾರಿ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಭಕ್ತರಿಗೆ ಪ್ರತಿ ಬಾರಿ ಮಾಡುವಂತೆ ಈ ಸಲ ಯಾವುದೇ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ.