ಶಬರಿಮಲೆ ವಿಚಾರದಲ್ಲಿ ನಂಬಿಕೆ ಸುಳ್ಳಾಗಲ್ಲ ಎಂದ ಮುಖ್ಯ ಅರ್ಚಕರು
ತಿರುವನಂತಪುರ, ನವೆಂಬರ್ 14: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಈ ಧ್ಯೇಯವಾಕ್ಯವನ್ನು ಇಡೀ ವಿಶ್ವಕ್ಕೆ ಸಾರಿದ ದೇಶವೇ ಭಾರತ. ಇಲ್ಲಿನ ಏಕತೆ, ಭಾವೈಕ್ಯತೆ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ನಡೆಯುವ ಕೆಲವು ಆಚರಣೆಗಳು ಇಂದಿಗೂ ಜನರಲ್ಲಿ ಅಚ್ಚರಿ ಮೂಡಿಸುತ್ತವೆ.
ಇಂತಹ ಆಚರಣೆಗಳಲ್ಲಿ ಶಬರಿಮಲೆ ವಿಚಾರವೂ ಕೂಡಾ ಒಂದು. ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆ ಎಂಬ ನಂಬಿಕೆಯೂ ಇದೆ. ಆದರೆ, ಕಳೆದ ಬಾರಿ ಸುಪ್ರೀಂಕೋರ್ಟ್ ಅಂಥದೊಂದು ಆಚರಣೆಗೆ ಬ್ರೇಕ್ ಹಾಕಿತ್ತು.
ಶಬರಿಮಲೆ ತೀರ್ಪು: ಸಪ್ತಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾವಣೆ
ಎಲ್ಲ ವಯೋಮಾನದ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಬಹುದು ಎಂಬ ತೀರ್ಪನ್ನೂ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ 56ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟ್ ಸಪ್ತ ಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಿದೆ.
ನಂಬಿಕೆ ಸುಳ್ಳಾಗಲ್ಲ ಎಂದ ಮುಖ್ಯ ಅರ್ಚಕರು:
ಸುಪ್ರೀಂಕೋರ್ಟ್ ಸಪ್ತ ಸದಸ್ಯ ಪೀಠಕ್ಕೆ ಅರ್ಜಿಗಳ ವಿಚಾರಣೆಯನ್ನು ವರ್ಗಾವಣೆಗೊಳಿಸಿದ್ದು, ಭಕ್ತರಲ್ಲಿನ ಭರವಸೆಯನ್ನು ಹೆಚ್ಚಿಸಿದೆ ಎಂದು ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ ಕಂದರಾರು ರಾಜೀವರು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ನ ಇಂದಿನ ತೀರ್ಮಾನ ಭಕ್ತರ ನಂಬಿಕೆ ಹಾಗೂ ಬಲವನ್ನು ಹೆಚ್ಚಿಸಿದೆ. ಸಪ್ತ ಸದಸ್ಯರ ಪೀಠದಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ಮುಖ್ಯ ಅರ್ಚಕರು ತಿಳಿಸಿದ್ದಾರೆ.
ಕಳೆದ 2018 ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿತ್ತು. ಆದರೆ, ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒಟ್ಟು 56 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವೆಲ್ಲವುಗಳ ವಿಚಾರಣೆಯನ್ನು ಕೋರ್ಟು ಮುಗಿಸಿದ್ದು, ಇಂದು ತೀರ್ಪು ನೀಡಬೇಕಿತ್ತು.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡುವಂತಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಸ್ಥಾನ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು.