ಶಬರಿಮಲೆ ಪ್ರಹಸನ: ಮಹಿಳೆಯರ ಪ್ರವೇಶದಿಂದ ಮುಚ್ಚಿದ ಬಾಗಿಲಿನವರೆಗೆ...
ತಿರುವನಂತಪುರಂ, ಜನವರಿ 02: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಬುಧವಾರ ನಸುಕಿನಲ್ಲಿ ಬಿಂದು ಮತ್ತು ಕನಕದುರ್ಗ ಎಂಬ ಇಬ್ಬರು ಮಹಿಳೆಯರು ಕೇರಳದ ಸುಪ್ರಸಿದ್ಧ ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸುವ ಮೂಲಕ ಎಂಟು ನೂರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದರು.
ಈ ಘಟನೆಯನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ಕ್ರಾಂತಿಕಾರೀ ನಡೆ ಎಂದು ಶ್ಲಾಘಿಸಿದ್ದರೆ, ಮತ್ತಷ್ಟು ಜನ, ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ್ದು ಭಕ್ತಿಯಿಂದಲ್ಲ, ಪ್ರಚಾರದ ಆಸೆಗೆ ಎಂದು ದೂರಿದ್ದಾರೆ.
ವೈರಲ್ ವಿಡಿಯೋ: ಕೊನೆಗೂ ಶಬರಿಮಲೆ ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರು
ಸೆಪ್ಟೆಂಬರ್ 29 ರಂದು ಸುಪ್ರೀಂ ಕೋರ್ಟ್, ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಮೇಲೆ ಶಬರಿಮಲೆಯಲ್ಲಿ ಒಂದಿಲ್ಲೊಂದು ವಿವಾದಾತ್ಮಕ ಘಟನೆಗಳು, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಇಂದು ನಸುಕಿನಲ್ಲಿ ನಡೆದ ಘಟನೆಗೆ ದೇಶ ತಲ್ಲಣಸಿದೆ. ಅಷ್ಟಕ್ಕೂ ಬೆಳಗ್ಗೆಯಿಂದ ದೇವಾಲಯದಲ್ಲಿ ಏನೆಲ್ಲ ಆಯ್ತು? ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ.
ದೇವಾಲಯ ಪ್ರವೇಶಿಸಿದ ಬಿಂದು, ಕನಕದುರ್ಗಾ
ಇಂದು ಬೆಳಿಗ್ಗೆ 3:45 ರ ನಸುಕಿನಲ್ಲಿ ಬಿಂದು ಮತ್ತು ಕನಕದುರ್ಗಾ ಎಂಬ 40 ವರ್ಷ ವಯಸ್ಸಿನ ಮಹಿಳೆಯರು ಪೊಲೀಸ್ ಬಂದೋಬಸ್ತಿನ ನಡುವಲ್ಲಿ ಅಯ್ಯಪ್ಪ ದೇವಾಲಯ ಪ್ರವೇಶಿಸಿದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಎಲ್ಲೆಡೆಯೂ ಆತಂಕದ ವಾತಾವರಣ ತಲೆದೂರಿತ್ತು.
ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರು
ಮಹಿಳೆಯರ ಪ್ರವೇಶ ಖಚಿತಪಡಿಸಿದ ಸರ್ಕಾರ
ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ್ದು ಸತ್ಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಸ್ವತಃ ಒಪ್ಪಿಕೊಂಡರು. ಪೊಲೀಸರು ಸಹ ಇದನ್ನು ದೃಢಪಡಿಸಿದರು.
ಶಬರಿಮಲೆ ಪ್ರವೇಶಕ್ಕೆ 'ವನಿತಾ ಮದಿಲ್'; ಬೇಕಲ್ ನಲ್ಲಿ ಕಲ್ಲುತೂರಾಟ
ಬಿಂದು, ಕನಕದುರ್ಗಾ ಹೇಳಿಕೆ
ದೇವಾಲಯ ಪ್ರವೇಶಿಸಿ ವಾಪಸ್ಸಾದ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಂದು ಮತ್ತು ಕನಕದುರ್ಗಾ, ನಮ್ಮನ್ನು ಭಕ್ತರ್ಯಾರು ತಡೆಯಲಿಲ್ಲ. ಅವರು ನಮ್ಮ ಪ್ರವೇಶಕ್ಕೆ ಪ್ರೋತ್ಸಾಹ ನೀಡಿದರು' ಎಂದರು. ಡಿಸೆಂಬರ್ 18 ರಂದು ಇದೇ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿತ್ತು.
ದೇವಾಲಯದ ಬಾಗಿಲು ಬಂದ್
ಈ ಘಟನೆಯ ನಂತರ, 'ಮಹಿಳೆಯರ ಪ್ರವೇಶದಿಂದ ದೇವಾಲಯದ ಪಾವಿತ್ರ್ಯ ಹಾಳಾಗಿದೆ' ಎಂದ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಬಾಗಿಲನ್ನು ಮುಚ್ಚಿತು. ದೇವಾಲಯದ ಶುದ್ಧೀಕರಣದ ಉದ್ದೇಶದಿಂದ ಬಾಗಿಲು ಮುಚ್ಚಿರುವುದಾಗಿ ಹೇಳಿತು.
ಮಹಿಳೆಯರ ಮನೆ ಮೇಲೆ ಕಲ್ಲು
ದೇವಾಲಯ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗಾ ಇಬ್ಬರ ಮನೆಗೂ ಸಾಕಷ್ಟು ಭದ್ರತೆಯನ್ನು ಕೇರಳ ಸರ್ಕಾರ ವದಗಿಸಿದೆ. ಆದರೂ ಆಕ್ರೋಶಗೊಂಡ ಕೆಲವು ಅಯ್ಯಪ್ಪ ಭಕ್ತರು ಈ ಇಬ್ಬರು ಮಹಿಳೆಯರ ಮನೆಯ ಮೇಲೆ ಕಲ್ಲುತೂರಾಟ ನಡೆಸಿದರು.
ಈ ಇಬ್ಬರು ಮಹಿಳೆಯರು ಯಾರು?
ದೇವಾಲಯ ಪ್ರವೇಶಿಸಿದ ಬಿಂದು ಅವರಿಗೆ 42 ವರ್ಷ ವಯಸ್ಸು, ಸಿಪಿಐಎಂ ಕಾರ್ಯಕರ್ತೆಯಾಗಿರುವ ಅವರು ಕಾಲೇಜ್ ಉಪನ್ಯಾಸಕಿ ಎಂದು ಪಿಟಿಐ ವರದಿ ಮಾಡಿದೆ.
42 ವರ್ಷ ವಯಸ್ಸಿನ ಕನಕದುರ್ಗ ನಾಗರಿಕ ಪೂರೈಕೆ ಇಲಾಖೆಯಲ್ಲಿ ಕೆಲಸ ಮಾಡುವ ಉದ್ಯೋಗಿ.