ಶಬರಿಮಲೆಯಲ್ಲಿ ಮಂಡಲ ಪೂಜೆ; ಪರಿಶೀಲನೆ ನಂತರ ಭಕ್ತರಿಗೆ ಅವಕಾಶ
ತಿರುವನಂತಪುರಂ, ಡಿಸೆಂಬರ್ 26: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪವಿತ್ರ ಮಂಡಲ ಪೂಜೆ ಶನಿವಾರದಿಂದ ಆರಂಭವಾಗಿದ್ದು, ಹಲವು ಕಡೆಗಳಿಂದ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಕೊರೊನಾ ಸೋಂಕಿನ ನಡುವೆ ಅಯ್ಯಪ್ಪನ ದರ್ಶನಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಭಕ್ತರು ತಮ್ಮೊಂದಿಗೆ ಕೊರೊನಾ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಕಡ್ಡಾಯವಾಗಿದೆ. ಕೊರೊನಾ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಿ, ಆ ಪ್ರಮಾಣ ಪತ್ರವನ್ನು ತಮ್ಮೊಂದಿಗೆ ತಂದವರಿಗಷ್ಟೆ ಪ್ರವೇಶಕ್ಕೆ ಅನುಮತಿ ನೀಡಲು ಕೇರಳ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಅಯ್ಯಪ್ಪ ಭಕ್ತರೇ ಗಮನಿಸಿ: ಶಬರಿಮಲೆ ಏರಲು ಈ ದಾಖಲೆ ಅತ್ಯಗತ್ಯ
ದೇವಸ್ಥಾನ ಪ್ರವೇಶಿಸುವ 48 ಗಂಟೆಗಳ ಮುನ್ನ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ ಪ್ರಮಾಣ ಪತ್ರ ತರುವುದು ಕಡ್ಡಾಯ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕೂಡ ಭಕ್ತರಿಗೆ ತಿಳಿಸಿದೆ. "ದೇವಸ್ಥಾನ ಪ್ರವೇಶಕ್ಕೆ ಮುನ್ನ, 48 ಗಂಟೆಗಳ ಒಳಗೆ ನಡೆಸಿದ ಕೊರೊನಾ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಭಕ್ತರಿಗೆ ಕಡ್ಡಾಯ. ಇಲ್ಲವೆಂದರೆ ಭಕ್ತರಿಗೆ ದೇವಸ್ಥಾನಕ್ಕೆ ಅನುಮತಿ ಇಲ್ಲ" ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.
ಶನಿವಾರದಿಂದ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಈಚೆಗೆ ಹೈಕೋರ್ಟ್, ಶಬರಿಮಲೆಗೆ ಮಂಡಲ ಮಕರವಿಳಕ್ಕು ಅವಧಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯನ್ನೂ ಐದು ಸಾವಿರಕ್ಕೆ ಏರಿಸಿತ್ತು. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಶಬರಿಮಲೆಯಲ್ಲಿ ಆಂಟಿಜೆನ್ ಪರೀಕ್ಷೆಯನ್ನು ಚುರುಕುಗೊಳಿಸಿದೆ.
ಡಿಸೆಂಬರ್ 26ರ ಮಂಡಲ ಪೂಜೆ ನಂತರ ದೇವಸ್ಥಾನವನ್ನು ಮುಚ್ಚಲಿದ್ದು, ಡಿಸೆಂಬರ್ 31ರ ಮಕರವಿಳಕ್ಕು ಪೂಜೆಯಂದು ತೆರೆಯಲಾಗುತ್ತದೆ. ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಆರಂಭವಾಗಲಿದ್ದು, ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೋವಿಡ್ 19 ನೆಗೆಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ.
ಕೇರಳದಲ್ಲಿ ಶುಕ್ರವಾರ, ಡಿ.25ರ ವರದಿಯಂತೆ, 5000 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 732084 ಪ್ರಕರಣಗಳು ದಾಖಲಾಗಿದ್ದು, 664951 ಮಂದಿ ಬಿಡುಗಡೆಯಾಗಿದ್ದಾರೆ. 2,930 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.