ಅಂಚೆ ಮೂಲಕ ಶಬರಿಮಲೆ ಪ್ರಸಾದ: 1.10 ಕೋಟಿ ರೂ ಸಂಗ್ರಹ
ತಿರುವನಂತಪುರಂ, ಡಿಸೆಂಬರ್ 19: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಾಧ್ಯವಾಗದ ದೇಶದ ಮೂಲೆ ಮೂಲೆಯಲ್ಲಿನ ಭಕ್ತರ ಮನೆ ಬಾಗಿಲಿಗೇ ತಲುಪಿಸುವ ಕಾರ್ಯವನ್ನು ಇಂಡಿಯಾ ಪೋಸ್ಟ್ ಮಾಡುತ್ತಿದೆ. ಅಂಚೆ ಕಚೇರಿಯಲ್ಲಿ ನಿಗದಿತ ಮೊತ್ತದ ಹಣ ಪಾವತಿಸಿದವರಿಗೆ ಶಬರಿಮಲೆ ತಲುಪುತ್ತಿದೆ. ಈ ಯೋಜನೆ ಯಶಸ್ವಿಯಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ಮಂಡಳಿ ಮತ್ತು ಇಂಡಿಯಾ ಪೋಸ್ಟ್ ನಡುವಿನ ಒಪ್ಪಂದದಂತೆ ಭಕ್ತರ ಮನೆಗೆ ಅಂಚೆ ಮೂಲಕ ಪ್ರಸಾದ ತಲುಪಿಸಲಾಗುತ್ತಿದೆ. ಈವರೆಗೂ ಇದರಿಂದ 1,10,88,900 ರೂ ಸಂಗ್ರಹವಾಗಿದೆ. ಅದರಲ್ಲಿ 61,60,500 ರೂದಷ್ಟು ಮೊತ್ತವು ಟ್ರ್ಯಾವಂಕೋರ್ ದೇವಸ್ವಂ ಮಂಡಳಿಗೆ ಬಂದಿದ್ದರೆ, ಉಳಿದ 49,28,400 ರೂ ಅಂಚೆ ಇಲಾಖೆಯಲ್ಲಿ ಸ್ವೀಕೃತವಾಗಿದೆ. ಇದುವರೆಗೂ 24,642 ಪ್ರಸಾದದ ಕಿಟ್ಗಳನ್ನು ಹಂಚಿಕೆ ಮಾಡಲಾಗಿದೆ.
ಕೋವಿಡ್ ಸೋಂಕಿನ ಹೆಚ್ಚಳದ ಕಾರಣದಿಂದ ಈ ಬಾರಿ ಭಕ್ತರ ಪ್ರವೇಶಕ್ಕೆ ಮಿತಿ ಹೇರಲಾಗಿದೆ. ಹೀಗಾಗಿ ಭಕ್ತರಿಗೆ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸಲು ದೇವಸ್ವಂ ಮಂಡಳಿ ತೀರ್ಮಾನಿಸಿತ್ತು. ಅರವಣ, ತುಪ್ಪ, ಕೇಸರಿ, ಅರಿಶಿಣ, ವಿಭೂತಿ ಮತ್ತು ಅರ್ಚನೆಯ ಪ್ರಸಾದವನ್ನು ಈ ಕಿಟ್ ಒಳಗೊಂಡಿದೆ. ಆರಂಭದಲ್ಲಿ ಸೇವನೆಯ ಪ್ರಸಾದವನ್ನು ಕೂಡ ಇದರಲ್ಲಿ ಸೇರಿಸಲಾಗಿತ್ತು. ಆದರೆ ಅದು ಹಾಳಾಗುವ ಕಾರಣದಿಂದ ತೆಗೆದುಹಾಕಲಾಗಿದೆ.
ಅರವಣ ಪ್ರಸಾದವನ್ನು ಭದ್ರತಾ ಕಾರಣದಿಂದ ನೇರವಾಗಿ ಸ್ಪೀಡ್ ಪೋಸ್ಟ್ ಮೂಲಕ ಪೋಸ್ಟ್ಮ್ಯಾನ್ ಮನೆಗೆ ತಲುಪಿಸಲಾಗುತ್ತಿದೆ. ಅಂಚೆ ಕಚೇರಿಯಲ್ಲಿ ಹಣ ಪಾವತಿ ಮಾಡುವಮೂಲಕ ಅರವಣ ಪ್ರಸಾದವನ್ನು ಬುಕ್ ಮಾಡಬೇಕು. ಇದು ದೇಶದ ಮೂಲೆ ಮೂಲೆಗೂ ಸಿಗಲಿದೆ.
ಬುಕಿಂಗ್ ಶುಲ್ಕವಾಗಿ 450 ರೂ ಪಡೆದುಕೊಳ್ಳಲಾಗುತ್ತಿದ್ದು, ಇದರಲ್ಲಿ ಅರವಣದ ತಯಾರಿಕೆ ಮಾಡುವ ದೇವಸ್ವಂ ಮಂಡಳಿಗೆ 250 ರೂ ಪಾಲು ದೊರಕಲಿದೆ. ಉಳಿದ 200 ರೂ.ಗಳನ್ನು ಅಂಚೆ ಕಚೇರಿಯ ಪಾರ್ಸೆಲ್ ಮತ್ತು ಸಾಗಾಣಿಕೆ ವೆಚ್ಚವಾಗಿ ಬಳಸಿಕೊಳ್ಳಲಾಗುತ್ತದೆ.