ಮಂಗಳೂರಿಗೆ ಬರುತ್ತಿದ್ದ ಎರಡು ರೈಲುಗಳಲ್ಲಿ ದರೋಡೆ
ಕೋಯಿಕ್ಕೋಡ್, ಫೆಬ್ರವರಿ 8: ಮಂಗಳೂರಿಗೆ ಬರುತ್ತಿದ್ದ ಎರಡು ರೈಲುಗಳಲ್ಲಿ ಶನಿವಾರ ಬೆಳಿಗ್ಗೆ ದರೋಡೆ ನಡೆದಿದ್ದು, ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಎ.ಸಿ. ಕೋಚ್ಗಳನ್ನು ಗುರಿಯಾಗಿರಿಸಿಕೊಂಡು ಈ ದರೋಡೆ ನಡೆದಿದೆ.
ಎರಡು ಪ್ರತ್ಯೇಕ ರೈಲುಗಳಲ್ಲಿ ದರೋಡೆ ನಡೆದಿದ್ದು, ಈ ಎರಡೂ ರೈಲುಗಳು ಮಂಗಳೂರಿಗೆ ಬರುತ್ತಿದ್ದವು. ಕೇರಳದಲ್ಲಿ ಈ ದರೋಡೆಗಳು ನಡೆದಿವೆ. ಕೋಚ್ ಒಳಗೆ ನುಗ್ಗಿದ ಕಳ್ಳರು, ಎರಡು ಕುಟುಂಬಗಳಿಂದ ಚಿನ್ನ, ವಜ್ರದ ಆಭರಣ ಮತ್ತು ಸುಮಾರು 20 ಲಕ್ಷ ರೂ ನಗದು ದೋಚಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಎರಡೂ ದರೋಡೆಗಳು ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಮತ್ತು ತಿರುವನಂತಪುರಂ-ಮಂಗಳೂರು ಮಲಬಾರ್ ಎಕ್ಸ್ಪ್ರೆಸ್ ರೈಲುಗಳ ಹವಾನಿಯಂತ್ರಿತ ಕಂಪಾರ್ಟ್ಮೆಂಟ್ಗಳಲ್ಲಿ ನಡೆದಿವೆ. ಹಗಲಿನ ಹೊತ್ತಿನಲ್ಲಿಯೇ ಈ ಘಟನೆ ನಡೆದಿರುವುದು ಕಳವಳ ಮೂಡಿಸಿದೆ.
ಎರಡು ನಿಲ್ದಾಣಗಳ ಮಧ್ಯೆ ಕಳವು
ಚೆನ್ನೈ-ಮಂಗಳೂರು ರೈಲಿನಲ್ಲಿ ತಿರುಪುರ್ ಮತ್ತು ತಿರೂರ್ ನಿಲ್ದಾಣಗಳ ನಡುವೆ ದರೋಡೆ ನಡೆದಿದೆ. ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿನ ಕಳ್ಳತನ ವಡಕರ ಮತ್ತು ಮಾಹೆ ನಿಲ್ದಾಣಗಳ ನಡುವೆ ನಡೆದಿದೆ.
ಆಭರಣ, ನಗದು ದರೋಡೆ
ಚೆನ್ನೈ-ಮಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ತಮಿಳುನಾಡು ಮೂಲದ ಪೊನ್ನಿಮಾರನ್ ಎಂಬ 54 ವರ್ಷದ ಮಹಿಳಾ ಪ್ರಯಾಣಿಕರು ಕುಟುಂಬದ ಇತರೆ ಮೂವರೊಂದಿಗೆ ಕಣ್ಣೂರಿಗೆ ತೆರಳುತ್ತಿದ್ದರು. ಅವರ ಬ್ಯಾಗ್ನಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ 22 ಸಾವಿರ ನಗದು ಹಣವನ್ನು ದೋಚಲಾಗಿದೆ. ತಮ್ಮ ಬ್ಯಾಗ್ ಕಳವು ಆಗಿರುವುದು ಅವರಿಗೆ ತಕ್ಷಣಕ್ಕೆ ಗಮನಕ್ಕೆ ಬಂದಿರಲಿಲ್ಲ.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಮುಂದಿನ ನಿಲ್ದಾಣದಲ್ಲಿ ರೈಲು ಹತ್ತಿದ ಪೊಲೀಸರು ಮತ್ತು ರೈಲ್ವೆ ಭದ್ರತಾ ಪಡೆಯ (ಆರ್ಪಿಎಫ್) ಸಿಬ್ಬಂದಿಗೆ ಈ ಕುಟುಂಬ ಮಾಹಿತಿ ನೀಡಿದ್ದು, ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರ್ಪಿಎಫ್ ತನಿಖೆಯನ್ನು ಆರಂಭಿಸಿದ್ದು, ರೈಲು ನಿಲ್ದಾಣಗಳ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಬಸ್ಸ್ಟ್ಯಾಂಡ್ ಮತ್ತು ಲಾಡ್ಜ್ಗಳಲ್ಲಿ ಹುಡುಕಾಟ ನಡೆಸಿದ್ದಾರೆ.
72 ಗ್ರಾಂ ಚಿನ್ನ ಕಳವು
ಸಿಂಗಪುರದಿಂದ ತಿರುವನಂತರಪುರಂದ ನೆಡುಂಬಾಶ್ಶೆರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಒಂದೇ ಕುಟುಂಬದ ಮೂವರು, ಅಂಗಮಲ್ಲಿಯಿಂದ ಕಣ್ಣೂರು ಸಮೀಪದ ಪಯನ್ನೂರ್ಗೆ ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದರು. ತಮ್ಮ ಬಳಿ ಇದ್ದ 72 ಗ್ರಾಂ ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಅವರಿಗೆ ರೈಲು ಮಾಹೆ ಸಮೀಪಿಸುತ್ತಿದ್ದಾಗ ಅರಿವಾಗಿತ್ತು ಎಂದು ರೈಲ್ವೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.