ಗುಲಾಬಿ ಬಣ್ಣಕ್ಕೆ ತಿರುಗಿದ ಕೇರಳದ ನದಿ : 'ರಿವರ್ ಆಫ್ ಹೋಪ್' ಎಂದ ಆನಂದ್ ಮಹಿಂದ್ರಾ
ತಿರುವನಂತಪುರ, ಜೂನ್ 11: ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳದಲ್ಲಿನ ಪರಿಸರಕ್ಕೆ ಮನಸೋಲದವರೇ ಇಲ್ಲ. ಒಂದೆಡೆ ಸಮುದ್ರ, ಮತ್ತೊಂದೆಡೆ ಸದಾ ಹಸಿರಿನಿಂದ ಕಂಗೊಳಿಸುವ ಅರಣ್ಯ, ತುಂಬಿ ಹರಿಯುವ ನದಿಗಳು, ಆಲಪ್ಪಿಯ ತೇಲುವ ಬೋಟ್ ಹೌಸ್ ಸದಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.
ಸಾಮಾನ್ಯವಾಗಿ ನದಿಗಳೆಂದರೆ ತಿಳಿ ನೀರಿನಿಂದ ಕೂಡಿರುತ್ತವೆ. ಮಳೆಗಾಳದಲ್ಲಿ ಮಾತ್ರ ನದಿಗಳು ಮಣ್ಣಿನ ಬಣ್ಣಕ್ಕೆ ತಿರುಗುವುದನ್ನು ನಾವು ನೋಡಬಹುದು. ಆದರೆ ಈಗ ಕೇರಳದ ನದಿಯೊಂದು ಗುಲಾಬಿ ಬಣ್ಣಕ್ಕೆ ತಿರುಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಿತ್ತಳೆ ಬಣ್ಣದ ಈ ನದಿ ನೀರಿನಲ್ಲಿ ವಾಸಿಸುವ ಜೀವಿಗಳಿಗಿಲ್ಲ ಆಯಸ್ಸು
ಕೇರಳದ ಕೋಝಿಕ್ಕೋಡ್ನಲ್ಲಿ ಅವಳ್ ಪಿಂಡಿ ನದಿ ಗುಲಾಬಿ ಬಣ್ಣಕ್ಕೆ ತಿರುಗಿದೆ. ಆದರೆ ನದಿಯ ನೀರು ಗುಲಾಬಿ ಬಣ್ಣಕ್ಕೆ ತಿರುಗಿಲ್ಲ, ಬದಲಾಗಿ ಇಡೀ ನದಿಯನ್ನು ಆವರಿಸಿಕೊಂಡಿರುವ ಗುಲಾಬಿ ಬಣ್ಣದ ಹೂವುಗಳು ನದಿಯೇ ಗುಲಾಬಿ ಬಣ್ಣದಲ್ಲಿದೆ ಎನ್ನುವಂತೆ ಕಾಣಿಸುವಂತೆ ಮಾಡಿದೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ನದಿ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತದಾದ್ಯಂತ ಈ ನದಿ ಗಮನ ಸೆಳೆದಿದೆ, ಈಗ ಈ ನದಿ ಪ್ರವಾಸಿಗರ ನೆಚ್ಚಿನ ಸ್ಥಳವಾಗಿ ಮಾರ್ಪಾಟಾಗಿದೆ.
ನದಿಯ ಬಣ್ಣ ಬದಲಾಗಲು ಹೂವುಗಳು ಕಾರಣ
ಫ್ಯಾನ್ ವರ್ಟ್ ಅಥವಾ ಸ್ಥಳಿಯ ಭಾಷೆಯಲ್ಲಿ 'ಮುಲ್ಲನ್ ಪಾಯಲ್' ಎಂದು ಕರೆಯುವ ಹೂವುಗಳೇ ನದಿ ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣ. ನದಿಯ ತುಂಬ ಕಣ್ಣು ಹಾಯಿಸಿದಷ್ಟು ದೂರ ಈ ಹೂವುಗಳು ತುಂಬಿದ್ದು, ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದೆ. ನದಿಯ ನೀರು ಕಾಣಿಸದ ಹಾಗೆ ಮುಲ್ಲನ್ ಪಾಯಲ್ ಹೂವುಗಳು ಹರಡಿಕೊಂಡಿವೆ.
ಫ್ಯಾನ್ ವರ್ಟ್ ದಕ್ಷಿಣ ಅಮೆರಿಕಾದ ಸಸ್ಯವಾಗಿದ್ದು ಇದನ್ನು ಸಾಮಾನ್ಯವಾಗಿ ಅಕ್ವೇರಿಯಂಗಳಲ್ಲಿ ಬಳಸಲಾಗುತ್ತದೆ. ಇದು ರೆಡ್ ಕ್ಯಾಬೊಂಬಾ ಕುಟುಂಬಕ್ಕೆ ಸೇರಿದೆ ಎಂದು ಸಸ್ಯ ತಜ್ಞರು ಹೇಳುತ್ತಾರೆ. ನದಿಯ ತುಂಬೆಲ್ಲಾ ಹರಡಿಕೊಂಡಿರುವ ಫ್ಯಾನ್ ವರ್ಟ್ ಗಿಡಗಳು ಹೂವು ಬಿಟ್ಟಿರುವುದು ನದಿ ಗುಲಾಬಿ ಬಣ್ಣದಲ್ಲಿ ಕಾಣುವಂತೆ ಮಾಡಿದೆ.
ಶಿಶಿಲದ ದೇವರ ಮೀನುಗಳ ರಕ್ಷಣೆಗೆ ತಲೆನೋವು ತಂದ ನೀರು ನಾಯಿ
ಮುಲ್ಲನ್ ಪಾಯಲ್ ಎಲ್ಲಿಂದ ಬಂತು
ನದಿ ಗುಲಾಬಿ ಬಣ್ಣದಂತೆ ಕಾಣಲು ಕಾರಣವಾದ ಫ್ಯಾನ್ವರ್ಟ್ ಹೂವು ಮೂಲತಃ ದಕ್ಷಿಣ ಅಮೆರಿಕದಿಂದ ಬಂದಿದೆ. ಸ್ಥಳೀಯ ಭಾಷೆಯಲ್ಲಿ ಮುಲ್ಲನ್ ಪಾಯಲ್ ಎಂದು ಕರೆಯುತ್ತಾರೆ. ಇದು ಅಕ್ವೇರಿಯಂನಲ್ಲಿ ಬೆಳೆಸುವ ಸಸ್ಯವಾಗಿದ್ದು, ಅದೇಗೆ ಕೇರಳದ ನದಿಯನ್ನು ಸೇರಿತು ಎಂದು ಯಾರಿಗೂ ಗೊತ್ತಿಲ್ಲ.
ಆಕಸ್ಮಿಕವಾಗಿ ಗಿಡ ನದಿಗೆ ಸೇರಿರಬಹುದು, ಇಲ್ಲವೇ ಸ್ಥಳೀಯರು ಗಿಡವನ್ನು ನದಿಗೆ ತಪ್ಪಿ ಎಸೆದಿರಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಪಿಂಕ್ ಬಣ್ಣಕ್ಕೆ ತಿರುಗಿರುವ ನದಿಯನ್ನು ನೋಡಲು ದೇಶ-ವಿದೇಶದಿಂದ ಜನರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ಅವಳ್ ಪಿಂಡಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿಢೀರ್ ಹೆಚ್ಚಳವಾಗಿರುವುದು ಪ್ರವಾಸೋದ್ಯಮಕ್ಕೂ ಖುಷಿಯನ್ನುಂಟು ಮಾಡಿದೆ.
|
ಫೋಟೋ ಹಂಚಿಕೊಂಡ ಆನಂದ್ ಮಹಿಂದ್ರಾ
ನದಿಯ ಚಿತ್ರವನ್ನು ಹಂಚಿಕೊಂಡಿರುವ ಆನಂದ್ ಮಹಿಂದ್ರಾ ಸೋಜಿಗ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ, "ಪ್ರವಾಸಿಗರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಎಂದು ಕೇಳಿ ನನಗೆ ಆಶ್ಚರ್ಯವೇನು ಆಗಿಲ್ಲ. ಆದರೆ ಈ ಫೋಟೋ ನೋಡಿದರೆ ನನ್ನ ಉತ್ಸಾಹವನ್ನೇ ಹೆಚ್ಚಿಸುತ್ತದೆ. ಈ ಫೋಟೊವನ್ನು ನನ್ನ ಹೊಸ ಸ್ಕ್ರೀನ್ ಸೇವರ್ ಮಾಡುತ್ತಿದ್ದೇನೆ, ಇದಕ್ಕೆ "ಭರವಸೆಯ ನದಿ" (ರಿವರ್ ಆಫ್ ಹೋಪ್)" ಎಂದು ಕರೆಯುತ್ತೇನೆ ಎಂದಿದ್ದಾರೆ.
ಪರಿಸರಕ್ಕೆ ಹಾನಿ ಎಂದ ತಜ್ಞರು
ನದಿಗೆ ಭೇಟಿ ನೀಡಿದ ಅನೇಕ ಜನರು ಫ್ಯಾನ್ವರ್ಟ್ ಹೂವುಗಳನ್ನು ಕಿತ್ತು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಜೀವಶಾಸ್ತ್ರಜ್ಞರು ಹೀಗೆ ಮಾಡಬಾರದು ಜನರನ್ನು ಎಚ್ಚರಿಸಿದ್ದಾರೆ. ಇದು ಸ್ಥಳೀಯ ಪರಿಸರ ವ್ಯವಸ್ಥೆಗೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ ಎಂದು ಅವರು ಹೇಳುತ್ತಾರೆ.
"ಈ ಸಸ್ಯಗಳು ರಾಜ್ಯದಾದ್ಯಂತ ಜಲಮೂಲಗಳಲ್ಲಿ ಹರಡುತ್ತದೆ, ಈ ಸಸ್ಯಗಳು ಬೆಳೆಯಲು ಅಧಿಕ ಆಮ್ಲಜನಕ ಅಗತ್ಯವಿರುವುದರಿಂದ ನದಿ, ನೀರಿನಲ್ಲಿರುವ ಇತರೆ ಸಸ್ಯ ಪ್ರಬೇಧ, ಜಲಚರಗಳ ಮೇಲೆ ಪ್ರಭಾವ ಬೀರುತ್ತದೆ. ಪರಿಸರ ವ್ಯವಸ್ಥೆ ನಾಶವಾಗಬಹುದು, ನೀರಿನ ಗುಣಮಟ್ಟದ ಮೇಲೂ ಇದು ಪರಿಣಾಮ ಬೀರಲಿದೆ" ಎಂದು ಕೇರಳದ ಅರಣ್ಯ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಟಿವಿ ಸಜೀವ್ ಹೇಳಿದ್ದಾರೆ.
2020ರಲ್ಲೂ ಇದೇ ರೀತಿ ಹೂವುಗಳು ಅರಳಿ ನದಿ ಗುಲಾಬಿ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆಗಲೂ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದ್ದವು. ಈ ಮತ್ತೊಮ್ಮೆ ಅದೇ ರೀತಿ ಆಗಿದ್ದು. ಸಾವಿರಾರು ಪ್ರವಾಸಿಗರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಿದ್ದಾರೆ