ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ತಿರುವನಂತಪುರಂ, ಜೂ. 02: ಕೇಂದ್ರವು ಕೋವಿಡ್ -19 ಲಸಿಕೆಗಳನ್ನು ಎಲ್ಲಾ ರಾಜ್ಯಗಳಿಗೆ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಬುಧವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ.
ರಾಜ್ಯದಲ್ಲಿ ತೀವ್ರವಾದ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಕೋವಿಡ್ -19 ಲಸಿಕೆಗಳನ್ನು ಎಲ್ಲಾ ರಾಜ್ಯಗಳಿಗೆ ಉಚಿತವಾಗಿ ನೀಡಬೇಕೆಂಬ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಈ ನಿರ್ಣಯವು ಲಸಿಕೆಗಳನ್ನು ಸಕಾಲಿಕವಾಗಿ ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
Profile: ಕೇರಳದಲ್ಲಿ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ವ್ಯಕ್ತಿಚಿತ್ರ
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೋವಿಡ್ -19 ರ ವಿರುದ್ಧ ಹೋರಾಡಲು, ನಾವು ಉಚಿತ ಸಾರ್ವತ್ರಿಕ ಲಸಿಕೆ ಒದಗಿಸಬೇಕಾಗಿದೆ. ಉಚಿತ ಲಸಿಕೆಯು ಸಮಾಜದ ಎಲ್ಲಾ ವರ್ಗಗಳನ್ನು ಈ ವೈರಸ್ನಿಂದ ರಕ್ಷಿಸಲಾಗಿದೆ ಎಂಬ ಖಾತರಿ ಒದಗಿಸುತ್ತದೆ ಎಂದು ಹೇಳಿದರು.
ಕೋವಿಡ್ -19 ರ ಮೊದಲ ಅಲೆಯು ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಈ ನಡುವೆ ದೇಶವು ಎರಡನೇ ಅಲೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ನಾವು ಲಸಿಕೆ ಅಭಿಯಾನ ವೇಗಗೊಳಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ದೇಶದ ಆರ್ಥಿಕತೆಗೂ ಸಹಕಾರಿಯಾಗಲಿದೆ ಎಂದು ಜಾರ್ಜ್ ಅಭಿಪ್ರಾಯಿಸಿದರು.
ಕೇರಳ ಮಾದರಿ ಸರ್ಕಾರ - ಗಮನಿಸಬೇಕಾದ 3 ಅಂಶಗಳು
ಸಾಂಕ್ರಾಮಿಕ ರೋಗವನ್ನು ಎದುರಿಸಲು ಮತ್ತು ಸಾರ್ವತ್ರಿಕ ಲಸಿಕೆ ಅಭಿಯಾನ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸದಸ್ಯರು ಕೆಲವು ಸಣ್ಣ ಬದಲಾವಣೆಗಳನ್ನು ಸೂಚಿಸಿ ನಿರ್ಣಯವನ್ನು ಸರ್ವಾನುಮತದಿಂದ ಬೆಂಬಲಿಸಿದರು.
(ಒನ್ಇಂಡಿಯಾ ಸುದ್ದಿ)