ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿರುವ ರೇಷ್ಮಾ
Recommended Video
ತಿರುವನಂತಪುರಂ, ಅಕ್ಟೋಬರ್ 16: ಕೇರಳದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಹೊಸ ಕ್ರಾಂತಿಯ ಅಧ್ಯಾಯವೊಂದಕ್ಕೆ ನಾಂದಿ ಹಾಡಲಿದ್ದಾರೆ ರೇಷ್ಮಾ ನಿಶಾಂತ್.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸುತ್ತಿದ್ದಂತೆಯೇ ಅತೀ ಹೆಚ್ಚು ಹಿಗ್ಗಿದವರ ಸಾಲಲ್ಲಿ ರೇಷ್ಮಾ ಅಗ್ರಗಣ್ಯರಾಗಿ ನಿಲ್ಲುತ್ತಾರೆ.
ಶಬರಿಮಲೆ ತೀರ್ಪನ್ನು ಮಹಿಳಾ ನ್ಯಾಯಮೂರ್ತಿ ಇಂದು ಅವರೇ ವಿರೋಧಿಸಿದ್ದೇಕೆ?
ಚಿಕ್ಕ ವಯಸ್ಸಿನಿಂದಲೂ ಅಯ್ಯಪ್ಪನ ಭಕ್ತೆಯಾಗಿರುವ ರೇಷ್ಮಾ 2006 ರಿಂದಲೇ ಅಯ್ಯಪ್ಪನ ಕುರಿತು ಕಟ್ಟುನಿಟ್ಟಿನ ವ್ರತ ಕೈಗೊಂಡಿದ್ದಾರೆ. ಶಬರಿಮಲೆಗೆ ತೆರಳಿ ಅಯ್ಯಪ್ಪನನ್ನು ತಾವು ಪೂಜಿಸುವುದಾಗಿ ಹೇಳಿಕೊಂಡಿರುವ ರೇಷ್ಮಾ ಯಾರು? ಅವರ ಹಿನ್ನೆಲೆ ಏನು?
ರೇಷ್ಮಾ ನಿಶಾಂತ್ ಯಾರು?
ಕೇರಳದ ಕನ್ನೂರಿನ ಒಬ್ಬ ಸಾಮಾನ್ಯ ಮಹಿಳೆ ರೇಷ್ಮಾ ನಿಶಾಂತ್. 32 ವರ್ಷ ವಯಸ್ಸಿನ ರೇಷ್ಮಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅಯ್ಯಪ್ಪ ಸ್ವಾಮಿ ಮೇಲೆ ಎಲ್ಲಿಲ್ಲದ ಭಕ್ತಿ. ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ರೇಷ್ಮಾ, 2006 ರಿಂದಲೇ ಅಯ್ಯಪ್ಪನ ಕುರಿತು ಕಟ್ಟು ನಿಟ್ಟಿನ ವ್ರತ ಆರಂಭಿಸಿದ್ದಾರೆ. ಅಯ್ಯಪ್ಪನ ನೆಲೆಗೆ ತೆರಳಲು ಇಂದಲ್ಲ ನಾಳೆ ಮಹಿಳೆಯರಿಗೆ ಅವಕಾಶ ಸಿಗುತ್ತದೆ ಎಂದೇ ಕಾದಿದ್ದ ರೇಷ್ಮಾ ಅವರ ಆಸೆ ಕೊನೆಗೂ ನೆರವೇರಿದೆ.
ಸದ್ಯದಲ್ಲೇ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶ
ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪಿನ ನಂತರ 41 ದಿನಗಳ ಕಠಿಣ ವ್ರತ ಕೈಗೊಂಡ ರೇಷ್ಮಾ ಮಲಯಾಳಂನ ವೃಶ್ಚಿಕ ಮಾಸದ ನಂತರ ಶಬರಿಮಲೆಗೆ ತೆರಳಲಿದ್ದಾರೆ. ಕಪ್ಪು ಬಟ್ಟೆ ತೊಟ್ಟು, ಮಾಂಸಾಹಾರ ತ್ಯಜಿಸಿ, ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸುತ್ತ ಅಯ್ಯಪ್ಪನ ನೆಲೆಗೆ ತೆರಳಲು ಏನೆಲ್ಲ ವ್ರತ ಪಾಲಿಸಬೇಕೋ ಅದನ್ನೆಲ್ಲ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
'ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ'
ಇದು ಕ್ರಾಂತಿಯಲ್ಲ!
"ನನ್ನ ನಡೆಯಿಂದ ಯಾವುದೋ ಕ್ರಾಂತಿಯಾಗುತ್ತದೆ ಎಂದು ನಾನು ಭಾವಿಸಿಲ್ಲ. ಆದರೆ ನನ್ನ ಈ ಒಂದು ನಡೆಯಿಂದ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿ ಸಿಗಬಹುದು ಎಂದು ಭಾವಿಸಿದ್ದೇನೆ. ನನ್ನ ಈ ಪ್ರಯಾಣಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ" ಎಂದು ರೇಷ್ಮಾ ಹೇಳಿದ್ದಾರೆ. ಸಿಪಿಎಂ ಜೊತೆ ನಿಕಟ ಸಂಪರ್ಕ ಹೊಂದಿರುವ ರೇಷ್ಮಾ, "ತಮ್ಮ ಸಂಬಂಧಿಗಳು ಸಿಪಿಎಂ ಪಕ್ಷದಲ್ಲಿರುವುದು ನಿಜ. ಆದರೆ ನನ್ನ ನಂಬಿಕೆಗಳಿಗೂ ಪಕ್ಷದ ಸಂಪರ್ಕಕ್ಕೂ ಯಾವ ಸಂಬಂಧವೂ ಇಲ್ಲ" ಎಂದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು?
10 ರಿಂದ 50 ವರ್ಷದೊಳಗಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರು, ಶಬರಿಮಲೆ ದೇವಾಲಯದ ಒಳಗೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ನಂಬಿಕೆಯ ಮೇಲೆ ಮಹಿಳೆಯರಿಗೆ ನಿರ್ಬಂಧ ಹೇರಲಾಗಿತ್ತು.
800 ವರ್ಷಗಳಿಂದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ದೇವಾಲಯದ ಆಡಳಿತ ಮಂಡಳಿಯ ನಿಯಮಕ್ಕೆ ಬದಲಾಗಿ, ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ಸೆ.28 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದ ಮೇಲೆ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘಟನೆ(National Ayyappa Devotee association) ಯು ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸೋಮವಾರ ಮೇಲ್ಮನವಿ ಸಲ್ಲಿಸಿದೆ.