ಮೊದಲ ಬಾರಿಗೆ ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜಾರೋಹಣ
ತಿರುವನಂತಪುರಂ, ಜನವರಿ 26: ರಾಷ್ಟ್ರೀಯ ಸಾರ್ವಭೌಮತೆ, ಏಕತ್ವವನ್ನು ಸಾರಲು ಕೇರಳದ ಎಲ್ಲಾ ಮಸೀದಿಯಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸೇರಿದಂತೆ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಏನೇ ಆಗಲಿ ಭಾರತೀಯರು ನಾವೆಲ್ಲಾ ಒಂದೇ ಎನ್ನುವ ಮಂತ್ರವನ್ನು ಸಾರಲು ಕೇರಳದ ಮುಸ್ಲಿಮರು ನಿರ್ಧರಿಸಿದ್ದಾರೆ.
ಇದೇ ಮೊದಲ ಬಾರಿಗೆ ಕೇರಳ ರಾಜ್ಯಾದ್ಯಂತ ಇರುವ ಎಲ್ಲಾ ಮಸೀದಿಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತಿದೆ. ಕೇರಳ ರಾಜ್ಯದ ವಕ್ಫ್ ಬೋರ್ಡ್ ಎಲ್ಲಾ ಮಸೀದಿಗಳಿಗೂ ಸಂದೇಶ ರವಾನಿಸಿದೆ. ನಾವು ರಾಷ್ಟ್ರವನ್ನು ಹಾಗೂ ಸಂವಿಧಾನವನ್ನು ಕಾಪಾಡುತ್ತೇವೆ, ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿ ಧ್ವಜವನ್ನು ಹಾರಿಸುವಂತೆ ಹೇಳಲಾಗಿದೆ.
ಬೆಳಗ್ಗೆ 8.30 ಸುಮಾರಿಗೆ ಧ್ವಜಾರೋಹಣ ನಡೆಯುತ್ತಿದೆ.ಹಾಗೆಯೇ ಸಂವಿಧಾನದ ಮುನ್ನುಡಿಯನ್ನು ಓದಲಾಗುತ್ತದೆ. ಇದೇ ಮೊದಲ ಬಾರಿಗೆ ನಮಗೆ ದೇಶದಲ್ಲಿ ಅಭದ್ರತೆ ಎಂದೆನೆಸುತ್ತಿದೆ. ಈ ರೀತಿ ಯಾವಾಗಲೂ ಅನಿಸಿಲ್ಲ. ನಾವು ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ ಎಂದು ವಕ್ಫ್ಬೋರ್ಡ್ ಅಧ್ಯಕ್ಷ ತಿಳಿಸಿದ್ದಾರೆ.
ಕೇರಳದಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು ಒಟ್ಟು 14 ಜಿಲ್ಲೆಗಳಿಂದ 7 ಮಿಲಿಯನ್ಗೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.