Breaking: ಭಾರಿ ಮಳೆ, ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ತಿರುವನಂತಪುರಂ, ಆ.04: ಕೇರಳದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ಗುರುವಾರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯದ ವಿವಿಧೆಡೆ ಮಳೆ ಮುಂದುವರೆದಿದ್ದು, ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಮನೆ ಕಳೆದುಕೊಂಡ ಜನರು ತಮ್ಮ ಮನೆಗಳಿಂದ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ತಿರುವನಂತಪುರಂನಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ.
ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಮಳೆಯನ್ನು ಸೂಚಿಸುತ್ತದೆ. ಹಾಗೇಯೇ ಆರೆಂಜ್ ಅಲಟ್ ಎಂದರೆ 6 ಸೆಂ.ಮೀ ನಿಂದ 20 ಸೆಂ.ಮೀ. ಮಳೆ ಮತ್ತು ಯೆಲ್ಲೋ ಅಲಟ್ ಎಂದರೆ 6 ರಿಂದ 11 ಸೆಂ.ಮೀ ನಡುವೆ ಭಾರಿ ಮಳೆಯಾಗುತ್ತದೆ.
ರಾಜ್ಯದಲ್ಲಿನ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಪತ್ತನಂತಿಟ್ಟ ಜಿಲ್ಲೆಯ ಪಂಪಾ, ಮಣಿಮಾಲಾ ಮತ್ತು ಅಚನ್ಕೋವಿಲ್ನಂತಹ ವಿವಿಧ ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟಕ್ಕೆ ಹತ್ತಿರದಲ್ಲಿದೆ, ಕೆಲವೆಡೆಡ ಅಪಾಯ ಮಟ್ಟವನ್ನು ದಾಟಿದೆ.
ಭೂಕುಸಿತ ಮತ್ತು ಪ್ರವಾಹದ ಸಂಭವವಿದ್ದು, ಮುನ್ನೆಚ್ಚರಿಕೆಯಾಗಿ ಹಲವಾರು ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ತಾಲೂಕಿನಲ್ಲಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಕೆಲವು ಪ್ರಮುಖ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ನೀರು ಹೆಚ್ಚುತ್ತಿದ್ದು, ಇಡುಕ್ಕಿ ಜಲಾಶಯದ ನೀರು ಬ್ಲೂ ಅಲರ್ಟ್ ಸ್ಟೋರೇಜ್ ಮಟ್ಟವನ್ನು ತಲುಪುತ್ತಿದೆ. ಇಡುಕ್ಕಿ ಜಿಲ್ಲೆಯ ಪೊನ್ಮುಡಿ ಅಣೆಕಟ್ಟಿನಲ್ಲಿ ರೆಡ್ ಅಲರ್ಟ್ ಸ್ಟೋರೇಜ್ ಮಟ್ಟವನ್ನು ತಲುಪಿದೆ.
ಪತ್ತನಂತಿಟ್ಟ ಮತ್ತು ಇಡುಕ್ಕಿ ಜೊತೆಗೆ ಕೊಟ್ಟಾಯಂ, ತ್ರಿಶೂರ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗಿದೆ.
ಚಾಲಕ್ಕುಡಿ ನದಿಯ ನೀರಿನ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಏರಿದೆ, ಅದರ ದಡದಲ್ಲಿ ವಾಸಿಸುವ ಜನರನ್ನು ತಕ್ಷಣ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.