ಕೇರಳದಲ್ಲಿ ವರುಣನ ಅರ್ಭಟ: ಭೂಕುಸಿತದಿಂದ ಮೂವರು ಸಾವು
ತಿರುವನಂತಪುರಂ, ಅಕ್ಟೋಬರ್ 12: ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲೆ ಚಂಡಮಾರುತದ ಪ್ರಭಾವದಿಂದಾಗಿ ಕೆಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳದಲ್ಲೂ ವರುಣನ ಅರ್ಭಟ ಜೋರಾಗಿದೆ. ಕಳೆದೆರಡು ದಿನದಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದಲ್ಲಿ ಭೂಕುಸಿದು ಮೂವರು ಸಾವನ್ನಪ್ಪಿದ್ದಾರೆ.
ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕೇರಳದಲ್ಲಿ ರಸ್ತೆಗಳು ನದಿಗಳಂತಾಗಿದ್ದು, ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದ್ದು ಜನ ಜೀವನವೇ ಅಸ್ತವ್ಯಸ್ತವಾಗಿದೆ. ಹೀಗಾಗಿ ಕೇರಳದ 7 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಂಗಳವಾರದಿಂದ ದಕ್ಷಿಣ ರಾಜ್ಯದಲ್ಲಿ ಭಾರೀ ಮಳೆಯ ಅವಾಂತರ ಸೃಷ್ಟಿಯಾಗಿದೆ. ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಜಾಗ್ರತೆ ದೃಷ್ಟಿಯಿಂದ ತಿರುವನಂತಪುರಂ ಜಿಲ್ಲೆಯ ಅರುವಿಕ್ಕರ, ನೆಯ್ಯಾರ್ ಮತ್ತು ಪೆಪ್ಪರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದೆ.
ಎನ್ಡಿಆರ್ಎಫ್ ತಂಡಗಳು ನಿಯೋಜನೆ
ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ನಾಲ್ಕು ಹೆಚ್ಚುವರಿ ತಂಡಗಳನ್ನು ಕೇರಳದಲ್ಲಿ ನಿಯೋಜಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಎನ್ಡಿಆರ್ಎಫ್ ನ ಎರಡು ತಂಡಗಳಿದ್ದು ತಮಿಳುನಾಡು ಅರಕ್ಕೋನಂನಿಂದ ಇನ್ನೂ ನಾಲ್ಕು ತಂಡಗಳು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕೋರಿಕೆಯ ಮೇರೆಗೆ ಆಗಮಿಸುತ್ತಿವೆ. ಎನ್ಡಿಆರ್ಎಫ್ ತಂಡಗಳು ಆಲಪ್ಪುಳ, ಎರ್ನಾಕುಲಂ, ಕೊಲ್ಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ತಲಾ ಒಂದೊಂದು ತಂಡ ಜೊತೆಗೆ ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇನ್ನೆರಡು ತಂಡಗಳು ನೆಲೆಗೊಳ್ಳಲಿದೆ.
ಮನೆ ಕುಸಿದು ಇಬ್ಬರು ಮಕ್ಕಳು ಬಲಿ
ಮಲಪ್ಪುರಂನಲ್ಲಿ ಭಾರೀ ಮಳೆಗೆ ಮನೆಯೊಂದು ಕುಸಿದಿದೆ. ಘಟನೆಯಲ್ಲಿ ಡಯಾನಾ ಫಾತಿಮಾ (7) ಮತ್ತು ಲುಬಾನಾ ಫಾತಿಮಾ (6) ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಂಗಳವಾರ ಮುಂಜಾನೆ ಮನೆಯ ಹಿಂಭಾಗಕ್ಕೆ ಭೂಕುಸಿತಗೊಂಡಿದ್ದರ ಪರಿಣಾಮ ಮನೆ ಧರೆಗುರುಳಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳನ್ನು ಸ್ಥಳೀಯರು ಕೋಯಿಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮಕ್ಕಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕಮರಿಗೆ ಬಿದ್ದು ವ್ಯಕ್ತಿ ಸಾವು
ಕೊಲ್ಲಂನಲ್ಲಿ ಮಳೆ ನೀರು ಪ್ರವಾಹದಂತೆ ಹರಿಯುತ್ತಿದ್ದು ರಸ್ತೆಗಳು ಜಲಾವೃತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಿರಿಯರು ಮಕ್ಕಳು ರಾತ್ರಿ ಇಡೀ ಮನೆ ಹೊರಗೆ ಕಾಲ ಕಳೆಯುವಂತಾಗಿದೆ. 65 ವರ್ಷದ ಗೋವಿಂದರಾಜ್ ಎಂಬ ವ್ಯಕ್ತಿ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಭೂ ಕುಸಿತದ ಎಚ್ಚರಿಕೆ
ಕೇರಳ ಮಹಾಮಳಗೆ ತತ್ತರಿಸಿ ಹೋಗಿದೆ. ಕಲವೆಡೆ ಭೂಕುಸಿತಗೊಂಡಿರುವ ವರದಿಗಳಾಗಿವೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯಿರುವ ಕಾರಣ ಮುಂಜಾಗೃತ ದೃಷ್ಟಿಯಿಂದ ರಾತ್ರಿ ಪ್ರಯಾಣವನ್ನು ನಿಷೇಧಿಸಿ ಇಡುಕ್ಕಿಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಗುಡ್ಡಗಾಡುಗಳಲ್ಲಿರುವ ಮನೆಗಳಲ್ಲಿ ವಾಸಿಸುವ ಜನರಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿದದೆ.
ಸ್ಥಳೀಯರಿಗೆ ಜಿಲ್ಲಾಧಿಕಾರಿ ಮನವಿ
ಕೋಳಿಕ್ಕೋಡ್ ಕಲೆಕ್ಟರ್ ಡಾ ನರಸಿಂಹೂಗರಿ ಟಿಎಲ್ ರೆಡ್ಡಿ ಅವರು ಜಲಾವೃತ ಮತ್ತು ಪ್ರವಾಹದಿಂದ ಹೋರಾಡುತ್ತಿರುವ ಜನರ ತೊಂದರೆಗಳನ್ನು ಪರಿಹರಿಸಲು ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಘೋಷಿಸಿದರು. ಕೋಯಿಕ್ಕೋಡ್, ಕೊಯಿಲಾಂಡಿ ಮತ್ತು ವಡಕರ ತಾಲ್ಲೂಕುಗಳಲ್ಲಿಯೂ ಶಿಬಿರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, ನದಿಗಳು ಮತ್ತು ತೊರೆಗಳ ಬಳಿ ತಗ್ಗು ಪ್ರದೇಶಗಳಲ್ಲಿರುವ ಜನರು ಪ್ರವಾಹದ ಅಪಾಯವನ್ನು ಅನುಭವಿಸಿದರೆ ಸರ್ಕಾರ ತೆರೆದಿರುವ ಕ್ಯಾಂಪ್ ಗಳಲ್ಲಿ ಅಥವಾ ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಭೂಕುಸಿತ ಮತ್ತು ಭೂಕುಸಿತದ ಬೆದರಿಕೆ ಇರುವ ಪ್ರದೇಶಗಳಲ್ಲಿನ ಶಿಬಿರಗಳಿಗೆ ಸ್ಥಳಾಂತರಿಸಲು ಜನರು ಇಚ್ಛೆ ತೋರಿಸಬೇಕು ಎಂದು ಅವರು ಹೇಳಿದರು.
ತ್ರಿಶೂರ್ ಜಿಲ್ಲೆಯ ಅತಿರಪಿಲ್ಲಿ ಮತ್ತು ಚಾಲಕುಡಿಯ ಸುತ್ತಮುತ್ತಲಿನ ಪ್ರದೇಶಗಳು 2019 ರ ಮುಂಗಾರು ಮಳೆ ನೆನಪಿಸುವ ಭಾರೀ ಪ್ರವಾಹಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ಚಾಲಕುಡಿ ನದಿ ತುಂಬಿ ಹರಿಯುತ್ತಿದೆ. ಅತಿರಪಳ್ಳಿ ಪ್ರವಾಸಿ ಕೇಂದ್ರ ಮತ್ತು ಜಲಪಾತವನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ. ಕೂಡಪುಳ ಪ್ರದೇಶದಲ್ಲಿ ಹತ್ತು ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಆ ಮನೆಗಳಲ್ಲಿನ ಕುಟುಂಬಗಳನ್ನು ಹತ್ತಿರದ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ತ್ರಿಶೂರ್ ಕಲೆಕ್ಟರ್ ಹರಿತ ವಿ ಕುಮಾರ್ ತಿಳಿಸಿದ್ದಾರೆ.