ಕೇರಳದಲ್ಲಿ ವರುಣನ ಆರ್ಭಟಕ್ಕೆ 3 ಬಲಿ, ಕಾಶ್ಮೀರ ತಾಪಮಾನ ಇಳಿಕೆ, ಹೀಗಿದೆ ದೇಶದ ಹವಾಮಾನ
ತಿರುವನಂತಪುರಂ, ನವೆಂಬರ್ 15: ದಕ್ಷಿಣ ಭಾರತದಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಕೇರಳ ರಾಜ್ಯದಲ್ಲಿ ಈ ವರುಣಣನ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ಹಾಗೆಯೇ ಸಾಕಷ್ಟು ಹಾನಿ ಉಂಟಾಗಿದೆ. ಈ ನಡುವೆ ಕಾಶ್ಮೀರದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಿಂದಾಗಿ ಜನರು ತತ್ತರಿಸಿದ್ದಾರೆ.
ಕೇರಳದಲ್ಲಿ ಮಳೆಯಿಂದಾಗಿ ಸಾವು ಸಂಭವಿಸುವ ಪ್ರಕರಣಗಳು ವರದಿ ಆಗುವುದು ಮುಂದುವರಿದಿದೆ. ಕೇರಳದಾದ್ಯಂತ ಮಳೆಯ ಅಬ್ಬರ ಎಡೆಬಿಡದೆ ಮುಂದುವರಿದಿದೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯು ಕೇರಳದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣ ಮಾಡಲಾಗಿದೆ. ಹಾಗೆಯೇ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.
ಕೊಟ್ಟಾಯಂ, ಪತ್ತನಂತಿಟ್ಟ, ಕೊಲ್ಲಂ ಮತ್ತು ಅಲಾಪುಳದಲ್ಲಿ ಮಂಗಳವಾರ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಆದರೆ ಈ ನಡುವೆ ಕೊಲ್ಲಂನಲ್ಲಿ ಕೆಲವು ವೃತ್ತಿಪರ ಶಿಕ್ಷಣ ಸಂಸ್ಥೆಗಳು ತೆರೆದಿರಲಿದೆ ಎಂದು ವರದಿ ಉಲ್ಲೇಖ ಮಾಡಿದೆ. ಇನ್ನು ತಿರುವನಂತಪುರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮಂಗಳವಾರ ಶಿಕ್ಷಣ ಸಂಸ್ಥೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.
ದೇಶದ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಲಿದೆ. ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕರಾವಳಿ ಕರ್ನಾಟಕ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನ ಹಲವು ಸ್ಥಳಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಜನರು ಪರದಾಡುವಂತೆ ಆಗಿದೆ.
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಮತ್ತು ಲಕ್ಷದ್ವೀಪದ ಕೆಲವು ಪ್ರದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯು ಬುಲೆಟಿನ್ನಲ್ಲಿ ತಿಳಿಸಿದೆ. ದೆಹಲಿಯಲ್ಲಿ, ಸೋಮವಾರದಂದು ಗಾಳಿಯ ಗುಣಮಟ್ಟವು ಸ್ವಲ್ಪಮಟ್ಟಿಗೆ ಹದಗೆಟ್ಟಿದೆ. ಮುಂದಿನ ಮೂರು ದಿನಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡು ಬರುವ ನಿರೀಕ್ಷೆ ಇಲ್ಲ ಎಂದು ಇಲಾಖೆಯು ಉಲ್ಲೇಖ ಮಾಡಿದೆ.
ಇನ್ನು ರಾಜಸ್ಥಾನದ ಜೈಪುರ ಹವಾಮಾನ ಇಲಾಖೆಯು, "ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಆಗ್ನೇಯ ಭಾಗದ ಹಲವೆಡೆ ಮಳೆ ಸುರಿಯುವ ಸಾಧ್ಯತೆಗಳು ಇದೆ," ಎಂದು ತಿಳಿಸಿದೆ. ಈ ನಡುವೆ ಚಿತ್ತೋರ್ಗಢದಲ್ಲಿ ರಾಜ್ಯದ ಅತ್ಯಂತ ಕಡಿಮೆ ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಚುರುದಲ್ಲಿ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ತಾಪಮಾನ ಭಾರೀ ಇಳಿಕೆ
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ತಾಪಮಾಣವು ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಕಾಶ್ಮೀರದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಿಂದಾಗಿ ಜನರು ತತ್ತರಿಸಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ ಮಂಜಿನ ಪದರವು ಆವರಿಸಿದೆ. ಶ್ರೀನಗರದಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಈ ಹಿಂದಿನ ರಾತ್ರಿ ಶ್ರೀನಗರದಲ್ಲಿ ರಾತ್ರಿ ಹೊತ್ತಲ್ಲಿ - 0.9 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಪಹಲ್ಗಾಮ್ನಲ್ಲಿ ಕನಿಷ್ಠ ಮೈನಸ್ ನಾಲ್ಕು ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಾಶ್ಮೀರದಲ್ಲಿ ಅತ್ಯಂತ ಅಧಿಕ ಚಳಿ ಇದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ನಲ್ಲಿ ಕನಿಷ್ಠ ತಾಪಮಾನ - 1.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಕನಿಷ್ಠ - 1.6 ಡಿಗ್ರಿ ಸೆಲ್ಸಿಯಸ್ನಲ್ಲಿ ತಾಪಮಾನ ಇದೆ.
ಕೇರಳದಲ್ಲಿ ಮೂವರು ವರುಣನ ಆರ್ಭಟಕ್ಕೆ ಬಲಿ
ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮೂವತು ವರುಣನ ಆರ್ಭಟಕ್ಕೆ ಬಲಿಯಾಗಿದ್ದಾರೆ. ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಉಂಟಾದ ಅವಘಡದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂನಲ್ಲಿ ಮಣ್ಣು ಕುಸಿದು ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
(ಒನ್ಇಂಡಿಯಾ ಸುದ್ದಿ)