ವಯನಾಡಿನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ
ತಿರುವನಂತಪುರಂ,ಫೆಬ್ರವರಿ 22: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೃಷಿ ಕಾಯ್ದೆಗಳ ವಿರುದ್ಧ ಇಂದು ವಯನಾಡಿನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ವಯನಾಡಿನ ತ್ರಿಕ್ಕೈಪಟ್ಟದಿಂದ ಮುತ್ತಿಲ್ವರೆಗೆ 6 ಕಿ.ಮೀ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ನಂತರ ಮಾತನಾಡಿ, ಕೃಷಿ ಮಾತ್ರವೇ ಭಾರತ ಮಾತೆಗೆ ಸಂಬಂಧಿಸಿದ ಉದ್ಯಮ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಜನರು ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ್ದು ಜನರ ಜೇಬು ಬರಿದು ಮಾಡುವ ಮಹತ್ತರ ಕೆಲಸ; ರಾಹುಲ್ ಟೀಕೆ
ಕೃಷಿಯು ದೇಶದಲ್ಲೇ ಅತಿ ದೊಡ್ಡ ಉದ್ಯಮವಾಗಿದೆ, 40 ಲಕ್ಷ ಕೋಟಿ ಮೌಲ್ಯದ ಈ ಉದ್ಯಮಕ್ಕೆ ಲಕ್ಷಾಂತರ ಭಾರತೀಯರು ಮಾಲೀಕರಾಗಿದ್ದಾರೆ, ಇದನ್ನು ಕೆಲವು ಮಂದಿ ತಮ್ಮ ವಶ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತೀಯರು ಎದುರಿಸುತ್ತಿರುವ ಕಷ್ಟಗಳನ್ನು ಇಡೀ ಜಗತ್ತು ನೋಡುತ್ತಿದೆ, ಆದರೆ ಕೇಂದ್ರ ಸರ್ಕಾರಕ್ಕೆ ರೈತರ ನೋವನ್ನು ಅರ್ಥಮಾಡಿಕೊಳ್ಳಲುಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಭಾರತೀಯ ರೈತರ ಪರಿಸ್ಥಿತಿಯ ಬಗ್ಗೆ ಪಾಪ್ ತಾರೆಯರು ಪ್ರತಿಕ್ರಿಯಿಸುತ್ತಿದ್ದಾರೆ, ಆದರೆ ಭಾರತ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ, ಒತ್ತಡ ಹೇರದ ಹೊರತು ಅವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾರರು ಎಂದು ಅವರು ಹೇಳಿದ್ದಾರೆ.
ಭಾರತದ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಲು ಹಾಗೂ ಇಡೀ ಕೃಷಿ ಉದ್ಯಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಬ್ಬರಿಂದ ಮೂವರು ಸ್ನೇಹಿತರಿಗೆ ನೀಡಲು ಹೊಸ ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದರು.