ಮೀನುಗಾರರ ಜತೆ ಸಮುದ್ರಕ್ಕೆ ಜಿಗಿದು ಈಜಿದ ರಾಹುಲ್ ಗಾಂಧಿ: ವಿಡಿಯೋ
ತಿರುವನಂತಪುರಂ, ಫೆಬ್ರವರಿ 25: ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಕೇರಳದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೊಲ್ಲಂ ಜಿಲ್ಲೆಯಲ್ಲಿ ಮೀನುಗಾರರ ಜತೆಗೂಡಿ ಮೀನು ಹಿಡಿದರು. ಇದೇ ಸಂದರ್ಭದಲ್ಲಿ ಸಮುದ್ರದಲ್ಲಿ ಬಲೆ ಹಾಕಿ ಮೀನು ಹಿಡಿಯಲು ಪ್ರಯತ್ನಿಸುತ್ತಿದ್ದ ಮೀನುಗಾರರ ಜತೆಗೆ ದೋಣಿಯಿಂದ ನೀರಿಗೆ ಜಿಗಿದು ಈಜಾಡಿ ಖುಷಿ ಪಟ್ಟರು.
ಖಾಸಗಿ ಭದ್ರತಾ ಅಧಿಕಾರಿ ಜತೆಗೆ ತೆರಳಿದ್ದ ರಾಹುಲ್ ಗಾಂಧಿ ಅವರು ಸುಮಾರು ಹತ್ತು ನಿಮಿಷಗಳ ಕಾಲ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿ ಕಾಲ ಕಳೆದರು ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
"ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ನಿಮ್ಮ ನಿರಾಸೆ ಈಗ ಅರ್ಥವಾಯ್ತು"
ಮೀನು ಹಿಡಿಯುವ ಸಲುವಾಗಿ ತೆರಳಿದ್ದವರು ದೋಣಿಯಿಂದ ಬಲೆಯನ್ನು ಹಾಸಿದ ಬಳಿಕ ಕೆಲವು ಮೀನುಗಾರರು ನೀರಿಗೆ ಜಿಗಿದರು. ನೀಲಿ ಟಿ-ಶರ್ಟ್ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದ ರಾಹುಲ್ ಗಾಂಧಿ ಕೂಡ ಮೀನುಗಾರನೊಬ್ಬನ ಸಹಾಯದೊಂದಿಗೆ ನೀರಿಗೆ ಜಿಗಿದರು. 'ಮೀನುಗಾರರು ನೀರಿನ ಅಡಿಯಲ್ಲಿ ಬಲೆಯನ್ನು ಸರಿಯಾಗಿ ಹರವಿ ಹಾಕುವ ಸಲುವಾಗಿ ನೀರಿಗೆ ಇಳಿದಿದ್ದನ್ನು ತಿಳಿದ ರಾಹುಲ್ ಕೂಡ ನೀರಿಗೆ ಧುಮುಕಿದರು' ಎಂದು ಕಾಂಗ್ರೆಸ್ ಸದಸ್ಯರೊಬ್ಬರು ತಿಳಿಸಿದರು.
|
ಫಿಶ್ ಕರಿ ಸವಿದ ರಾಹುಲ್
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಟಿಎನ್ ಪ್ರತಾಪನ್ ಸೇರಿದಂತೆ ನಾಲ್ವರು ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಮೀನುಗಾರಿಕೆಗೆ ತೆರಳಿದ್ದರು. ಬಳಿಕ ಮೀನುಗಾರರು ದೋಣಿಯಲ್ಲಿಯೇ ತಯಾರಿಸಿದ ತಾಜಾ ಫಿಶ್ ಕರಿ ಹಾಗೂ ಬ್ರೆಡ್ ಅನ್ನು ಸವಿದರು. ಕೊಲ್ಲಂ ತಂಗೆಸರಿ ಬೀಚ್ಗೆ ಮರಳಿದ ಬಳಿಕ ಅವರು ತಮ್ಮ ಉಡುಪು ಬದಲಿಸಿದರು.
ಅವರು ನುರಿತ ಈಜುಗಾರ
'ಅವರು ನಮಗೆ ಹೇಳದೆಯೇ ನೀರಿಗೆ ಜಿಗಿದರು. ನಮಗೆ ಒಮ್ಮೆಲೆ ಗಾಬರಿಯಾಯಿತು. ಆದರೆ ಅವರು ಆರಾಮಾಗಿ ಇದ್ದರು. ಸಮುದ್ರದ ನೀರಿನಲ್ಲಿ ಸುಮಾರು 10 ನಿಮಿಷ ಕಳೆದರು. ಅವರು ಬಹಳ ನುರಿತ ಈಜುಗಾರ' ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
|
ಮೀನುಗಾರಿಕೆ ಸಚಿವಾಲಯ
ಸುಮಾರು ಎರಡೂವರೆ ಗಂಟೆ ಕಾಲ ಸಮುದ್ರದಲ್ಲಿ ಕಳೆದ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಮಾತುಕತೆ ನಡೆಸಿದರು. ಮೀನುಗಾರರ ಸಂಕಷ್ಟ, ಸವಾಲುಗಳನ್ನು ಆಲಿಸಿದರು. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು. ಆದರೆ ಈಗಾಗಲೇ ಸಚಿವಾಲಯ ಇದ್ದು, ಗಿರಿರಾಜ್ ಸಿಂಗ್ ಸಚಿವರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಕಳೆದ ವಾರವೇ ಸ್ಪಷ್ಟಪಡಿಸಿತ್ತು.
ಖಾಲಿ ಬಲೆಯೊಂದಿಗೆ ಬಂದೆವು
'ನನ್ನ ಸಹೋದರರೊಂದಿಗೆ ನಾನು ಬೆಳಿಗ್ಗೆ ಸಮುದ್ರಕ್ಕೆ ತೆರಳಿದ್ದೆ. ಸಮುದ್ರಕ್ಕೆ ಬೋಟ್ ಇಳಿಸಿ ವಾಪಸ್ ಬರುವವರೆಗೂ ಅವರ ಕಷ್ಟ, ಜವಾಬ್ದಾರಿ ಎಷ್ಟಿರುತ್ತದೆ ಎಂಬುದು ನನಗೆ ಅರ್ಥವಾಯಿತು. ಆದರೆ ಒಂದೇ ಒಂದು ಮೀನು ಬಲೆಗೆ ಸಿಕ್ಕಿತು. ಮೀನುಗಾರಿಕೆಗೆ ಹೋಗಿ ಖಾಲಿ ಬಲೆಯೊಂದಿಗೆ ವಾಪಸ್ ಬಂದೆವು. ಇದು ನನ್ನ ಇಂದಿನ ಅನುಭವ. ದಿನನಿತ್ಯ ಮೀನುಗಾರರದ್ದು ಇದೇ ಕಥೆಯಾಗಿರಬಹುದು. ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ಅವರ ನಿರಾಸೆ ನನಗೀಗ ಅರ್ಥವಾಯಿತು' ಎಂದು ರಾಹುಲ್ ಹೇಳಿದರು.