ಕೇರಳದಲ್ಲಿ ಆಶ್ರಯ ಪಡೆದ 'ವಲಸಿಗ ನಾಯಕ' ರಾಹುಲ್ ಗಾಂಧಿ: ಪ್ರಲ್ಹಾದ ಜೋಶಿ
ತ್ರಿಶ್ಶೂರ್, ಫೆಬ್ರವರಿ 16: ಒಂದು ಕಾಲದಲ್ಲಿ ತಮ್ಮ ಕುಟುಂಬದ ಪ್ರಬಲ ನೆಲೆಯಾಗಿದ್ದ ಅಮೇಥಿಯಲ್ಲಿನ ಜನರಿಂದ ತಿರಸ್ಕಾರಕ್ಕೊಳಗಾದ ಬಳಿಕ ಕೇರಳದಲ್ಲಿ ಆಶ್ರಯ ಪಡೆದ 'ವಲಸಿಗ ನಾಯಕ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಫೆಬ್ರವರಿ 21ರಂದು ಆಯೋಜಿಸಿರುವ ಬಿಜೆಪಿಯ ವಿಜಯ ಯಾತ್ರೆಗೆ ನಡೆಸುತ್ತಿರುವ ಸಿದ್ಧತೆಯ ಕುರಿತು ಸುದ್ದಿಗೋಷ್ಠಿ ನಡೆಸಿದ ಪ್ರಲ್ಹಾದ ಜೋಶಿ, ಉತ್ತರ ಪ್ರದೇಶದ ಅಮೇಥಿ ಲೋಕಸಭೆ ಕ್ಷೇತ್ರದಿಂದ ಮೂರು ಬಾರಿ ಚುನಾಯಿತರಾಗಿದ್ದರೂ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡದ ಕಾರಣಕ್ಕೆ ಜನರಿಂದ ತಿರಸ್ಕೃತಗೊಂಡ ವಲಸೆ ನಾಯಕ ಎಂದು ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಭೇಟಿಗೂ ಮುನ್ನ ಪುದುಚೇರಿ ಕ್ಯಾಬಿನೆಟ್ ವಿಸರ್ಜನೆಯತ್ತ!
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯನ್ನು ಟೀಕಿಸಿದ ಅವರು, ಈ ವಿಚಾರವಾಗಿ ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವ ಮತ್ತು ರಾಜ್ಯ ನಾಯಕತ್ವ ಎರಡೂ ದ್ವಂದ್ವ ನಿಲುವು ತೆಗೆದುಕೊಂಡಿದ್ದವು ಎಂದು ಹೇಳಿದರು.
ಅಸ್ಸಾಂ ಚಹಾ ಕಾರ್ಮಿಕರ ವೇತನ 365 ರೂ.ಗೆ ಹೆಚ್ಚಿಸುವ ಆಶ್ವಾಸನೆ
ಕೇರಳದಲ್ಲಿನ ಪಕ್ಷದ ಚುನಾವಣಾ ಉಸ್ತುವಾರಿಯಾಗಿರುವ ಜೋಶಿ, ಟರ್ಕಿಯ ಹಗಿಯಾ ಸೋಫಿಯಾ ಚರ್ಚ್ಅನ್ನು ಮಸೀದಿಯನ್ನಾಗಿ ಪರಿವರ್ತಿಸುತ್ತಿರುವ ವಿಚಾರವನ್ನು ನೆನಪಿಸಿದರು. ಕಾಂಗ್ರೆಸ್ ಹಾಗೂ ಆಡಳಿತಾರೂಢ ಎಡಪಕ್ಷಗಳು ಇಸ್ಲಾಂ ಮೂಲಭೂತವಾದಿಗಳನ್ನು ಓಲೈಕೆ ಮಾಡುತ್ತಿವೆ ಎನ್ನುವ ಮೂಲಕ ಜೋಶಿ, ಕ್ರೈಸ್ತ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು.
ಕೇರಳಿಗರಿಗೆ ಅರ್ಥವಾಗಲಿದೆ
ಅಮೇಥಿಯಲ್ಲಿ ಯಾವುದೇ ಅಭಿವೃದ್ಧಿ ಇರಲಿಲ್ಲ. ಕಡೇಪಕ್ಷ ಅವರ ಕ್ಷೇತ್ರದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಎಕ್ಸ್ರೇ ಯಂತ್ರವು ಇರಲಿಲ್ಲ. ಅಲ್ಲಿ ತಿರಸ್ಕಾರಕ್ಕೆ ಒಳಗಾದ ನಂತರ ಕೇರಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಿಂದ ತಮಗೆ ಏನೂ ಸಿಗುವುದಿಲ್ಲ ಎನ್ನುವುದನ್ನು ಇಲ್ಲಿನ ಜನರೂ ಅರ್ಥಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರು.
ಶಬರಿಮಲೆ ಕುರಿತು ನಿಲುವೇನು?
'ಶಬರಿಮಲೆ ವಿವಾದದ ಕುರಿತು ರಾಹುಲ್ ಗಾಂಧಿ ಇದುವರೆಗೂ ಒಂದೇ ಒಂದು ಹೇಳಿಕೆ ನೀಡಿಲ್ಲ. ಈ ವಿಚಾರವಾಗಿ ನಿಮ್ಮ ನಿಲುವೇನು? ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ರಾಹುಲ್ ಗಾಂಧಿಗೆ ನಾನು ಸವಾಲು ಹಾಕುತ್ತೇನೆ' ಎಂದರು.
ಎರಡೂ ಸರ್ಕಾರಗಳು ವಿಫಲ
ಜನರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಿಪಿಎಂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಕೂಡ ವಿಫಲವಾಗಿತ್ತು. ಈ ಎರಡೂ ಸರ್ಕಾರಗಳ ವೈಫಲ್ಯಗಳನ್ನು ನಾವು ತೆರೆದಿಡಲಿದ್ದೇವೆ ಎಂದು ಜೋಶಿ ತಿಳಿಸಿದರು.
ಯೋಗಿ ಆದಿತ್ಯನಾಥ್ ಚಾಲನೆ
ಕಾಸರಗೋಡಿನಲ್ಲಿ ಫೆ 21ರಂದು ಬಿಜೆಪಿ ವಿಜಯ ಯಾತ್ರಾಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ. ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಯಾತ್ರೆ ಮುನ್ನಡೆಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಾರ್ಚ್ 7ರಂದು ತಿರುವನಂತಪುರಂಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.