ಕೇರಳಿಗರೇ ದಯವಿಟ್ಟು ಹುಷಾರಾಗಿರಿ; ರಾಹುಲ್ ಗಾಂಧಿ ಮನವಿ
ತಿರುವನಂತಪುರಂ, ಜುಲೈ 30: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಕುರಿತು ಆತಂಕ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
"ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಚಿಂತೆಗೀಡುಮಾಡಿದೆ. ದಯವಿಟ್ಟು ರಾಜ್ಯದ ಸಹೋದರ ಸಹೋದರಿಯರು ಎಲ್ಲಾ ಕೋವಿಡ್ ಸುರಕ್ಷತಾ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಲು ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ಕೊರೊನಾ ಏರಿಕೆ; ಕಳವಳ ವ್ಯಕ್ತಪಡಿಸಿದ ಕೇಂದ್ರ
ದೇಶದಲ್ಲಿ ಕೊರೊನಾ ಎರಡನೇ ಅಲೆ ಪ್ರಭಾವ ಕ್ಷೀಣಿಸಿ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸಾವಿನ ಪ್ರಮಾಣವೂ ತಗ್ಗಿಲ್ಲ.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಪಾಲು ಕೇರಳ ರಾಜ್ಯವೊಂದರದ್ದೇ ಆಗಿದೆ. ದೇಶದ ಸಕ್ರಿಯ ಪ್ರಕರಣಗಳ ಪೈಕಿ ಕೇರಳದ್ದ ಪಾಲು 37.1% ರಷ್ಟಿದೆ. ರಾಜ್ಯ ದಿನಿತ್ಯದ ಸರಾಸರಿ ಪ್ರಕರಣಗಳು 17,443ಕ್ಕಿಂತ ಹೆಚ್ಚಿವೆ. ಕಳೆದ ಎಂಟು ವಾರಗಳಿಂದ ಕೇರಳದಲ್ಲಿ ಪಾಸಿಟಿವಿಟಿ ದರ 10.5% ಹಾಗೂ 14.8% ಇದೆ.
Rising cases of Coronavirus infections in Kerala are worrying.
— Rahul Gandhi (@RahulGandhi) July 30, 2021
I appeal to our brothers and sisters in the state to follow all safety measures & guidelines.
Please take care.
ಕೇರಳದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರದಿಂದ ಆರು ಸದಸ್ಯರ ತಂಡವನ್ನು ಪರಿಶೀಲನೆಗೆ ಗುರುವಾರ ರಾಜ್ಯಕ್ಕೆ ಕಳುಹಿಸಲಾಗಿದೆ. ಇದರೊಂದಿಗೆ ಕೇರಳದಲ್ಲಿ ಅತಿ ಕಡಿಮೆ ಮಟ್ಟದಲ್ಲಿ ಸೆರೊ ಪ್ರಿವೆಲೆನ್ಸ್ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) 44.4% ದಾಖಲಾಗಿದೆ.
ಗುರುವಾರ ಕೂಡ ಕೇರಳದಲ್ಲಿ ಸತತ ಮೂರನೇ ದಿನ ದಿನನಿತ್ಯದ ಪ್ರಕರಣಗಳ ಸಂಖ್ಯೆ 22 ಸಾವಿರ ಮೀರಿದೆ.