ಕುತ್ತಿಗೆಗೆ ಸುತ್ತಿಕೊಂಡ ಭಾರಿ ಹೆಬ್ಬಾವಿನಿಂದ ಬಚಾವಾದ ವೃದ್ಧ
ತಿರುವನಂತಪುರಂ, ಅಕ್ಟೋಬರ್ 17: ಕೊರಳಿಗೆ ಸುತ್ತಿಕೊಂಡಿದ್ದ ಭಾರಿ ಗಾತ್ರದ ಹೆಬ್ಬಾವಿನಿಂದ ವೃದ್ಧರೊಬ್ಬರನ್ನು ರಕ್ಷಿಸಿದ ಎದೆನಡುಗಿಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳದಲ್ಲಿ ಈ ಘಟನೆ ನಡೆದಿದ್ದು, ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದ್ದ ಹಾವು ವೃದ್ಧನ ಪ್ರಾಣವನ್ನೇ ತೆಗೆದುಬಿಡಲಿದೆ ಎಂಬ ಆತಂಕ ಮೂಡಿಸಿತ್ತು. ಅಷ್ಟರಲ್ಲಿ ಇಬ್ಬರು ವ್ಯಕ್ತಿಗಳು ಬಲ ಪ್ರಯೋಗಿಸಿ ಹೆಬ್ಬಾವಿನ ಹಿಡಿತದಿಂದ ಅವರ ಜೀವ ಉಳಿಸಿದರು.
ತಿರುವನಂತಪುರಂನ ನೆಯ್ಯರ್ ಅಣೆಕಟ್ಟೆಯ ಸಮೀಪ ಮಂಗಳವಾರ ಬೆಳಿಗ್ಗೆ 61 ವರ್ಷದ ಭುವನಚಂದ್ರನ್ ನಾಯರ್ ಮತ್ತು ಇತರೆ ಕಾರ್ಮಿಕರು ಕಳೆ ಸಸ್ಯಗಳನ್ನು ತೆಗೆಯುವ ಕೆಲಸದಲ್ಲಿ ಮಗ್ನರಾಗಿದ್ದರು. 11 ಗಂಟೆ ಸುಮಾರಿಗೆ ಗಿಡಗಳ ನಡುವೆ ಬೃಹತ್ ಗಾತ್ರದ ಹೆಬ್ಬಾವು ಕಂಡಿತು. ಅದನ್ನು ಅಲ್ಲಿಯೇ ಬಿಟ್ಟರೆ ಅಪಾಯ ಉಂಟಾಗಬಹುದು ಎಂದು ಹಾವನ್ನು ಹಿಡಿದು ಚೀಲವೊಂದಕ್ಕೆ ತುಂಬಲು ಪ್ರಯತ್ನಿಸಿದರು.
ನಾಯರ್ ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾದರೂ ಅವರ ನಿಯಂತ್ರಣದಿಂದ ತಪ್ಪಿಸಿಕೊಂಡು ಅದು ಅವರ ಕುತ್ತಿಗೆ ಮೇಲೆ ಹರಿದು ಏಕಾಏಕಿ ಸುತ್ತಿಕೊಂಡಿತು. ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಹಾವು ತನ್ನ ಹಿಡಿತವನ್ನು ಬಿಗಿಗೊಳಿಸಿತ್ತು. ನಾಯರ್ ಮತ್ತು ಅವರ ಜತೆಗಿದ್ದವರು ಕಂಗಾಲಾದರು. ಹಾವು ಪ್ರತಿದಾಳಿ ನಡೆಸುತ್ತದೆ ಎಂದು ಅವರಾರೂ ಊಹಿಸಿರಲಿಲ್ಲ. ಬೇರೆ ಕಾರ್ಮಿಕರು ಧೃತಿಗೆಡದೆ ಕೂಡಲೇ ಹಾವನ್ನು ಹಿಡಿದುಕೊಂಡರು. ತಲೆ ಮತ್ತು ಬಾಲ ಎರಡನ್ನೂ ಬಿಗಿಯಾಗಿ ಹಿಡಿದು ಕುತ್ತಿಗೆಯಿಂದ ಅದನ್ನು ಬಿಡಿಸಲು ಪ್ರಯತ್ನಿಸಿದರು. ಹಾವು ಎಷ್ಟು ಬಿಗಿಯಾಗಿತ್ತು ಎಂದರೆ, ಇಬ್ಬರು ಪ್ರಯತ್ನಿಸಿದರೂ ಕುತ್ತಿಗೆಯಿಂದ ಹೊರ ತೆಗೆಯಲು ಕೆಲವು ಸೆಕೆಂಡುಗಳೇ ಬೇಕಾಯಿತು.
ಸಣ್ಣಪುಟ್ಟ ಗಾಯಗಳಾದರೂ ನಾಯರ್ ಅಪಾಯದಿಂದ ಪಾರಾದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾವನ್ನು ಒಪ್ಪಿಸಲಾಯಿತು. ಎರಡು ದಿನ ಹಾವಿನ ಚಟುವಟಿಕೆ ಗಮನಿಸಿ ಬಳಿಕ ಅದನ್ನು ದಟ್ಟ ಅರಣ್ಯಕ್ಕೆ ಕೊಂಡೊಯ್ದು ಬಿಡಲು ನಿರ್ಧರಿಸಲಾಯಿತು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: