ಹೈಕೋರ್ಟ್ ನ್ಯಾಯಮೂರ್ತಿ ಕಾರಿನ ಮೇಲೆ ಕಪ್ಪು ಆಯಿಲ್ ಎರಚಿದ ಪ್ರತಿಭಟನಾಕಾರರು
ತಿರುವನಂತಪುರಂ, ಫೆಬ್ರವರಿ 03: ಕೇರಳ ಹೈಕೋರ್ಟ್ ನ್ಯಾಯಮೂರ್ತಿ ವಿ ಶಿರ್ಸಿ ಅವರ ಕಾರಿನ ಮೇಲೆ ಪ್ರತಿಭಟನಾಕಾರರು ಕಪ್ಪು ಆಯಿಲ್ ಎರಚಿರುವ ಘಟನೆ ನಡೆದಿದೆ.
ಯುವತಿಯೋರ್ವಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರಘುನಾಥನ್ ನಾಯರ್ ಪ್ರತಿಭಟನಾ ಫಲಕವನ್ನು ಪ್ರದರ್ಶಿಸಿ ಹೈಕೋರ್ಟ್ ಅವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಏಕಾಏಕಿ ನ್ಯಾಯಮೂರ್ತಿಗಳ ಕಾರಿನತ್ತ ಧಾವಿಸಿ ಕಾರಿನ ಮೇಲೆ ಕಪ್ಪು ಬಣ್ಣದ ಆಯಿಲ್ ಎರಚಿದರು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ರಘುನಾಥನ್ ರನ್ನು ಬಂಧಿಸಿದ್ದಾರೆ.
ಕೇರಳ ಹೈಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಪೊಲೀಸರು ಎರುಮೇಲಿ ನಿವಾಸಿ ಆರ್ ರಘುನಾಥನ್ ನಾಯರ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರಸ್ತುತ ಈ ಪ್ರಕರಣವನ್ನು ಕೇರಳ ಕ್ರೈಂ ಬ್ರಾಂಚ್ ವಿಚಾರಣೆ ನಡೆಸುತ್ತಿದ್ದು, ಈ ವರೆಗೂ ಯಾವುದೇ ರೀತಿಯ ಮಹತ್ವದ ಮಾಹಿತಿ ಲಭ್ಯವಾಗಿಲ್ಲ.
ಪ್ರಾಥಮಿಕ ತನಿಖಾ ಮೂಲಗಳ ಪ್ರಕಾರ 2018ರ ಮಾರ್ಚ್ 22ರಂದು ಕೊಟ್ಟಾಯಂ ಜಿಲ್ಲೆಯ ಎರುಮೇಲಿಯಲ್ಲಿ ಜಸ್ನಾ ಮಾರಿಯಾ ಎಂಬ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದೆ ಎರುಮೇಲಿಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಆದರೆ ಪ್ರಕರಣ ನಡೆದು ಮೂರು ವರ್ಷಗಳೇ ಆದರೂ ಈ ವರೆಗೂ ಈ ಸಂಬಂಧ ಯಾವುದೇ ರೀತಿಯ ಮಾಹಿತಿ ದೊರೆತಿರಲಿಲ್ಲ. ಹೀಗಾಗಿ ರಘುನಾಥನ್ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.