"ನರೇಂದ್ರ ಮೋದಿ ಬೇರೇಯಲ್ಲ, ನಾಥೂರಾಮ್ ಗೋಡ್ಸೆ ಬೇರೆಯಲ್ಲ"
ತಿರುವನಂತಪುರಂ, ಜನವರಿ.30: ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ ಬೇರೆಯಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಬೇರೆಯಲ್ಲ ಎಂದು ವಯನಾಡು ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ವಯನಾಡಿನಲ್ಲಿ ಮಾತನಾಡಿದ ಸಂಸದ ರಾಹುಲ್ ಗಾಂಧಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನಾಥೂರಾಮ್ ಗೋಡ್ಸೆಯದ್ದೂ ಒಂದೇ ಸಿದ್ದಾಂತವಾಗಿದೆ. ಮೋದಿ ಮತ್ತು ಗೋಡ್ಸೆ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕಿಡಿ ಕಾರಿದರು.
ಭಾರತದ ಒಬ್ಬರೇ ಒಬ್ಬ ಮುಸ್ಲಿಂರನ್ನೂ ಟಚ್ ಮಾಡುವುದಕ್ಕೆ ಆಗೋದಿಲ್ಲ"
ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನೇ ಗುಂಡಿಕ್ಕಿ ಕೊಂದನು. ಏಕೆಂದರೆ ಅವನಿಗೆ ಯಾರ ಹಿತಾಸಕ್ತಿಯೂ ಬೇಕಿರಲಿಲ್ಲ, ಯಾರನ್ನೂ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಸ್ವಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಿದ್ದನು. ಸಿಎಎ ಮತ್ತು ಎನ್ಆರ್ ಸಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಅದೇ ರೀತಿ ವರ್ತಿಸುತ್ತಿದ್ದಾರೆ. ಇದೀಗ ಪ್ರಧಾನಿಗೆ ಯಾರ ಹಿತಾಸಕ್ತಿಯೂ ಬೇಕಾಗಿಲ್ಲ. ತಮ್ಮ ಉದ್ದೇಶ ಈಡೇರಿದರೆ ಸಾಕು ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಪ್ರಧಾನಿಗೆ ಧೈರ್ಯ ಇಲ್ಲ ಎಂದು ರಾಹುಲ್ ಗಾಂಧಿ!
ನಾಥೂರಾಮ್ ಗೋಡ್ಸೆ ಚಿಂತನೆಗಳನ್ನೇ ನಂಬಿದ್ದೇವೆ ಎಂದು ಹೇಳಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಧಮ್ ಇಲ್ಲ. ಮಹಾತ್ಮಾ ಗಾಂಧೀಜಿಯವರ ಶಾಂತಿಮಾರ್ಗವನ್ನು ತೊರೆದು ದೇಶದಲ್ಲಿ ದ್ವೇಷದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ವಯನಾಡು ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಭಾರತೀಯರು ಸಾಕ್ಷ್ಯ ಒದಗಿಸಬೇಕಾದ ಅಗತ್ಯವಿಲ್ಲ
ನಾನು ಭಾರತೀಯನು ಎಂಬು ನನಗೆ ಚೆನ್ನಾಗಿ ಗೊತ್ತಿದೆ. ಅದನ್ನು ನಾನು ಯಾರ ಮುಂದೆಯೂ ಸಾಬೀತುಪಡಿಸುವಂತಾ ಅವಶ್ಯಕತೆಯಿಲ್ಲ. ನನ್ನ ಹಾಗೆಯೇ ದೇಶದ ಕೋಟ್ಯಂತರ ಪ್ರಜೆಗಳು ತಾವು ಭಾರತೀಯರು ಎಂಬು ಸಾಬೀತುಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದಲ್ಲಿ ಭಾರತೀಯರಿಗೇ ಇದೆಂಥಾ ಪರೀಕ್ಷೆ?
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಗೊಳಿಸಿದ್ದು ಭಾರತೀಯರನ್ನು ಪರೀಕ್ಷೆಗೆ ಒಡ್ಡಿದಂತೆ ಆಗಿದೆ. ಭಾರತದಲ್ಲಿ ಬದುಕಿ ಬಾಳುತ್ತಿರುವ ಭಾರತೀಯರು ತಾವು ಭಾರತೀಯರು ಎಂಬು ಸಾಬೀತುಪಡಿಸುವಂತಾ ಪರಿಸ್ಥಿತಿ ದೇಶದಲ್ಲಿ ಇದೀಗ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಹರಿ ಹಾಯ್ದರು.
ಭಾರತದ ಪ್ರಧಾನಿ ಭಾರತೀಯರನ್ನೇ ಪ್ರಶ್ನಿಸುವುದೇ?
ಭಾರತದಲ್ಲಿ ಬದುಕುತ್ತಿರುವ ಭಾರತೀಯರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಲು ಹೊರಟಿದ್ದಾರೆ. ಭಾರತೀಯರ ಹಕ್ಕನ್ನು ಪ್ರಶ್ನೆ ಮಾಡುವ ಪರವಾನಗಿಯನ್ನು ಇವರಿಗೆ ಕೊಟ್ಟಿದ್ದು ಯಾರು. ಇವರೇ ಭಾರತೀಯರು ಎಂದು ನರೇಂದ್ರ ಮೋದಿ ಹೇಗೆ ನಿರ್ಧರಿಸುತ್ತಾರೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.