ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ
ತಿರುವನಂತಪುರಂ, ಜೂನ್ 3: ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಪಟಾಕಿ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಸ್ಥಳೀಯರು ಆನೆಗೆ ಈ ಆಹಾರವನ್ನು ನೀಡಿದ್ದು ಆನೆಯ ದುರಂತ ಸಾವಿಗೆ ಕಾರಣರಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿಯೊಬ್ಬರು ಈ ಭೀಕರ ಘಟನೆಯ ವಿವರಗಳನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡ ನಂತರ ಪ್ರಾಣಿ ದೌರ್ಜನ್ಯದ ಅತ್ಯಂತ ಕ್ರೂರ ರೂಪ ಬೆಳಕಿಗೆ ಬಂದಿದೆ.
ಚಿತ್ರ ಕೃಪೆ: ಫೇಸ್ಬುಕ್/ಮೋಹನ್ ಕೆ.
ಹಸಿದಿದ್ದ ಆನೆಗೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಸ್ಥಳೀಯರು
ಮಾಹಿತಿ ಹಂಚಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿ ಮೋಹನ್ ಕೃಷ್ಣನ್ ಪ್ರಕಾರ ಕಾಡಾನೆಯೊಂದು ಆಹಾರ ಅರಸುತ್ತ ಅಡವಿಯಿಂದ ಹೊರಬಂದಿದ್ದು ಕಾಡಿನ ಸಮೀಪದ ಹಳ್ಳಿಯೊಂದರಲ್ಲಿ ಸುತ್ತಾಡುತ್ತಿತ್ತು. ಆನೆ ಆಹಾರಕ್ಕಾಗಿ ಬೀದಿ ಬೀದಿ ಸುತ್ತುತ್ತಿದ್ದಾಗ ಸ್ಥಳೀಯರು ಕ್ರ್ಯಾಕರ್ (ಪಟಾಕಿ) ತುಂಬಿದ ಅನಾನಸ್ ನೀಡಿದ್ದು, ಅದನ್ನು ಸೇವಿಸುತ್ತಿರುವಾಗಲೇ ಗರ್ಭಿಣಿ ಆನೆಯ ಬಾಯಿಯಲ್ಲಿ ಹಣ್ಣು ಸ್ಫೋಟಗೊಂಡಿದೆ. ಇದು ಗರ್ಭವತಿ ಆನೆಯ ದುರಂತ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಚಾಮರಾಜನಗರದಲ್ಲಿ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು
ಆನೆ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡ ಅರಣ್ಯ ಇಲಾಖೆ ಅಧಿಕಾರಿ
ಗಾಯಗೊಂಡಿದ್ದ ಆನೆಯನ್ನು ರಕ್ಷಿಸಲು ಕ್ಷಿಪ್ರ ಪ್ರತಿಕ್ರಿಯೆ ತಂಡದ ಭಾಗವಾಗಿದ್ದ ಅರಣ್ಯ ಅಧಿಕಾರಿ ಮೋಹನ್ ಕೃಷ್ಣನ್ ಅವರು ಮಲಯಾಳಂನಲ್ಲಿ ಫೇಸ್ಬುಕ್ನಲ್ಲಿ ಹೀಗೆ ಬರೆದಿದ್ದಾರೆ, "ಅವಳು ಎಲ್ಲರನ್ನೂ ನಂಬಿದ್ದಳು. ಅವಳು ಸೇವಿಸಿದ ಅನಾನಸ್ ಸ್ಫೋಟಗೊಂಡಾಗ, ಅವಳು ತನ್ನ ಬಗ್ಗೆ ಯೋಚಿಸದೆ ಆಘಾತಕ್ಕೊಳಗಾಗಬೇಕಾಯಿತು" ಎಂದು ಬರೆದಿದ್ದಾರೆ.
ಅವಳ ಬಾಯಿಯಲ್ಲಿನ ಕ್ರ್ಯಾಕರ್ ಸ್ಫೋಟವು ಅವಳ ನಾಲಿಗೆ ಮತ್ತು ಬಾಯಿಗೆ ಕೆಟ್ಟದಾಗಿ ಗಾಯ ಮಾಡಿತು ಎಂದು ಹೇಳಲಾಗಿದೆ. ನೋವು ಮತ್ತು ಹಸಿವನ್ನು ಅನುಭವಿಸುವಲ್ಲಿ, ಅವಳು ಹಳ್ಳಿಯ ಸುತ್ತಲೂ ನಡೆದಳು ಆದರೆ ಅವಳ ಗಾಯಗಳಿಂದಾಗಿ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಸ್ಥಳೀಯರು ತನಗೆ ನೋವನ್ನು ನೀಡಿದ್ದರೂ, ಯಾರಿಗೂ ಆಕೆ ಹಾನಿ ಮಾಡಲಿಲ್ಲ!
ಗರ್ಭವತಿ ಆನೆಯ ದುರಂತ ಅಂತ್ಯದ ಕುರಿತು ಫೇಸ್ಬುಕ್ನಲ್ಲಿ ಬರೆದಿರುವ ಅರಣ್ಯ ಅಧಿಕಾರಿ "ಹಳ್ಳಿಯ ಬೀದಿಗಳಲ್ಲಿ ನೋವನ್ನು ಅನುಭವಿಸುವಾಗ, ಆ ನೋವಿನ ಬೇಗೆಯಲ್ಲಿ ಓಡುವಾಗಲೂ ಅವಳು ಒಬ್ಬ ಮನುಷ್ಯನಿಗೆ ಹಾನಿ ಮಾಡಲಿಲ್ಲ. ಅವಳು ಒಂದೇ ಒಂದು ಮನೆಯನ್ನು ಪುಡಿ ಮಾಡಲಿಲ್ಲ. ಅದಕ್ಕಾಗಿಯೇ ನಾನು ಹೇಳಿದ್ದೇನೆ, ಅವಳು ಒಳ್ಳೆಯತನದಿಂದ ತುಂಬಿದ್ದಾಳೆ" ಎಂದು ಕೃಷ್ಣನ್ ಬರೆದಿದ್ದಾರೆ.
ನೀರಿನಲ್ಲೇ ನಿಂತು ಪ್ರಾಣಬಿಟ್ಟ ಆನೆ
ಆಗಿರುವ ನೋವನ್ನು ತಡೆದುಕೊಳ್ಳಲಾರದೆ, ಏನನ್ನೂ ತಿನ್ನಲಾರದೆ ಆನೆಯು ಪಡಬಾರದ ಕಷ್ಟ ಪಟ್ಟು ಪ್ರಾಣ ಬಿಟ್ಟಿದೆ. ಈ ಕುರಿತು ಕೃಷ್ಣನ್ ಅವರು ಆನೆಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದು ಆನೆಯು ವೆಲಿಯಾರ್ ನದಿಯಲ್ಲೇ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗಾಯಗಳ ಮೇಲೆ ನೊಣಗಳು ಮತ್ತು ಇತರ ಕೀಟಗಳನ್ನು ತಪ್ಪಿಸಲು ಆನೆ ಹೀಗೆ ಮಾಡಿದೆ ಎಂದು ಅರಣ್ಯ ಅಧಿಕಾರಿ ಹೇಳಿದರು. ಕೊನೆಗೆ ನೀರಿನಲ್ಲೇ ನಿಂತು ಪ್ರಾಣ ಬಿಟ್ಟಿದೆ ಎಂದು ಮನುಷ್ಯನ ಕ್ರೂರ ಮನಸ್ಥಿತಿ ಕುರಿತು ಟೀಕಿಸಿ ಬೇಸರ ವ್ಯಕ್ತಪಡಿಸಿದ್ದಾರೆ.