ಕೇರಳ ಚುನಾವಣೆ: ಬಿಜೆಪಿ ಉಸ್ತುವಾರಿಯಾಗಿ ಪ್ರಹ್ಲಾದ್ ಜೋಶಿ, ಅಶ್ವಥ್ ನಾರಾಯಣ್
ತಿರುವನಂತಪುರಂ, ಫೆಬ್ರವರಿ 03: ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮಂಗಳವಾರ(ಫೆ.2)ದಂದು ಮುಂಬರುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕೇರಳ ಬಿಜೆಪಿ ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಉಪ ಮುಖ್ಯಮಂತ್ರಿ, ಐಟಿ ಬಿಟಿ ಸಚಿವ ಡಾ. ಅಶ್ವಥನಾರಾಯಣ ಅವರು ಸಹ ಉಸ್ತುವಾರಿಯಾಗಿ ಪ್ರಲ್ಹಾದ್ ಜೋಶಿ ಅವರ ಜೊತೆಗಿರಲಿದ್ದಾರೆ. ಇದೇ ವೇಳೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಪುದುಚೇರಿ ಚುನಾವಣೆ ಉಸ್ತುವಾರಿ ನೀಡಲಾಗಿದೆ.
Opinion Poll: ಕೇರಳದಲ್ಲಿ ಮತ್ತೆ ಪಿಣರಾಯಿ ವಿಜಯನ್ ದಿಗ್ವಿಜಯ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರಿಗೆ ಆಸ್ಸಾಂ ರಾಜ್ಯದ ಉಸ್ತುವಾರಿ ನೀಡಲಾಗಿದೆ. ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ನರೇಂದ್ರ ಸಿಂಗ್ ಅವರ ಜೊತೆ ಸಹ ಉಸ್ತುವಾರಿಯಾಗಿದ್ದಾರೆ. ತಮಿಳುನಾಡು ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಪ್ರದಹನ ಕಾರ್ಯದರ್ಶಿ ಸಿ.ಟಿ ರವಿ ಅವರ ಸಹ -ಉಸ್ತುವಾರಿಯಾಗಿ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಕಾರ್ಯ ನಿರ್ವಹಿಸಲಿದ್ದಾರೆ.
ಕೇರಳದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ಕೆಲ ವಾಹಿನಿಗಳ ಸಮೀಕ್ಷೆ ತಿಳಿಸಿದೆ. ಕೊರೊನಾ ವೈರಸ್ ಸೋಂಕಿನ ನಿರ್ವಹಣೆಯಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳು, ಅವರ ಕಾರ್ಯವೈಖರಿಯೇ ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿಯಾಗಿದೆ. ಬಿಜೆಪಿ ಭದ್ರನೆಲೆ ಕಂಡುಕೊಳ್ಳಲು ಸತತ ಪ್ರಯತ್ನದಲ್ಲಿದೆ. ಕೇರಳದಲ್ಲಿ ಆಡಳಿತಾರೂಢ ಎಲ್ ಡಿ ಎಫ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನೇರ ಸ್ಪರ್ಧೆ ನಡೆಸುತ್ತಿದ್ದು, ಈ ಎರಡು ಮೈತ್ರಿಕೂಟವನ್ನು ಹಿಂದಿಕ್ಕಲು ಬಿಜೆಪಿ ಯತ್ನಿಸಲಿದೆ.