ಶಬರಿಮಲೆ ಪ್ರವೇಶಿಸದಂತೆ ಬಾಲಕಿಯನ್ನು ತಡೆದ ಪೊಲೀಸರು
ತಿರುವನಂತಪುರಂ, ನವೆಂಬರ್ 19: ಶಬರಿಮಲೆ ಪ್ರವೇಶಕ್ಕೆಂದು ತೆರಳಿದ್ದ ಬಾಲಕಿಗೆ ಪ್ರವೇಶ ಮಾಡದಂತೆ ಪೊಲೀಸರು ಅಡ್ಡಿ ಪಡಿಸಿರುವ ಘಟನೆ ಇಂದು ನಡೆದಿದೆ.
ಶಬರಿಮಲೆಗೆ ಅಯ್ಯಪ್ಪ ದರ್ಶನಕ್ಕೆಂದು ತೆರಳಿದ್ದ 12 ವರ್ಷದ ಬಾಲಕಿಯನ್ನು ದೇವಸ್ಥಾನ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ.
ಬಾಗಿಲು ತೆರೆದ ಶಬರಿಮಲೆ: ಅಯ್ಯಪ್ಪನ ದರ್ಶನ ಪಡೆಯಲು ಹೊರಟ ತೃಪ್ತಿ ದೇಸಾಯಿ
ಬಾಲಕಿ ಟ್ರೆಕ್ಕಿಂಗ್ ಮಾಡುವ ವೇಳೆ ಬಾಲಕಿಯ ಹುಟ್ಟಿದ ವರ್ಷ ಹಾಗೂ ಇನ್ನಿತರೆ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಆಕೆಗೆ ದೇಗುಲದೊಳಗೆ ಹೋಗಲು ಅನುಮತಿ ನಿರಾಕರಿಸಿದ್ದಾರೆ. ಆಕೆಯು ತನ್ನ ಕುಟುಂಬದವರೊಂದಿಗೆ ಅಯ್ಯಪ್ಪ ದರ್ಶನಕ್ಕೆಂದು ಬಂದಿದ್ದಳು.
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್ ನ.14ರಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.
ದೇಗುಲವನ್ನು 5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ಪ್ರವೇಶಿಸಬಾರದು ಎಂಬ ನಿಯಮವನ್ನು ಸುಪ್ರೀಂಕೋರ್ಟ್ 2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿತ್ತು.
ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾ.ರೋಹಿಂಟನ್ ನಾರಿಮನ್, ನ್ಯಾ.ಎ.ಎಂ.ಖಾನ್ ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡರ್ ಮತ್ತು ನ್ಯಾ.ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ಬಹುಮತದ ತೀರ್ಪು ನೀಡಿತ್ತು.