ಪಿಣರಾಯಿ ಸರ್ಕಾರ 2.0: ಕೇರಳದಲ್ಲಿ ಯಾವ ಶಾಸಕರಿಗೆ ಯಾವ ಖಾತೆ?
ತಿರುವನಂತಪುರಂ, ಮೇ 20: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಯಶಸ್ವಿಯಾಗಿ ಎದುರಿಸಿದ ವೈಖರಿಯಿಂದಲೇ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿ ಸರ್ಕಾರದಲ್ಲಿ ಅದೇ ಸಚಿವೆಗೆ ಸ್ಥಾನ ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಪಿಣರಾಯಿ 2.0 ಸರ್ಕಾರದಲ್ಲಿ ಹೊಸ ಮುಖಗಳಿಗೆ ಮಣೆ ಹಾಕುತ್ತಿರುವುದು ಸ್ಪಷ್ಟವಾಗುತ್ತಿದೆ. ಆರೋಗ್ಯ ಸಚಿವೆ ಸ್ಥಾನಕ್ಕೆ ಪತ್ರಕರ್ತೆ ಹಾಗೂ ಸಿಪಿಐ(ಎಂ) ಮುಖಂಡರಾದ ವೀಣಾ ಜಾರ್ಜ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರಾನಮುಲಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಪಿಣರಾಯಿ 2.0 ಸರ್ಕಾರದಲ್ಲಿ ಕೆ. ಕೆ. ಶೈಲಜಾಗೆ ಸಚಿವ ಸ್ಥಾನವಿಲ್ಲ?
ಪತ್ರಕರ್ತರಾಗಿ ತಮ್ಮ ಬದುಕು ಆರಂಭಿಸಿದ 45 ವರ್ಷದ ವೀಣಾ ಜಾರ್ಜ್ ಅವರು, ಕೇರಳದ ಕೈರಾಲಿ ಟಿವಿ, ಮನೋರಮಾ ನ್ಯೂಸ್ ಮತ್ತು ರಿಪೋರ್ಟರ್ ಟಿವಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅರಾನಮುಲಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಮಾಜಿ ಸಚಿವೆ ಕೆ ಕೆ ಶೈಲಜಾ ಟೀಚರ್ ಅವರಿಗಿಲ್ಲ ಅವಕಾಶ:
ಕೇರಳದಲ್ಲಿ 2018ರಲ್ಲಿ ಕಾಣಿಸಿಕೊಂಡ ನಿಫಾನ್ ವೈರಸ್ ಮತ್ತು ಪ್ರಸ್ತುತ ದೇಶದಲ್ಲೇ ಮೊದಲು ಕೊರೊನಾವೈರಸ್ ಸೋಂಕಿನ ಅಪಾಯವನ್ನು ಸಮರ್ಥವಾಗಿ ನಿರ್ವಹಿಸಿದ ಮಾಜಿ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಟೀಚರ್ ಅವರಿಗೆ ಎರಡನೇ ಅವಧಿ ಸರ್ಕಾರದಲ್ಲಿ ಯಾವುದೇ ಅವಕಾಶವನ್ನು ನೀಡದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕೇರಳದಲ್ಲಿ ಯಾವ ಶಾಸಕರಿಗೆ ಯಾವ ಖಾತೆ?:
ಸಿಪಿಐ(ಎಂ) ಹಿರಿಯ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಪ್ರಸ್ತುತ ಎರ್ನಾಕುಲಂ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರಾಜೀವ್ ಅವರಿಗೆ ಮೊದಲ ಬಾರಿಗೆ ಸಂಪುಟದ ದರ್ಜೆಯ ಕೈಗಾರಿಕೆ ಖಾತೆ ನೀಡುವ ಸಾಧ್ಯತೆಯಿದೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದ ಹಿರಿಯ ಮುಖಂಡ ಟಿವಿ ಥಾಮಸ್ ಐಸಾಕ್ ಅವರ ಹಣಕಾಸು ಖಾತೆಯನ್ನು ಮಾಜಿ ರಾಜ್ಯಸಭಾ ಸದಸ್ಯ ಆಗಿರುವ ಕೆ ಎನ್ ಬಾಲಗೋಪಾಲನ್ ಅವರಿಗೆ ನೀಡುವ ಸಾಧ್ಯತೆಯಿದೆ.
ಬೈಪೋರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪಿ ಎ ಮೊಹಮ್ಮದ್ ರಿಯಾಸ್ ಅವರಿಗೆ ಪ್ರವಾಸೋದ್ಯ ಮತ್ತು ಸಾರ್ವಜನಿಕ ಇಲಾಖೆ ನೀಡುವ ಸಾಧ್ಯತೆಯಿದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸೋದರ ಸಂಬಂಧಿ ಆಗಿರುವ ರಿಯಾಸ್ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಆಗಿರುವ ತಾಳಿಪರಂಬಾ ಕ್ಷೇತ್ರದ ಶಾಸಕ ಎಂ ವಿ ಗೋವಿಂದನ್ ಅವರಿಗೆ ಎ ಸಿ ಮೋಯಿದೀನ್ ಅವರ ಸ್ಥಳೀಯ ಸ್ವಯಂ ಸರ್ಕಾರಿ ಇಲಾಖೆಯನ್ನು ನೀಡುವ ಸಾಧ್ಯತೆಯಿದೆ. ಸಿಪಿಐ(ಎಂ) ಮುಖಂಡ ಎ ವಿಜಯ್ ರಾಘವನ್ ಪತ್ನಿ ಹಾಗೂ ಮಾಜಿ ಮೇಯರ್ ಆಗಿರುವ ಆರ್. ಬಿಂದು ಅವರನ್ನು ಉನ್ನತ ಶಿಕ್ಷಣ ಸಚಿವೆಯಾಗಿ ನೇಮಿಸುವ ನಿರೀಕ್ಷೆಯಿದೆ.
ದಕ್ಷಿಣ ಕೊಚಿಕೊಡ್ ಕ್ಷೇತ್ರದಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅಹ್ಮದ್ ದೇವರ್ಕೊವಿಲ್ ಅವರಿಗೆ ಬಂದರು ಖಾತೆ ನೀಡುವ ಸಾಧ್ಯತೆಯಿದೆ. ಚಿತ್ತೂರ್ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಕೃಷ್ಣನ್ ಕುಟ್ಟಿ ಅವರಿಗೆ ವಿದ್ಯುತ್ ಖಾತೆ ನೀಡುವ ನಿರೀಕ್ಷೆಯಿದ್ದು, ಕಳೆದ ಬಾರಿ ಸರ್ಕಾರದಲ್ಲಿ ಇವರು ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಅದೇ ಜಲಸಂಪನ್ಮೂಲ ಖಾತೆಯನ್ನು ಕೇರಳ ಕಾಂಗ್ರೆಸ್ಸಿನ ಜೋಸ್ ಕೆ ಮಣಿ ಅವರಿಗೆ ನೀಡುವ ಸಾಧ್ಯತೆಯಿದೆ.
ಎಲಥೂರ್ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶಾಸಕ ಎ ಕೆ ಶಶಿಧರನ್ ಅವರಿಗೆ ಅರಣ್ಯ ಇಲಾಖೆ ಹಾಗೂ ವಿ ಅಬ್ದುಲ್ ರೆಹಮಾನ್ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ನೀಡುವ ನಿರೀಕ್ಷೆಯಿದೆ. ತಿರುವನಂತಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಆಂಟೋನಿ ರಾಜು ಅವರಿಗೆ ಸಾರಿಗೆ ಇಲಾಖೆಯನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ.