ರಾಮಮಂದಿರ ನಿರ್ಮಾಣಕ್ಕೆ ಕೇರಳ ಕಾಂಗ್ರೆಸ್ ಶಾಸಕನ ದೇಣಿಗೆ ಫೋಟೊ ವೈರಲ್
ತಿರುವನಂತಪುರಂ, ಫೆಬ್ರುವರಿ 11: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇರಳದ ಕಾಂಗ್ರೆಸ್ ಶಾಸಕ ಎಲ್ದೋಸ್ ಕುನ್ನಪ್ಪಿಳ್ಳಿ ದೇಣಿಗೆ ನೀಡಿದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಆರ್ಎಸ್ಎಸ್ ತಂತ್ರ ಎಂದು ಶಾಸಕ ಆರೋಪಿಸಿದ್ದಾರೆ.
ಕೇರಳದ ಪೆರಂಬವೂರಿನ ಕಾಂಗ್ರೆಸ್ ಶಾಸಕ ಎಲ್ದೋಸ್ ಕುನ್ನಪ್ಪಿಳ್ಳಿ ಈ ಕುರಿತು ಸ್ಪಷ್ಟನೆ ನೀಡಿ ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಆರ್ಎಸ್ಎಸ್ ಮೋಸದಿಂದ ದೇಣಿಗೆ ಪಡೆದಿದೆ ಎಂದು ದೂರಿದ್ದಾರೆ. ಶಾಸಕ ಕುನ್ನಪ್ಪಿಳ್ಳಿ ಮೂವರೊಂದಿಗೆ ದೇವಸ್ಥಾನದ ಚಿತ್ರವಿರುವ ಕಾರ್ಡ್ ಹಿಡಿದುಕೊಂಡಿರುವ ಚಿತ್ರ ವೈರಲ್ ಆಗಿತ್ತು.
ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಅತಿಹೆಚ್ಚು ದೇಣಿಗೆ ನೀಡಿದವರ ಪಟ್ಟಿ
"ಕೆಲವರು ನನ್ನ ಬಳಿ ದೇವಸ್ಥಾನ ಕಟ್ಟಲೆಂದು ದೇಣಿಗೆ ಕೇಳಿಕೊಂಡು ಬಂದರು. ನನಗೆ ಅವರು ಆರ್ಎಸ್ಎಸ್ನವರು ಎಂದು ತಿಳಿದಿರಲಿಲ್ಲ. ಅವರೂ ಅದನ್ನು ಹೇಳಲಿಲ್ಲ. ದೇಣಿಗೆಯು ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ಎಂದೂ ಹೇಳಲಿಲ್ಲ. ನಾನು ದೇವಸ್ಥಾನ ನಿರ್ಮಾಣ ಎಂಬ ಕಾರಣಕ್ಕೆ ಒಂದು ಸಾವಿರ ರೂಪಾಯಿ ನೀಡಿದೆ" ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ತಮ್ಮ ಪಕ್ಷದ ಸದಸ್ಯನನ್ನು ಸಮರ್ಥಿಸಿಕೊಂಡಿದ್ದಾರೆ.
"ನಾನು ಜಾತ್ಯತೀತ ಮನುಷ್ಯ. ಆದರೆ ನನ್ನನ್ನು ಆರ್ಎಸ್ಎಸ್ ಮೂರ್ಖನನ್ನಾಗಿ ಮಾಡಿದೆ. ರಾಜಕೀಯದಲ್ಲಿ ನೈತಿಕತೆ ಇರಬೇಕು. ಆರ್ಎಸ್ಎಸ್ ಪ್ರಚಾರ ಬೇಸರ ಮೂಡಿಸುತ್ತಿದೆ. ಈ ನಡೆಯಿಂದ ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಿರಲಿ" ಎಂದು ಕೇಳಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಸಾಮೂಹಿಕ ದೇಣಿಗೆ ಅಭಿಯಾನವನ್ನು ಜನವರಿ 15ರಿಂದ ಆರಂಭಿಸಿದ್ದು, ಫೆಬ್ರುವರಿ 27ರವರೆಗೂ ನಡೆಯಲಿದೆ.