ಕೇರಳ: ಹಿಂಸಾಚಾರಕ್ಕೆ ತಿರುಗಿದ ಪಿಎಫ್ಐ ಬಂದ್- ಪೊಲೀಸರಿಗೆ ಗಾಯ, ಬಸ್ಗಳ ಹಾನಿ
ತಿರುವನಂತಪುರಂ ಸೆಪ್ಟೆಂಬರ್ 23: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ (ಸೆ. 22) ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮೇಲೆ ದಾಳಿ ಮತ್ತು ಅದರ ನಾಯಕರ ಬಂಧನ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ರಾಜ್ಯಾದ್ಯಂತ ಹಲವಾರು ವಿಧ್ವಂಸಕ ಮತ್ತು ಹಿಂಸಾಚಾರದ ಘಟನೆಗಳು ವರದಿಯಾಗಿವೆ ಮತ್ತು ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಆಲಪ್ಪುಳದಂತಹ ವಿವಿಧ ಜಿಲ್ಲೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.
ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ, ಕೇರಳ ಹೈಕೋರ್ಟ್ ಈ ಹಿಂದೆ ನ್ಯಾಯಾಲಯವು ನಿಷೇಧಿಸಿದ್ದ ರಾಜ್ಯದಲ್ಲಿ ಹರತಾಳಕ್ಕೆ ಕರೆ ನೀಡಲಾಗಿದೆ. ನಡೆಯುತ್ತಿರುವ ಪ್ರತಿಭಟನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಫ್ಲ್ಯಾಶ್ ಪ್ರತಿಭಟನೆ ಎಂದರೆ, ಪೂರ್ವ ಸೂಚನೆ ನೀಡದೆ ಕರೆದಿರುವ ಮುಷ್ಕರಗಳು. ಹಾಗಾಗಿ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸೂಚನೆ ನೀಡಿದ ನಂತರ ಹರತಾಳಕ್ಕೆ ಕರೆ ನೀಡಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಕರೆ ನೀಡಿರುವ ರಾಜ್ಯವಾರು ಬಂದ್ಗೆ ಬೆಂಬಲ ನೀಡಿದ ಜನರಿಂದ ಒಂದು ಆಟೋ ರಿಕ್ಷಾ ಮತ್ತು ಕಾರಿಗೆ ಹಾನಿಯಾಗಿದೆ. ಜೊತೆಗೆ ಆಲುವಾ ಸಮೀಪದ ಕಂಪನಿಪಾಡಿಯಲ್ಲಿ ಇಂದು ಪಿಎಫ್ಐ ಕರೆ ನೀಡಿರುವ ಒಂದು ದಿನದ ಬಂದ್ಗೆ ಬೆಂಬಲ ನೀಡಿದ ಜನರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ (ಕೆಎಸ್ಆರ್ಟಿಸಿ) ಅನ್ನು ಧ್ವಂಸಗೊಳಿಸಿದ್ದಾರೆ.
ಹಿಂಸಾಚಾರಕ್ಕೆ ತಿರುಗಿದ ಪಿಎಫ್ಐನ ಬಂದ್
ಮಾತ್ರವಲ್ಲದೆ ಕಣ್ಣೂರಿನ ನಾರಾಯಣಪಾರಾದಲ್ಲಿ ಬೆಳಗ್ಗೆ ಪತ್ರಿಕೆಗಳನ್ನು ವಿತರಿಸಲು ಸಾಗಿಸುತ್ತಿದ್ದ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲಪ್ಪುಳದಲ್ಲಿ ಹರತಾಳಕ್ಕೆ ಬೆಂಬಲ ನೀಡಿದವರು ಕಲ್ಲು ತೂರಾಟ ನಡೆಸಿದ್ದು, ಕೆಎಸ್ಆರ್ಟಿಸಿ ಬಸ್ಗಳು, ಟ್ಯಾಂಕರ್ ಲಾರಿ ಮತ್ತು ಇತರ ಕೆಲವು ವಾಹನಗಳು ಜಖಂಗೊಂಡಿವೆ. ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಪಿಎಫ್ಐ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟದಲ್ಲಿ ಕ್ರಮವಾಗಿ 15 ವರ್ಷದ ಬಾಲಕಿ ಮತ್ತು ಆಟೋ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪಿಟಿಐ ವರದಿ ಮಾಡಿದೆ.
ಇಬ್ಬರು ಪೊಲೀಸರು ಆಸ್ಪತ್ರೆಗೆ ದಾಖಲು
ಕೊಲ್ಲಂನಲ್ಲಿ ಪಿಎಫ್ಐ ಬೆಂಬಲಿಗರ ದಾಳಿಯಿಂದ ಆಂಟನಿ ಮತ್ತು ನಿಖಿಲ್ ಎಂದು ಗುರುತಿಸಲಾದ ಇಬ್ಬರು ಸಿವಿಲ್ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ದೌರ್ಜನ್ಯ ನಡೆಸುತ್ತಿರುವಾಗ ಅವರನ್ನು ಪೊಲೀಸರು ತಡೆಯಲು ಮುಂದಾದಾಗ ಪೊಲೀಸರನ್ನು ಬಲವಾಗಿ ತಳ್ಳಿದ್ದಾರೆ. ಇದೀಗ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಕ್ ನಂಬರ್ ಗುರುತಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳಕ್ಕೆ ಕರೆ
ಕೇರಳ ಪೊಲೀಸರು ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪಿಎಫ್ಐ ಒಂದು ದಿನದ ರಾಜ್ಯವ್ಯಾಪಿ ಹರ್ತಾಲ್ಗೆ ಕರೆ ನೀಡಿದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯದ ಎಲ್ಲ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸುವ ಆರ್ಎಸ್ಎಸ್ ನಿಯಂತ್ರಿತ ಫ್ಯಾಸಿಸ್ಟ್ ಸರ್ಕಾರದ ಪ್ರಯತ್ನದ ವಿರುದ್ಧ" ಇಂದು ರಾಜ್ಯದಲ್ಲಿ ಹರ್ತಾಲ್ ಆಚರಿಸಲಾಗುವುದು ಎಂದು ಪಿಎಫ್ಐ ಗುರುವಾರ ಹೇಳಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳ ನಡೆಯಲಿದೆ ಎಂದು ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಅಬ್ದುಲ್ ಸತಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳ ವಿರುದ್ಧ ಪ್ರತಿಭಟನೆ
ಗುರುವಾರ, ಪಿಎಫ್ಐ ಕಾರ್ಯಕರ್ತರು ದಾಳಿ ನಡೆಸಿದ ಸ್ಥಳಗಳಿಗೆ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ಅದರ ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದಾಗ್ಯೂ, ಭದ್ರತೆಯನ್ನು ಬಲಪಡಿಸುವ ಭಾಗವಾಗಿ ಈಗಾಗಲೇ ಅಂತಹ ಎಲ್ಲಾ ಸ್ಥಳಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.
ಎನ್ಐಎ ನೇತೃತ್ವದ ಬಹು-ಏಜೆನ್ಸಿ ತಂಡಗಳು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ 15 ರಾಜ್ಯಗಳ 93 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪಿಎಫ್ಐನ 106 ಕಾರ್ಯಕರ್ತರನ್ನು ಗುರುವಾರ ಬಂಧಿಸಿವೆ.
ಕೇರಳದಲ್ಲಿ PFIನ 22 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಎಫ್ಐ ರಾಜ್ಯಾಧ್ಯಕ್ಷ ಸಿಪಿ ಮಹಮ್ಮದ್ ಬಶೀರ್, ರಾಷ್ಟ್ರೀಯ ಅಧ್ಯಕ್ಷ ಓಎಂಎ ಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಳಮರಮ್, ಮಾಜಿ ಅಧ್ಯಕ್ಷ ಇ ಅಬೂಬಕ್ಕರ್ ಮತ್ತಿತರರು ಬಂಧಿತರಾಗಿದ್ದಾರೆ.