ಬೆಳೆ ನಾಶ ಮಾಡುವ ಕಾಡುಹಂದಿ ಬೇಟೆಗೆ ಅನುಮತಿ ನೀಡಿದ ಹೈಕೋರ್ಟ್
ತಿರುವನಂತಪುರಂ, ಜುಲೈ 23: ಸದಾ ರೈತರನ್ನು ಕಾಡುತ್ತಿರುವ ಕಾಡುಹಂದಿ ಭೇಟೆಗೆ ಕೇರಳ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಒಂದೆಡೆ ಆನೆ, ಮತ್ತೊಂದೆಡೆ ಕಾಡೆಮ್ಮೆ ಕಾಟ, ಇದರ ಜತೆಗೆ ಕಾಡುಹಂದಿಯ ಕಾಟವೂ ಜೋರಾಗಿದೆ, ಹೀಗೆ ದಿನ ಒಂದಲ್ಲಾ ಒಂದು ಪ್ರಾಣಿಗಳ ಹಿಂಡು ಬಂದು ಇಡೀ ಬೆಳೆಯನ್ನೇ ನಾಶಪಡಿಸುತ್ತಿದ್ದವು. ಹೀಗಾಗಿ ಕೇರಳ ಹೈಕೋರ್ಟ್ ಈ ಅನುಮತಿ ನೀಡಿದೆ.
ಕಾಡುಹಂದಿಗಳು ಬಾಳೆ ಗಿಡಗಳನ್ನು ಬುಡಮೇಲು ಮಾಡುತ್ತವೆ, ಅರಿಶಿನ ಸೇರಿದಂತೆ ಹಲವು ಬೆಳೆಗಳನ್ನು ನಾಶಪಡಿಸುತ್ತವೆ. ಕಾಡುಹಂದಿಗಳನ್ನು ಬೇಟೆಯಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11(1)(ಬಿ) ಪ್ರಕಾರ ಮುಖ್ಯ ವೈಲ್ಡ್ಲೈಫ್ ವಾರ್ಡನ್ ರೈತರಿಗೆ ಅನುಮತಿ ನೀಡಬೇಕೆಂದು ನಿರ್ದೇಶಿಸಿದೆ.
ಈ ಆದೇಶದ ಮೂಲಕ, ಬಾವುಲಿ, ಇಲಿ, ಕಾಗೆಗಳನ್ನು ಕೊಲ್ಲುವಂತೆ ಹಂದಿಯನ್ನೂ ಕೊಲ್ಲಲು ಅನುಮತಿ ನೀಡಿದಂತಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಸನ್ 62ರಲ್ಲಿ ಕಾಡುಹಂದಿಗಳನ್ನು ಬೆಳೆ ನಾಶಕ ಎಂದು ಘೋಷಿಸಬೇಕೆಂದು ಕೋರಿ ರೈತರ ಗುಂಪು ಕಳೆದ ವರ್ಷ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು.
ಈ ನಿಟ್ಟಿನಲ್ಲಿ ಕಾಡುಹಂದಿಗಳಿಂದ ಸತತ ಬೆಳೆ ಕಳೆದುಕೊಂಡ ಕೋಳಿಕ್ಕೋಡ್ ರೈತರು ವಕೀಲ ಅಮಲ್ ದರ್ಶನ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಮೆಷಿನರಿ ಕಾಡುಹಂದಿ ದಾಳಿಯನ್ನು ನಿಯಂತ್ರಿಸಿ ರೈತರ ಬೆಳೆ ಕಾಪಾಡಲು ಸಂಪೂರ್ಣ ವಿಫಲವಾಗಿರುವ ಕಾರಣ ಇಂತಹ ಆದೇಶವನ್ನು ಹೊರಡಿಸುವುದು ಅಗತ್ಯವಾಗಿದೆ ಎಂದು ನ್ಯಾ.ಪಿಬಿ ಸುರೇಶ್ ಹೇಳಿದ್ದಾರೆ.