ಜನಗಣತಿ ಮಾಡಿ, ಎನ್ಪಿಆರ್ ಆಗೊಲ್ಲ: ಕೇಂದ್ರಕ್ಕೆ ಕೇರಳ ಸರ್ಕಾರ ಮಾಹಿತಿ
ತಿರುವನಂತಪುರಂ, ಜನವರಿ 21: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಉನ್ನತೀಕರಿಸುವ ಪ್ರಕ್ರಿಯೆಗೆ ಸಹಕಾರ ನೀಡಲು ಸಾಧ್ಯವಿಲ್ಲ ಎಂದು ಕೇರಳದ ಸಿಪಿಎಂ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಔಪಚಾರಿಕವಾಗಿ ಮಾಹಿತಿ ನೀಡಿದೆ. ಜನಗಣತಿ ನಡೆಸಲು ತೊಂದರೆ ಇಲ್ಲ ಎಂದು ಅದು ತಿಳಿಸಿದೆ.
ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಿರುವ ಕೇರಳ ಸರ್ಕಾರ, ಈ ಭಯವನ್ನು ಹೋಗಲಾಡಿಸುವುದು ಮತ್ತು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವುದು ತನ್ನ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಹೇಳಿದೆ. ಆದರೆ ಜನಗಣತಿ ಪ್ರಕ್ರಿಯೆಗೆ ಸಹಕಾರ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಸಿಎಎ ವಿರುದ್ಧ ಕೇರಳ ಸರ್ಕಾರ: ವರದಿ ಕೇಳಿದ ರಾಜ್ಯಪಾಲ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ನಿರ್ಧಾರಗಳನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್ಜಿಐ) ಮತ್ತು ಕೇಂದ್ರ ಗೃಹ ಇಲಾಖೆ ಅಡಿಯಲ್ಲಿನ ಜನಗಣತಿ ಆಯುಕ್ತರಿಗೆ ತಿಳಿಸಲು ತೀರ್ಮಾನಿಸಲಾಯಿತು.
'ಎನ್ಪಿಆರ್ ಪ್ರಕ್ರಿಯೆಯು ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್ಆರ್ಸಿ) ಎಡೆಮಾಡಿಕೊಡುತ್ತದೆ. ಇದರಿಂದಾಗಿ ಜನರಲ್ಲಿ ಈ ಕುರಿತು ಆತಂಕವಿದೆ. ಕೇರಳದಲ್ಲಿ ಎನ್ಪಿಆರ್ ಮತ್ತು ಎನ್ಆರ್ಸಿ ಜಾರಿಯಾದರೆ ಅದು ರಾಜ್ಯದ್ಯಾದ್ಯಂತ ಅರಾಜಕತೆ ಸೃಷ್ಟಿಸಲು ಕಾರಣವಾಗಲಿದೆ. ಈ ಅನುಭವ ಎನ್ಆರ್ಸಿ ಜಾರಿಯಾದ ರಾಜ್ಯದಲ್ಲಿ ಈಗಾಗಲೇ ಆಗಿದೆ' ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.