ಸರ್ಕಾರಕ್ಕೆ ಹಣ ಪಾವತಿ: ಪದ್ಮನಾಭ ದೇವಸ್ಥಾನ ಸುಪ್ರೀಂಗೆ ಹೇಳಿದ್ದೇನು?
ತಿರುವನಂತಪುರಂ,ಫೆಬ್ರವರಿ 13: ಕೇರಳ ಸರ್ಕಾರಕ್ಕೆ ನೀಡಬೇಕಿದ್ದ 11.7 ಕೋಟಿ ರೂ ಹಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪದ್ಮನಾಭಸ್ವಾಮಿ ಆಡಳಿತ ಮಂಡಳಿ ತಿಳಿಸಿದೆ.
ಭದ್ರತೆ ಮತ್ತು ನಿರ್ವಹಣೆ ಸಂಬಂಧಿತ ವೆಚ್ಚವಾಗಿ ಸುಮಾರು 11.7 ಕೋಟಿ ರೂ.ಗಳನ್ನು ಕೇರಳ ಸರಕಾರಕ್ಕೆ ಪಾವತಿಸಲು ಕೊರೊನಾದಿಂದಾಗಿ ಕಾರಣದಿಂದ ಸಾಧ್ಯವಾಗುತ್ತಿಲ್ಲ ಎಂದು ಕೇರಳದ ಪ್ರತಿಷ್ಠಿತ ಪದ್ಮನಾಭಸ್ವಾಮಿ ದೇವಸ್ಥಾನ ಆಡಳಿತ ಸಮಿತಿಯು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಲಾಕ್ಡೌನ್ ತೆರವಿನ ಬಳಿಕ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ ಸ್ಯಾನಿಟೈಸರ್, ಸಿಬ್ಬಂದಿ ಮತ್ತು ಭಕ್ತರ ಫೇಸ್ಮಾಸ್ಕ್ಗಾಗಿ ಬಹಳ ವೆಚ್ಚವಾಗುತ್ತಿದೆ. ಭಕ್ತರ ಸಂಖ್ಯೆ ಕಡಿಮೆಯಾಗಿರುವುದರಿಂದ ಆದಾಯವೂ ಕಡಿಮೆಯಾಗಿದೆ ಎಂದು ಸಮಿತಿ ವಿವರಿಸಿದೆ.
ದೇವಸ್ಥಾನದ ಖಾತೆಗಳ ಆಡಿಟ್ ಕುರಿತು ಬರುವ ಸೆಪ್ಟೆಂಬರ್ನಲ್ಲಿ ವಿಚಾರಣೆ ನಡೆಸುವುದಾಗಿಯೂ ಕೋರ್ಟ್ ಹೇಳಿದೆ. ತಿರುವಾಂಕೂರು ರಾಜಮನೆತನವು ದೇವಸ್ಥಾನದ ಆಡಳಿತ ವಹಿಸಿಕೊಳ್ಳುವ ತನಕ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ತಾತ್ಕಾಲಿಕವಾಗಿ ರಚಿಸುವ ಹೊಣೆಗಾರಿಕೆಯನ್ನು ವಹಿಸಿತ್ತು.
ಈ ಸಮಿತಿಯು ನ್ಯಾ. ಲಲಿತ್ ಅವರ ದ್ವಿಸದಸ್ಯ ಪೀಠದ ಎದುರು ಹಾಜರಾಗಿ,ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಾಮಾನ್ಯವಾಗಿ ಬರುತ್ತಿದ್ದ ದೇಣಿಗೆ, ಕಾಣಿಕೆಗಳು ಬಹಳ ದೊಡ್ಡ ಪ್ರಮಾಣದಲ್ಲಿ ಕಡಿತಗೊಂಡಿವೆ. ಹಾಗಾಗಿ ಸರ್ಕಾರಕ್ಕೆ ನೀಡಬೇಕಿರುವ ವೆಚ್ಚ ಪಾವತಿಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿತು.